Bharat Bandh ಭಾರತ್ ಬಂದ್ ಯಶಸ್ವಿಯಾಗಿದೆ ಎಂದ ಟಿಕಾಯತ್; ವಿವಿಧ ರಾಜ್ಯಗಳಲ್ಲಿನ ಪ್ರತಿಕ್ರಿಯೆ ಹೀಗಿದೆ

TV9 Digital Desk

| Edited By: Rashmi Kallakatta

Updated on:Sep 27, 2021 | 8:05 PM

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೂರು ಕೃಷಿ ಕಾನೂನುಗಳಿಗೆ ನೀಡಿದ ಸಮ್ಮತಿಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ಸೋಮವಾರ (ಸೆಪ್ಟೆಂಬರ್ 27) ಬಂದ್ ಆಯೋಜಿಸಲಾಗಿದೆ. ಭಾರತ್ ಬಂದ್‌ಗೆ " ನಿರೀಕ್ಷೆಗೂ ಮೀರಿದ ಅಭೂತಪೂರ್ವ ಪ್ರತಿಕ್ರಿಯೆ" ಬಂದಿದೆ ಎಂದು ಎಸ್‌ಎಂಕೆ ಹೇಳಿದೆ

Bharat Bandh ಭಾರತ್ ಬಂದ್ ಯಶಸ್ವಿಯಾಗಿದೆ ಎಂದ ಟಿಕಾಯತ್; ವಿವಿಧ ರಾಜ್ಯಗಳಲ್ಲಿನ ಪ್ರತಿಕ್ರಿಯೆ ಹೀಗಿದೆ
ಅಮೃತಸರದಲ್ಲಿ ಭಾರತ್ ಬಂದ್ ವೇಳೆ ಕಾಣಿಸಿದ ದೃಶ್ಯ


ದೆಹಲಿ: ಸಂಜೆ 4 ಗಂಟೆಗೆ ಕೊನೆಗೊಂಡ 10 ಗಂಟೆಗಳ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಪ್ರತಿಭಟನಾ ನಿರತ ರೈತರು ಸೋಮವಾರ ಹೇಳಿದರು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತದಾದ್ಯಂತ ಬಂದ್​​ಗೆ ಕರೆ ನೀಡಿತ್ತು. ನಮ್ಮ ‘ಭಾರತ್ ಬಂದ್’ ಯಶಸ್ವಿಯಾಯಿತು. ನಮಗೆ ರೈತರ ಸಂಪೂರ್ಣ ಬೆಂಬಲವಿತ್ತು. ಜನರ ಓಡಾಟಕ್ಕೆ ತೊಂದರೆಯಾಗುವಂತೆ ನಾವು ಎಲ್ಲವನ್ನೂ ಮುಚ್ಚಲು ಸಾಧ್ಯವಿಲ್ಲ. ನಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಸುಮಾರು 40 ಒಕ್ಕೂಟಗಳ ಸಂಘಟನೆಯಾದ ಎಸ್‌ಕೆಎಂ ಕರೆ ನೀಡಿರುವ ಬಂದ್‌ನಲ್ಲಿ ಬಿಕೆಯು ಕೂಡ ಸೇರಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೂರು ಕೃಷಿ ಕಾನೂನುಗಳಿಗೆ ನೀಡಿದ ಸಮ್ಮತಿಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ಸೋಮವಾರ (ಸೆಪ್ಟೆಂಬರ್ 27) ಬಂದ್ ಆಯೋಜಿಸಲಾಗಿದೆ. ಭಾರತ್ ಬಂದ್‌ಗೆ ” ನಿರೀಕ್ಷೆಗೂ ಮೀರಿದ ಅಭೂತಪೂರ್ವ ಪ್ರತಿಕ್ರಿಯೆ” ಬಂದಿದೆ ಎಂದು ಎಸ್‌ಎಂಕೆ ಹೇಳಿದೆ. ಅನೇಕ ಎನ್ ಡಿಎ ಅಲ್ಲದ ಪಕ್ಷಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬೆಂಬಲವನ್ನು ನೀಡಿದ್ದವು.

