‘ವಂದೇ ಮಾತರಂ’ ಗೌರವ ರಕ್ಷಣೆಗೆ ಬಿಜೆಪಿ ನಿರ್ಣಯ; 2 ಚರಣ ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ತೀವ್ರ ಖಂಡನೆ

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ'ನ ಮೊದಲ 2 ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ತೆಗೆದುಕೊಂಡ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಇಂದು ನಿರ್ಣಯವೊಂದನ್ನು ಅಂಗೀಕರಿಸಿದೆ. ರಾಷ್ಟ್ರೀಯ ಗೀತೆಯ ಸಂಪೂರ್ಣ ಆವೃತ್ತಿಯ ಗೌರವವನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ನೂತನವಾಗಿ ನೇಮಕಗೊಂಡ ರಾಷ್ಟ್ರೀಯ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದರು.

ವಂದೇ ಮಾತರಂ ಗೌರವ ರಕ್ಷಣೆಗೆ ಬಿಜೆಪಿ ನಿರ್ಣಯ; 2 ಚರಣ ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ತೀವ್ರ ಖಂಡನೆ
Nitin Nabin And Bjp Leaders
Image Credit source: PTI

Updated on: Aug 22, 2026 | 3:12 PM

ನವದೆಹಲಿ, ಆಗಸ್ಟ್ 22: ‘ವಂದೇ ಮಾತರಂ’ (Vande Mataram) ರಾಷ್ಟ್ರೀಯ ಗೀತೆಯ ಐತಿಹಾಸಿಕ ಪರಂಪರೆಯನ್ನು ಗೌರವಿಸಲು ಮತ್ತು ರಕ್ಷಿಸಲು ಬಿಜೆಪಿ ವಿಶೇಷ ನಿರ್ಣಯವನ್ನು ಅಂಗೀಕರಿಸಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ತನ್ನ ಕಾರ್ಯಕ್ರಮಗಳಲ್ಲಿ ಈ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ವಂದೇ ಮಾತರಂ ಗೀತೆಯನ್ನು ಕೋಮುವಾದಿ ಒತ್ತಡ, ರಾಜಕೀಯ ಓಲೈಕೆ ಅಥವಾ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಲಿ ನೀಡುವ ಯಾವುದೇ ಪ್ರಯತ್ನವನ್ನು ತಿರಸ್ಕರಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. ಈ ಗೀತೆಯ ನೈಜ ಇತಿಹಾಸ, ಭಾವಾರ್ಥ ಮತ್ತು ರಾಷ್ಟ್ರೀಯ ಮಹತ್ವವನ್ನು ದೇಶದ ಪ್ರತಿಯೊಂದು ಮೂಲೆಗೂ ತಲುಪಿಸಲು ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ಬೃಹತ್ ಅಭಿಯಾನವನ್ನು ನಡೆಸಲಿದೆ.

ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಆರಂಭವಾಗುವ ಮುನ್ನ ಬಿಜೆಪಿ ನಾಯಕರು ರಾಷ್ಟ್ರೀಯ ಗೀತೆಯಾದ ವಂದೇ ಮಾತರಂನ 6 ಚರಣಗಳನ್ನು ಕೂಡ ಗಾಯನ ಮಾಡಿದರು.


‘ವಂದೇ ಮಾತರಂ’ ಕುರಿತು ಬಿಜೆಪಿಯ ನಿರ್ಣಯ:

6 ಚರಣಗಳನ್ನು ಒಳಗೊಂಡಿರುವ ಸಂಪೂರ್ಣ ರಾಷ್ಟ್ರೀಯ ಗೀತೆಯು ಭಾರತದ ರಾಷ್ಟ್ರೀಯ ಪ್ರಜ್ಞೆ ಮತ್ತು ಸ್ವಾತಂತ್ರ್ಯ ಹೋರಾಟದ ಭವ್ಯ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಬಿಜೆಪಿ ಹೇಳಿದೆ. ರಾಷ್ಟ್ರೀಯ ಗೀತೆಯನ್ನು ಕೋಮುವಾದಿ ಒತ್ತಡಗಳು, ರಾಜಕೀಯ ಓಲೈಕೆ ಅಥವಾ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಒಳಪಡಿಸುವ ಎಲ್ಲ ರೀತಿಯ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುವುದಾಗಿ ಬಿಜೆಪಿ ಪ್ರಮಾಣ ಮಾಡಿದೆ.

