ಸಿಂಧೂ ನದಿ ನೀರು ಬೇರೆಡೆ ತಿರುಗಿಸಲು ಸಿದ್ಧತೆ; ಜಮ್ಮು ಕಾಶ್ಮೀರದಲ್ಲಿ 4 ಜಲವಿದ್ಯುತ್ ಯೋಜನೆಗಳಿಗೆ ಸರ್ಕಾರ ಅನುಮೋದನೆ
ಉಗ್ರರ ಬೆನ್ನಿಗೆ ನಿಂತು ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಮಾಡಿಕೊಂಡಿದ್ದ ಹಲವು ದಶಕಗಳ ಹಿಂದಿನ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತ್ತು. ಆ ಸಿಂಧೂ ನದಿ ನೀರನ್ನು ಬೇರೆಡೆ ತಿರುಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಮೂಲಕ ಸಿಂಧೂ ನದಿ ವ್ಯವಸ್ಥೆಯಿಂದ ನೀರನ್ನು ಬೇರೆಡೆಗೆ ತಿರುಗಿಸಲಿದೆ.

ನವದೆಹಲಿ, ಮೇ 6: ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ (Sindhu River Agreement) ರದ್ದಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಐದು ದೊಡ್ಡ ಜಲವಿದ್ಯುತ್ ಸ್ಥಾವರಗಳಲ್ಲಿ ನಾಲ್ಕು ಪುನರಾರಂಭಗೊಂಡಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಭಾರತ ಸರ್ಕಾರವು ಇತ್ತೀಚೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇಂಧನ ಮತ್ತು ಕಾರ್ಯತಂತ್ರದ ನೀರಿನ ಬಳಕೆಗೆ ದೊಡ್ಡ ಒತ್ತು ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಗಿತಗೊಂಡಿರುವ 5 ಪ್ರಮುಖ ಜಲವಿದ್ಯುತ್ ಯೋಜನೆಗಳನ್ನು ಮೋದಿ ಸರ್ಕಾರ ಮತ್ತೆ ಆರಂಭ ಮಾಡಲಿದೆ. ಅದರಲ್ಲಿ 4 ಯೋಜನೆಗಳಿಗೆ ಗ್ರೀನ್ ಸಿಗ್ನಲ್ ದೊರೆತಿದೆ. ಇನ್ನೂ ಒಂದು ಯೋಜನೆ ಕೂಡ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆಯಿದೆ.
ಮೋದಿ ಸರ್ಕಾರದಿಂದ ಅನುಮೋದನೆ ದೊರೆತ ಯೋಜನೆಗಳು:
•ಪಕಲ್ ದುಲ್ – 1000 ಮೆಗಾವ್ಯಾಟ್
•ರಾಟಲ್ – 850 ಮೆಗಾವ್ಯಾಟ್
•ಬರ್ಸರ್ – 800 ಮೆಗಾವ್ಯಾಟ್
•ಕಿರು – 624 ಮೆಗಾವ್ಯಾಟ್
ಪರಿಶೀಲನೆಯಲ್ಲಿರುವ ಯೋಜನೆ:
•ಕೀರ್ತಾಯಿ I ಮತ್ತು II – 1320 ಮೆಗಾವ್ಯಾಟ್
ಇದನ್ನೂ ಓದಿ: Indus Water Treaty: ಪಾಕಿಸ್ತಾನಕ್ಕೆ ಭಾರತದ ಶಾಕ್; ಏನಿದು ಸಿಂಧೂ ಜಲ ಒಪ್ಪಂದ?
ಈ ಯೋಜನೆಗಳಿಂದ ಏನು ಪ್ರಯೋಜನ?:
ಈ 5 ಜಲವಿದ್ಯುತ್ ಯೋಜನೆಗಳು ಆರಂಭವಾದರೆ ಜಮ್ಮು ಕಾಶ್ಮೀರಕ್ಕೆ ಮಾತ್ರವಲ್ಲದೆ ಬೇರೆ ರಾಜ್ಯಗಳಿಗೂ ಪ್ರಯೋಜನಗಳಿವೆ. ಸಿಂಧೂ ನದಿ ವ್ಯವಸ್ಥೆಯಿಂದ ನೀರನ್ನು ಈಗ ಬೇರೆಡೆಗೆ ತಿರುಗಿಸಲಾಗುವುದು. ಇದು ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ನೇರ ಪ್ರಯೋಜನವನ್ನು ನೀಡುತ್ತದೆ. ಭಾರತದ ವಿದ್ಯುತ್ ಸಾಮರ್ಥ್ಯ, ನೀರಿನ ಸುರಕ್ಷತೆ ಮತ್ತು ಕಾರ್ಯತಂತ್ರದ ಹತೋಟಿಗೆ ಭಾರಿ ಉತ್ತೇಜನ ನೀಡುತ್ತದೆ.
