
ನವದೆಹಲಿ, ಫೆಬ್ರವರಿ 23: ಕೋಚಿಂಗ್ ಸೆಂಟರ್ (Coaching center) ತೆರೆದು ಅಭ್ಯರ್ಥಿಗಳಿಗೆ ಸರಿಯಾಗಿ ಸ್ಪಂದಿಸದೆ ಇರುವಂಥ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಬಿಸಿ ಮುಟ್ಟಿಸಿದೆ. ವಂಚನೆಗೆ ಒಳಗಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೊರೆ ಹೋದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದೆ.
ಇತ್ತೀಚಿನ ದಿನಗಳಲ್ಲಿ ನಾಗರಿಕ ಸೇವೆ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣದ ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್) ತೆರೆದು ಶುಲ್ಕ ಪಾವತಿಸಿಕೊಂಡು ಬಳಿಕ ಸೀಟ್ ಇಲ್ಲವೆಂದು ವಂಚಿಸುವುದು ಮತ್ತು ಸೂಕ್ತ, ಸಮರ್ಪಕ ಅಭ್ಯಾಸ ಪರಿಕರ, ತರಗತಿ ನೀಡದೇ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇದ್ದವು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನ, ಸೂಚನೆಯಂತೆ ಸಚಿವಾಲಯವು, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ನೇರವಾಗಿ ದೂರು ಸಲ್ಲಿಸಲು ಅವಕಾಶ ಒದಗಿಸಿದ್ದು ಅಲ್ಲದೇ, ಅಂತಹ ದೂರುಗಳಿಗೆ ತಕ್ಷಣವೇ ಪರಿಹಾರ ಸಹ ಕಲ್ಪಿಸಿಕೊಟ್ಟಿದೆ.
ದೇಶದ ವಿವಿಧೆಡೆಯಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ NCH ಗೆ ದೂರು ಸಲ್ಲಿಸಿದ ನಾಗರಿಕ ಸೇವೆಗಳು, ಎಂಜಿನಿಯರಿಂಗ್ ಕೋರ್ಸ್ ಮತ್ತಿತರ ಕಾರ್ಯಕ್ರಮಗಳ 600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದೆ. ಶಿಕ್ಷಣ ಸೇವೆಯಲ್ಲಿ ನ್ಯೂನ್ಯತೆ ವೆಸಗಿದ ಕೋಚಿಂಗ್ ಸೆಂಟರ್ಗಳಿಂದಲೇ ಒಟ್ಟು 1.56 ಕೋಟಿ ರೂ. ಪರಿಹಾರ ರೂಪದಲ್ಲಿ ಮರುಪಾವತಿ ಮಾಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: Fact Check: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕತ್ತಿವರಸೆ ಮಾಡುತ್ತಿರುವುದು ನಿಜವೇ?: ವೈರಲ್ ವಿಡಿಯೋದ ಸತ್ಯಾಂಶ ಏನು?
ನಾಗರಿಕ ಸೇವೆಗಳು, ಎಂಜಿನಿಯರಿಂಗ್ ಕೋರ್ಸ್ ಮತ್ತಿತರ ಕಾರ್ಯಕ್ರಮಗಳಿಗೆ ತರಬೇತಿ ಕೇಂದ್ರಗಳಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ, ತರಬೇತಿ ಸಂಸ್ಥೆಗಳು ನಿಯಮಾನುಸಾರ ಮರುಪಾವತಿಗೆ ನಿರಾಕರಿಸುದ್ದವು. ಹೀಗಾಗಿ ಅಭ್ಯರ್ಥಿಗಳು ಅಂತಿಮವಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ನ್ಯಾಯಕ್ಕೆ ಮೊರೆ ಹೋಗಿದ್ದರು. ಗ್ರಾಹಕ ಇಲಾಖೆ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಸೇವೆ ಪೂರೈಸದ, ತರಗತಿ ವಿಳಂಬ ಮತ್ತು ರದ್ದಾದ ಕೋರ್ಸ್ಗಳಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯ ಕಲ್ಪಿಸುವ ಮೂಲಕ ನೆರವಾಗಿದೆ.
ತರಬೇತಿ ಕೇಂದ್ರಗಳು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡದೇ, ವಿದ್ಯಾರ್ಥಿ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಂದ ಮರುಪಾವತಿ ಹಕ್ಕುಗಳನ್ನು ನಿರಾಕರಿಸುವಂತಹ ವಂಚನೆಗೆ ಅಂತ್ಯ ಹಾಡಬೇಕು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ (DoCA) ನಿರ್ದೇಶಿಸಿದೆ.
ಎಲ್ಲಾ ತರಬೇತಿ ಕೇಂದ್ರಗಳು ವಿದ್ಯಾರ್ಥಿ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುವ ಜತೆಗೆ ವಿದ್ಯಾರ್ಥಿಗಳ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಸ್ಪಷ್ಟ, ಪಾರದರ್ಶಕ ಮರುಪಾವತಿ ನೀತಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಕಾನೂನುಬದ್ಧ ಮರುಪಾವತಿ ಹಕ್ಕುಗಳನ್ನು ನಿರಾಕರಿಸುವ ಇಂಥ ವಂಚನೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಶಿಕ್ಷಣ ಸಂಸ್ಥೆಗಳು ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಸರ್ಕಾರಿ ಬಸ್ಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರಿಗೆ ನೀಡುತ್ತಿರುವ ರಿಯಾಯಿತಿ ರದ್ದಾಗುತ್ತಾ?
ಹೀಗೆ ದೇಶದ ವಿವಿಧೆಡೆಯ ವೆಲ್ಲೂರು, ತಮಿಳುನಾಡು, ಕೋಟಾ, ರಾಜಸ್ಥಾನ, ಕೊರ್ಬಾ, ಛತ್ತೀಸ್ಗಢ, ಔರಂಗಾಬಾದ್ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಅನ್ಯಾಯಕ್ಕೆ ಒಳಗಾದವರು NCH ಮೊರೆ ಹೋಗಿದ್ದು, ಇವರೆಲ್ಲರಿಗೂ ಪರಿಹಾರ ಕಲ್ಪಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.