ಇದನ್ನೂ ಓದಿ: 1937 ರಂತೆ ಇಂದಿಗೂ ಒಡೆದು ಆಳುವ ನೀತಿ: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದ ಅಮಿತ್ ಶಾ

ಅಲ್ಲದೆ, ವಂದೇ ಮಾತರಂ ಗೀತೆಯ ಇತಿಹಾಸ, ಮಹತ್ವ ಮತ್ತು ಪರಂಪರೆಯನ್ನು ವಿಶೇಷವಾಗಿ ಯುವ ಪೀಳಿಗೆಗೆ ತಲುಪಿಸಲು ಮತ್ತು ಅರಿವು ಮೂಡಿಸಲು ದೇಶವ್ಯಾಪಿ ಅಭಿಯಾನವನ್ನು ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಮಹಾತ್ಮ ಗಾಂಧಿ ವಂದೇ ಮಾತರಂ ಗೀತೆಯನ್ನು “ಅತ್ಯಂತ ಶುದ್ಧ ರಾಷ್ಟ್ರೀಯ ಭಾವನೆಯುಳ್ಳ ಸಾಮ್ರಾಜ್ಯಶಾಹಿ ವಿರೋಧಿ ಘೋಷಣೆ” ಎಂದು ಬಣ್ಣಿಸಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಬಿಜೆಪಿ, ಈ ಸಂದೇಶವನ್ನು ದೇಶಾದ್ಯಂತ ಪಸರಿಸುವ ಯೋಜನೆಗಳನ್ನು ಹಂಚಿಕೊಂಡಿದೆ.


“ವಂದೇ ಮಾತರಂ ಗೀತೆಯ ಪದಗಳು ಎಷ್ಟು ಶಕ್ತಿಶಾಲಿಯಾಗಿದ್ದವೆಂದರೆ, ಅಂದಿನ ಬ್ರಿಟಿಷ್ ಸಾಮ್ರಾಜ್ಯವೇ ಈ ಪದಗಳಿಗೆ ಬೆದರಿತ್ತು. ಈ ಗೀತೆಯು ದೇಶವಾಸಿಗಳಲ್ಲಿ ಪ್ರತಿರೋಧವನ್ನು ಜಾಗೃತಗೊಳಿಸಿದ್ದರಿಂದ ಬ್ರಿಟಿಷರು ಅದನ್ನು ಹತೋಟಿಯಲ್ಲಿಡಲು ಯತ್ನಿಸಿದರು. ಇದನ್ನು ಹಲವು ಪೀಳಿಗೆಗಳು ಸ್ವಾತಂತ್ರ್ಯದ ಮಂತ್ರ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿ ಅಳವಡಿಸಿಕೊಂಡವು. ಇಂತಹ ಭವ್ಯ ಪರಂಪರೆಯನ್ನು ವೋಟ್ ಬ್ಯಾಂಕ್ ರಾಜಕಾರಣದ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ‘ವಂದೇ ಮಾತರಂ’ ನಿಯಮಾವಳಿಗೆ ಕಾಂಗ್ರೆಸ್ ಅಪಸ್ವರ; 2 ಚರಣ ಮಾತ್ರ ಹಾಡಲು ನಿರ್ಧಾರ

ಕಾಂಗ್ರೆಸ್ ನಿರ್ಧಾರಕ್ಕೆ ಬಿಜೆಪಿ ವಿರೋಧ:

ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಪಕ್ಷದ 1937ರ ನಿರ್ಣಯವನ್ನು ಉಲ್ಲೇಖಿಸಿ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯನ್ನು ಹಾಡಲು ನಿರ್ಧರಿಸಲಾಗಿತ್ತು. ಆದರೆ, ‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವು ಬಿಜೆಪಿಯ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ಪ್ರಸಾರವಾಗುತ್ತಿದ್ದಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾತುಕತೆಯಲ್ಲಿ ತೊಡಗಿದ್ದರು ಎಂದು ಬಿಜೆಪಿ ಆರೋಪಿಸಿತ್ತು ಹಾಗೂ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿತ್ತು.

ಸಿಡಬ್ಲ್ಯೂಸಿ ಸಭೆಯ ನಂತರ ಮಾತನಾಡಿದ್ದ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್, ವಂದೇ ಮಾತರಂ ಗೀತೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. 1937ರಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ತೆಗೆದುಕೊಂಡ ನಿರ್ಧಾರಗಳನ್ನೇ ಪಕ್ಷವು ಅನುಸರಿಸಲಿದೆ ಎಂದು ತಿಳಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us