ಹಲವು ರಾಜ್ಯಗಳಲ್ಲಿ ಟ್ರಾಫಿಕ್ ಸಂಚಾರದಲ್ಲಿ ವ್ಯತ್ಯಯ ಉಂಟಾದ ಬಗ್ಗೆ ವರದಿಗಳು ಬಂದಿದ್ದರೆ, ಕೆಲವರು ಬಂದ್ ಪರಿಣಾಮವಿಲ್ಲ ಎಂದು ಹೇಳಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ದೆಹಲಿ-ಎನ್​​ಸಿಆರ್
ಭಾರತ್ ಬಂದ್ ದೆಹಲಿ ಮತ್ತು ನೆರೆಯ ರಾಜ್ಯಗಳಾದ ಹರ್ಯಾಣ ಮತ್ತು ಉತ್ತರ ಪ್ರದೇಶಗಳ ನಡುವಿನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತು. ಗಾಜಿಪುರ ಗಡಿ ಮತ್ತು ಧನ್ಸಾ ಗಡಿಯಲ್ಲಿನ ಸಂಚಾರದ ಮೇಲೆ ಪರಿಣಾಮ ಬೀರಿತು. ದೆಹಲಿ ಸಂಚಾರ ಪೊಲೀಸರು ದೆಹಲಿ-ಉತ್ತರ ಪ್ರದೇಶ ಗಾಜಿಪುರ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿತ್ತು.

ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ವಾಹನಗಳನ್ನು ದೆಹಲಿ ಪೊಲೀಸರು ಮತ್ತು ಅರೆಸೇನಾಪಡೆ ಯೋಧರು ತಪಾಸಣೆ ನಡೆಸುತ್ತಿದ್ದಂತೆ ಗುರುಗ್ರಾಮ್-ದೆಹಲಿ ಗಡಿಯಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿದೆ. ದೆಹಲಿ ನೋಯ್ಡಾ ಡೈರೆಕ್ಟ್ (ಡಿಎನ್‌ಡಿ) ಫ್ಲೈವೇ ಕೂಡ ಭಾರೀ ಸಂಚಾರ ದಟ್ಟಣೆಗೆ ಸಾಕ್ಷಿಯಾಯಿತು.

ಪಂಜಾಬ್ ಮತ್ತು ಹರ್ಯಾಣ
ರೈತರು ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪ್ರಮುಖ ಸಂಪರ್ಕ ರಸ್ತೆಗಳನ್ನು ನಿರ್ಬಂಧಿಸಿದರು, ಇದರಿಂದಾಗಿ ಪೊಲೀಸರು ಹಲವಾರು ಸ್ಥಳಗಳಲ್ಲಿ ಸಂಚಾರವನ್ನು ಬೇರೆಡೆಗೆ ತಿರುಗಿಸಬೇಕಾಯಿತು.  ಸಾರಿಗೆ ಸೇವೆಗಳು ಪಂಜಾಬ್ ನಲ್ಲಿ ಸಂಪೂರ್ಣ ಬಂದ್ ಆಗಿತ್ತು. ಹೆಚ್ಚಿನ ಸ್ಥಳಗಳಲ್ಲಿ ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು. ಅಮೃತಸರ, ರೂಪನಗರ, ಜಲಂಧರ್, ಪಠಾಣ್ ಕೋಟ್, ಸಂಗ್ರೂರ್, ಮೊಹಾಲಿ, ಲುಧಿಯಾನ, ಫಿರೋಜ್ ಪುರ್, ಬಟಿಂಡಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಪ್ರತಿಭಟನಾಕಾರರು ತಡೆದರು.

ಹರ್ಯಾಣದ ಕುರುಕ್ಷೇತ್ರದ ಶಹಾಬಾದ್ ನಲ್ಲಿ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಪ್ರತಿಭಟನಾಕಾರರು ಸಿರ್ಸಾ, ಫತೇಹಾಬಾದ್, ಪಾಣಿಪತ್, ಹಿಸಾರ್, ಚರ್ಖಿ ದಾದ್ರಿ, ಕರ್ನಾಲ್, ಕೈತಾಲ್, ರೋಹ್ಟಕ್, ಜಜ್ಜರ್ ಮತ್ತು ಪಂಚಕುಲ ಜಿಲ್ಲೆಗಳಲ್ಲಿ ಹೆದ್ದಾರಿಗಳನ್ನು ನಿರ್ಬಂಧಿಸಿದರು.