ಕಳೆದ ತಿಂಗಳು ಕಾಶ್ಮೀರದಲ್ಲಿ ನಡೆದ ಮಾರಕ ದಾಳಿಯ ನಂತರ 1960ರ ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿತ್ತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಕ್ರಮದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಜಲವಿದ್ಯುತ್ ಯೋಜನೆಗಳನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ ಚೆನಾಬ್ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಕನಿಷ್ಠ ಎರಡು ಸ್ಥಾವರಗಳಾದ ಪಕಲ್ ದುಲ್ ಮತ್ತು ಕಿರುವನ್ನು ಮುಂದಿನ ವರ್ಷದ ವೇಳೆಗೆ ಪುನರ್ ಆರಂಭಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪಕಲ್ ದುಲ್ ಮತ್ತು ಕಿರು ಸೇರಿದಂತೆ 5 ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುತ್ತಿರುವ ಗುತ್ತಿಗೆದಾರರಿಗೆ ವಿದ್ಯುತ್ ಸಚಿವಾಲಯವು ಸಮನ್ಸ್ ಜಾರಿ ಮಾಡಿದೆ. ವಿಳಂಬ ಮಾಡದಂತೆ ಸೂಚಿಸಿದೆ.
ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ರದ್ದು; ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
3 ವರ್ಷಗಳು, 5 ಜಲ ಯೋಜನೆಗಳು:
1,000 ಮೆಗಾವ್ಯಾಟ್ ಪಕಲ್ ದುಲ್ ಯೋಜನೆಯು ಜಮ್ಮು ಮತ್ತು ಕಾಶ್ಮೀರ, ಲಡಾಖ್ನಲ್ಲಿ ಅತಿದೊಡ್ಡ ಜಲವಿದ್ಯುತ್ ಯೋಜನೆ ಆಗಿರುತ್ತದೆ. ಪ್ರಸ್ತುತ, ಬಾಗ್ಲಿಹಾರ್ 900 ಮೆಗಾವ್ಯಾಟ್ ಸಾಮರ್ಥ್ಯವಿರುವ ಈ ಪ್ರದೇಶದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ. ಪಕಲ್ ದುಲ್ ಮತ್ತು ಕಿರು ಎರಡನ್ನೂ 2027ರ ಎರಡನೇ ತ್ರೈಮಾಸಿಕದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಪರ್ನೈ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಯನ್ನು 2028ರ ಎರಡನೇ ಮತ್ತು ಮೂರನೇ ತ್ರೈಮಾಸಿಕಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಜೇಲಂ ನದಿಯ ಸುರಾನ್ ಉಪನದಿಯಲ್ಲಿರುವ ಪರ್ನೈ ಒಂದು ಸಣ್ಣ 38 ಮೆಗಾವ್ಯಾಟ್ ಯೋಜನೆಯಾಗಿದ್ದು, ಇದನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿದ್ಯುತ್ ಅಭಿವೃದ್ಧಿ ನಿಗಮ ಲಿಮಿಟೆಡ್ ನಿರ್ವಹಿಸುತ್ತಿದೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ವಿದ್ಯುತ್ ಸಚಿವಾಲಯವು ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ.
ಚೆನಾಬ್ನಲ್ಲಿರುವ 850 ಮೆಗಾವ್ಯಾಟ್ ರಾಟ್ಲೆ ವಿದ್ಯುತ್ ಸ್ಥಾವರವು ಜಮ್ಮು ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ 5 ಯೋಜನೆಗಳಲ್ಲಿ ಕಾರ್ಯಾರಂಭ ಮಾಡಲಿರುವ ಕೊನೆಯ ಯೋಜನೆಯಾಗಿದೆ. ಇದು 2029ರ ಮೂರನೇ ತ್ರೈಮಾಸಿಕದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