AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಸರ್ಕಾರ ರಚನೆಗೆ ಸಾಕಷ್ಟು ಕಸರತ್ತು ನಡೆದಿತ್ತು. ಹಲವು ದಿನಗಳ ಕಸರತ್ತಿನ ಬಳಿಕ ಕೊನೆಗೂ ಮ್ಯಾಜಿಕ್ ಸಂಖ್ಯೆಗೆ ಬೇಕಿದ್ದ ಬೆಂಬಲ ಪಡೆದು ಮೈತ್ರಿ ಸರ್ಕಾರ ರಚನೆ ಮಾಡಿರುವ ವಿಜಯ್, ಇದೀಗ ವಿಧಾನಸಭೆಯಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯೊಂದಿಗೆ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ
ತಮಿಳುನಾಡು ಸಿಎಂ ಜೋಸೆಫ್ ವಿಜಯ್Image Credit source: tv9
ಗಣಪತಿ ಶರ್ಮಾ
|

Updated on:May 13, 2026 | 12:57 PM

Share

ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ಜೋಸೆಫ್ ವಿಜಯ್ (CM Joseph Vijay) ನಿರೀಕ್ಷೆಗೂ ಮೀರಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್​ನ ಐವರು ಶಾಸಕರು, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು ಶಾಸಕರು, ಸಿಪಿಐ(ಎಂ) ಇಬ್ಬರು, ಐಯುಎಂಎಲ್​ ಪಕ್ಷದ ಇಬ್ಬರು ಶಾಸಕರು ಶಾಸಕರು ಸೇರಿದಂತೆ ಒಟ್ಟು 144 ಜನ ಶಾಸಕರ ಬೆಂಬಲ ದೊರೆತಿದೆ. ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (Tamilaga Vettri Kazhagam) 107 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತಕ್ಕೆ 118 ಸ್ಥಾನಗಳು ಬೇಕಿರುವ ಕಾರಣ ಸರ್ಕಾರ ರಚನೆ ತುಸು ವಿಳಂಬವಾಗಿತ್ತು.

ಮುಖ್ಯಾಂಶಗಳು

  • ವಿಶ್ವಾಸಮತಯಾಚನೆ: ಸಿಎಂ ವಿಜಯ್​ಗೆ 144 ಶಾಸಕರ ಬೆಂಬಲದೊಂದಿಗೆ ಭರ್ಜರಿ ಜಯ
  • ದಳಪತಿ ವಿಜಯ್ ನೇತೃತ್ವದ ಟಿವಿಕೆ ಮೈತ್ರಿ ಸರ್ಕಾರ ಈಗ ಸುಭದ್ರ
  • ಎಐಎಡಿಎಂಕೆಯ 25 ಮಂದಿ ಬಂಡಾಯ ಶಾಸಕರಿಂದಲೂ ವಿಜಯ್ ಸರ್ಕಾರಕ್ಕೆ ಬೆಂಬಲ

ವಿಜಯ್ ವಿಶ್ವಾಸಮತ ಅಂಕಿಅಂಶ

  • ವಿಜಯ್ ಪರ – 144
  • ವಿಜಯ್ ವಿರುದ್ಧ – 22
  • ತಟಸ್ಥ – 5

ವಿಜಯ್​​ಗೆ ಯಾವೆಲ್ಲ ಪಕ್ಷಗಳ ಬೆಂಬಲ?

  • ಟಿವಿಕೆ – 105
  • ಎಐಎಡಿಎಂಕೆ (ಬಂಡಾಯ) – 25
  • ಕಾಂಗ್ರೆಸ್ – 5
  • ಎಡಪಕ್ಷಗಳು- 4
  • ವಿಸಿಕೆ – 2
  • ಐಯುಎಂಎಲ್ – 2
  • ಎಎಎಂಕೆ – 1
  • ಒಟ್ಟು – 144

ಎಐಎಡಿಎಂಕೆ ಬಂಡಾಯ ಶಾಸಕರಿಂದಲೂ ಬೆಂಬಲ

ಎಐಎಡಿಎಂಕೆಯ 25 ಮಂದಿ ಬಂಡಾಯ ಶಾಸಕರೂ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ವೇಲುಮಣಿ ಮತ್ತು ಷಣ್ಮುಗಂ ಶಾಸಕರು ನೇತೃತ್ವದ ಬಂಡಾಯ ಶಾಸಕರು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನಿಲುವನ್ನು ಧಿಕ್ಕರಿಸಿ ವಿಜಯ್ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಬೆಂಬಲಿಸಿದ ಶಾಸಕರಿಗೆ ವಿಜಯ್ ಧನ್ಯವಾದ: ದ್ವೇಷ ರಾಜಕಾರಣ ಮಾಡಲ್ಲವೆಂದು ಅಭಯ