ಜಮ್ಮು ಮತ್ತು ಕಾಶ್ಮೀರ
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಸೋಮವಾರ ಜಮ್ಮು ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಮತ್ತು ರ್ಯಾಲಿಗಳನ್ನು ನಡೆಸಲಾಯಿತು. ಸಿಪಿಐ (ಎಂ) ನಾಯಕ ಎಂ ವೈ ತಾರಿಗಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮತ್ತು ರೈತರು ರ್ಯಾಲಿ ನಡೆಸಿದರು ಮತ್ತು ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತರು, ಇದು ಸಂಚಾರಕ್ಕೆ ಅಡ್ಡಿಯಾಯಿತು.
ಶ್ರೀನಗರದಲ್ಲಿ ಇದೇ ರೀತಿಯ ಪ್ರದರ್ಶನವನ್ನು ನಡೆಸಲಾಯಿತು, ಅಲ್ಲಿ ಕೆಲವು ರೈತ ಮುಖಂಡರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೋರಿದರು.

ಗುಜರಾತ್
ಭಾರತ್ ಬಂದ್‌ನ 10 ಗಂಟೆಗಳ ಅವಧಿಯಲ್ಲಿ ಗುಜರಾತ್ ಸೋಮವಾರ ಶಾಂತಿಯುತವಾಗಿತ್ತು. ಆದಾಗ್ಯೂ, ಸೂರತ್-ಮುಂಬೈ ಮತ್ತು ಅಹಮದಾಬಾದ್-ರಾಜ್‌ಕೋಟ್ ಹೆದ್ದಾರಿಗಳನ್ನು ಸಂಕ್ಷಿಪ್ತವಾಗಿ ನಿರ್ಬಂಧಿಸಲಾಗಿದೆ, ಇದು ಕೆಲವು ಪ್ರದೇಶಗಳಲ್ಲಿ ಸಂಚಾರ ಸಂಚಾರದ ಮೇಲೆ ಪರಿಣಾಮ ಬೀರಿತು. ಪೊಲೀಸರು ಸುಮಾರು 25 ಜನರನ್ನು ಬಂಧಿಸಿದ್ದಾರೆ ಮತ್ತು ರಸ್ತೆಯಲ್ಲಿ ಟ್ರಾಫಿಕ್ ಸಂಚಾರವನ್ನು ಪುನಃಸ್ಥಾಪಿಸಿದರು ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಹಾರಾಷ್ಟ್ರ
ವಾಣಿಜ್ಯ ಸಂಸ್ಥೆಗಳು ಮತ್ತು ಸ್ಥಳೀಯ ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಸಾಮಾನ್ಯ ಜೀವನವು ಸೋಮವಾರ ಮಹಾರಾಷ್ಟ್ರದಾದ್ಯಂತ ಯಾವುದೇ ಪರಿಣಾಮ ಬೀರಲಿಲ್ಲ. ಪುಣೆಯಲ್ಲಿ ಎಪಿಎಂಸಿ ಮುಚ್ಚಿತ್ತು. ರೈತರ ಪರ ಸಂಘಟನೆಯು ನಾಗ್ಪುರದಲ್ಲಿ ರಸ್ತೆ ತಡೆ ನಡೆಸಿತು. ಕೆಲವು ಪ್ರತಿಭಟನಾಕಾರರನ್ನು ಕೆಲವೆಡೆ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು. ಮುಂಬೈನಲ್ಲಿಕಾಂಗ್ರೆಸ್ ಕಾರ್ಯಕರ್ತರು, ಪ್ಲೆಕಾರ್ಡ್‌ಗಳನ್ನು ಹಿಡಿದುಕೊಂಡು, ಅಂಧೇರಿ ಮತ್ತು ಜೋಗೇಶ್ವರಿಯಂತಹ ಕೆಲವು ಸ್ಥಳಗಳಲ್ಲಿ ಒಟ್ಟುಗೂಡಿದರು ಮತ್ತು ಕೃಷಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು, ಆದರೆ ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಎಂದಿನಂತೆ ತೆರೆದಿದ್ದವು. ಟ್ರಾಫಿಕ್ ಸಂಚಾರವು ಸಾಮಾನ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಸ್ಸಾಂ
ಸಾರ್ವಜನಿಕ ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಮಾರುಕಟ್ಟೆಗಳು ತೆರೆದಿದ್ದವು ಮತ್ತು ಕಚೇರಿಗಳು ಸಾಮಾನ್ಯ ಹಾಜರಾತಿಯನ್ನು ನೋಂದಾಯಿಸಿದ್ದರಿಂದ ಅಸ್ಸಾಂನಲ್ಲಿ  ಸೋಮವಾರ ಭಾರತ್ ಬಂದ್  ಯಾವುದೇ ಪರಿಣಾಮ ಬೀರಲಿಲ್ಲ. ಬಂದ್‌ಗೆ ಬೆಂಬಲ ನೀಡಿದ ವಿರೋಧ ಪಕ್ಷ ಕಾಂಗ್ರೆಸ್ ಯಾವುದೇ ಪ್ರತಿಭಟನೆ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಗುವಾಹಟಿಯಲ್ಲಿ, ಎಸ್‌ಯುಸಿಐ (ಕಮ್ಯುನಿಸ್ಟ್) ಸದಸ್ಯರು ಬೆಳಿಗ್ಗೆ ಪ್ರತಿಭಟನೆ ರ್ಯಾಲಿ ನಡೆಸಿದರು.

ಗೋವಾ
ಗೋವಾದಲ್ಲಿ ಸೋಮವಾರ ಭಾರತ್ ಬಂದ್ ನಿಂದ ಯಾವುದೇ ಪರಿಣಾಮ ಬೀರಿಲ್ಲ . ಸಾರ್ವಜನಿಕ ಸಾರಿಗೆ, ಬ್ಯಾಂಕುಗಳು, ರೈಲುಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಸೇವೆಗಳು ಬಂದ್ ಅವಧಿಯಲ್ಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಬಂದ್ ಕರೆಗೆ ಬೆಂಬಲ ನೀಡಿತು. “ನಾವು ಯಾವುದೇ ಕೆಲಸವನ್ನು ನಿಲ್ಲಿಸಿಲ್ಲ, ಆದರೆ ಎಲ್ಲಾ ಕೈಗಾರಿಕಾ ಎಸ್ಟೇಟ್‌ಗಳಲ್ಲಿನ ಕಾರ್ಮಿಕರು ಕೆಲಸವನ್ನು ಪುನರಾರಂಭಿಸುವ ಮೊದಲು ತಮ್ಮ ತಮ್ಮ ಪ್ರದೇಶಗಳಲ್ಲಿ ಅರ್ಧ ಗಂಟೆ ಪ್ರತಿಭಟನೆ ನಡೆಸಿದರು” ಎಂದು ಎಐಟಿಯುಸಿ ಗೋವಾ ಘಟಕದ ಕಾರ್ಯದರ್ಶಿ ಸುಹಾಸ್ ನಾಯಕ್ ಹೇಳಿದರು.

ಪಶ್ಚಿಮ ಬಂಗಾಳ
ಭಾರತ್ ಬಂದ್ ಬೆಂಬಲಿಸಿ ಎಡಪಂಥೀಯ ಕಾರ್ಯಕರ್ತರು ಸೋಮವಾರ ಪಶ್ಚಿಮ ಬಂಗಾಳದಾದ್ಯಂತ ರಸ್ತೆಗಳು ಮತ್ತು ರೈಲ್ವೆ ಹಳಿಗಳನ್ನು ತಡೆದರು. ಕೊವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಜಲ್ಪೈಗುರಿ, ಪಶ್ಚಿಮ ಮಿಡ್ನಾಪುರ, ಪೂರ್ವ ಮಿಡ್ನಾಪುರ, ಹೂಗ್ಲಿ ಮತ್ತು ಕೂಚ್‌ಬೆಹಾರ್‌ನ ಜಿಲ್ಲಾ ಕೇಂದ್ರಗಳು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳು ಮತ್ತು ನಗರಗಳಲ್ಲಿ ರಸ್ತೆ ತಡೆ ನಡೆಸಲಾಯಿತು.