ವಿಶ್ವಾಸಮತ ಗೆದ್ದ ನಂತರ ಮಾತನಾಡಿದ ಸಿಎಂ ವಿಜಯ್, ನಮ್ಮ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಎಲ್ಲಾ ಶಾಸಕರಿಗೂ ಧನ್ಯವಾದ. ನಮ್ಮದು ಮೈತ್ರಿಕೂಟ ಸರ್ಕಾರ. ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ನಾವು ಬದ್​ಧ. ನಮ್ಮ ಸರ್ಕಾರ ಯಾವಾಗಲೂ ಜನಪರವಾಗಿರುತ್ತದೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷ ರಾಜಕಾರಣ ಮಾಡಲ್ಲ. ಮತ ಹಾಕಿದವರು, ಹಾಕದಏ ಇರುವವರು ಎಂಬ ಭೇದ-ಭಾವ ಮಾಡಲ್ಲ. ಪೆರಿಯಾರ್​, ಕಾಮರಾಜ್​, ಅಂಬೇಡ್ಕರ್​​ ತತ್ವದಡಿ ಕೆಲಸ ಮಾಡುತ್ತೇವೆ ಎಂದರು.

ಜಾತಿ, ಧರ್ಮ ಎಂದು ಪರಿಗಣಿಸದೆ ಜನರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ತಮಿಳುನಾಡು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ವಿಜಯ್ ಹೇಳಿದರು.

ಟಿವಿಕೆ ಸರ್ಕಾರದ ವಿರುದ್ಧ ಉದಯನಿಧಿ ಆಕ್ರೋಶ

ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು, ವಿಶ್ವಾಸಮತ ಯಾಚನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ, ಕೇವಲ 1.72 ಕೋಟಿ ಜನರು ಟಿವಿಕೆಗೆ ಮತ ಹಾಕಿದ್ದಾರೆ. ಉಳಿದ ಶೇ 65 ಜನರು ಟಿವಿಕೆ ವಿರುದ್ಧ ಮತ ಹಾಕಿದ್ದಾರೆ. ಟಿವಿಕೆಗೆ ಮತ ಹಾಕಿದ ಜನರಿಗೂ ಈಗ ಜ್ಞಾನೋದಯವಾಗುತ್ತಿದೆ. 118 ರ ಬಹುಮತದ ಚಿಹ್ನೆಯನ್ನು ಹೊಂದಿರುವ ಪಕ್ಷ ಮಾತ್ರ ಸರ್ಕಾರ ರಚಿಸಬಹುದು. ಟಿವಿಕೆ ನಾಯಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಈಗ ಜನರನ್ನು ಭೇಟಿ ಮಾಡಿ ಧನ್ಯವಾದ ಹೇಳುವುದಕ್ಕೂ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ (ತಿರುಪತ್ತೂರು ಶಾಸಕ ಆರ್. ಸೀನಿವಾಸ ಸೇತುಪತಿ) ವಿಶ್ವಾಸಮತದಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿರುವುದರಿಂದ ಟಿವಿಕೆ ಈಗ ಕೇವಲ 106 ಸದಸ್ಯರನ್ನು ಹೊಂದಿದೆ. ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷಗಳಿಂದ ಬೆಂಬಲವನ್ನು ಟಿವಿಕೆ ಪಡೆದುಕೊಂಡಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ಇದನ್ನೂ ಓದಿ: ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

‘ಎಐಎಡಿಎಂಕೆ ಎರಡು ಭಾಗವಾಗಿದೆ. ಈ ರಾಜಕೀಯ ಬದಲಾವಣೆಯ ಹಿಂದೆ ಯಾವ ಲೆಕ್ಕಾಚಾರ ಇದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಹೆಸರಿಸಲು ಸಹ ನೀವು (ಟಿವಿಕೆ) ನಿರಾಕರಿಸಿದ್ದೀರಿ ಮತ್ತು ಅವರನ್ನು ‘ಇತರ ಪಕ್ಷಗಳು’ ಎಂದು ಮಾತ್ರ ಉಲ್ಲೇಖಿಸಿದ್ದೀರಿ. ಆದರೆ ಈಗ ನೀವು ಅದೇ ನಾಯಕರನ್ನು ಭೇಟಿಯಾಗುತ್ತಿದ್ದೀರಿ, ಮತ್ತು ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾವು ವಿಧಾನಸಭೆಯಿಂದ ಹೊರನಡೆಯುತ್ತಿದ್ದೇವೆ. ನಾವು ಹೊರನಡೆದ ನಂತರ, ನಿಮಗೆ ಬಹುಮತ ಸಿಗುತ್ತದೆ. ನಮ್ಮ ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ರಾಜಕೀಯಗೊಳಿಸಬೇಡಿ ಎಂದು ವಿನಂತಿಸುತ್ತೇನೆ’ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು. ನಂತರ ಡಿಎಂಕೆ ಶಾಸಕರು ಸಬಾತ್ಯಾಗ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Wed, 13 May 26

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More