ಆದಾಗ್ಯೂ, ರಾಜ್ಯದಲ್ಲಿ ಸಾಮಾನ್ಯ ಜೀವನವು ಹೆಚ್ಚಾಗಿ ಪರಿಣಾಮ ಬೀರಿಲ್ಲ. ಮಾರುಕಟ್ಟೆಗಳು ಮತ್ತು ಅಂಗಡಿಗಳನ್ನು ಎಂದಿನಂತೆ ತೆರೆಯಲಾಯಿತು. ಆದರೆ ಸಾರ್ವಜನಿಕ ಸಾರಿಗೆಯು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು.

ತಮಿಳುನಾಡು, ಛತ್ತೀಸ್‌ಗಢ, ಕೇರಳ, ಪಂಜಾಬ್, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಬಂದ್‌ಗೆ ತಮ್ಮ ಬೆಂಬಲ ಸೂಚಿಸಿದ್ದು ಈ ರಾಜ್ಯಗಳಲ್ಲಿ ಪ್ರತಿಭಟನೆಯ ಪರಿಣಾಮ ಕಂಡುಬಂದಿದೆ.

ಕೇರಳ
ಭಾರತ್ ಬಂದ್ ಕರೆಗೆ ಬೆಂಬಲ ನೀಡಲು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮತ್ತು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವು ಟ್ರೇಡ್ ಯೂನಿಯನ್ ಗಳ ಪ್ರತಿಭಟನಾಕಾರರು ಕೇರಳದ ಕೊಚ್ಚಿಯಲ್ಲಿ ಮಾನವ ಸರಪಳಿ ರಚಿಸಿದರು.
ಕೇರಳದ ತಿರುವನಂತಪುರಂನಲ್ಲಿ ರಸ್ತೆಗಳು ನಿರ್ಜನವಾಗಿತ್ತು. ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ ಸೇರಿದ ಟ್ರೇಡ್ ಯೂನಿಯನ್‌ಗಳು ಭಾರತ್ ಬಂದ್ ಕರೆಗೆ ಬೆಂಬಲ ನೀಡಿರುವುದರಿಂದ ಅಂಗಡಿಗಳನ್ನು ಮುಚ್ಚಲಾಗಿದೆ.

ರೈಲ್ವೆ ಸಂಚಾರ
ಬಂದ್‌ನಿಂದ ರೈಲ್ವೆ ಸೇವೆಗಳು ಬಾಧಿತವಾಗಿದ್ದು, ಸುಮಾರು 25 ರೈಲುಗಳು ವಿಳಂಬವಾಗಿವೆ ಅಥವಾ ಬೇರೆಡೆಗೆ ತಿರುಗಿವೆ. ಉತ್ತರ ರೈಲ್ವೆಯ ಪ್ರಕಾರ ದೆಹಲಿ, ಅಂಬಾಲಾ ಮತ್ತು ಫಿರೋಜ್‌ಪುರ ವಿಭಾಗಗಳಲ್ಲಿನ ರೈಲು ಕಾರ್ಯಾಚರಣೆಗಳು ಜನರು ಹಳಿಗಳ ಮೇಲೆ ಕುಳಿತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

ಇದನ್ನೂ ಓದಿ:  Bharat Bandh: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು; ಪೋಸ್ಟ್​ಮಾರ್ಟಮ್​ ನಂತರ ಮಾಹಿತಿ ನೀಡುತ್ತೇವೆಂದ ಪೊಲೀಸರು

ಇದನ್ನೂ ಓದಿ: Bharat Bandh: ಕೇಂದ್ರದ ಕೃಷಿ ಕಾನೂನು ವಿರುದ್ಧ ಭಾರತ್ ಬಂದ್; ರೈತರ ಪ್ರತಿಭಟನೆಯ ಫೋಟೊಗಳು ಇಲ್ಲಿವೆ

(Bharat Bandh successful says Rakesh Tikait Here impact of Bandh in various states)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada