AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಸಾವಿನ ಸಂಖ್ಯೆ 8ಕ್ಕೆ ಏರಿಕೆ, 190ಕ್ಕೂ ಹೆಚ್ಚು ರಸ್ತೆಗಳ ಸಂಚಾರ ಬಂದ್

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹಿಮಾಚಲ ಪ್ರದೇಶದ ಹವಾಮಾನ ಕಚೇರಿ ಶುಕ್ರವಾರ ಆಗಸ್ಟ್ 6ರವರೆಗೆ ರಾಜ್ಯದ 10 ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಸಿಡಿಲುಗಳ ಹಿನ್ನೆಲೆಯಲ್ಲಿ 'ಹಳದಿ' ಅಲರ್ಟ್ ನೀಡಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ ಮಂಡಿಯಲ್ಲಿ 46, ಕುಲುವಿನಲ್ಲಿ 38 ಮತ್ತು ಶಿಮ್ಲಾದಲ್ಲಿ 15 ಸೇರಿದಂತೆ ಒಟ್ಟು 190 ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಸಾವಿನ ಸಂಖ್ಯೆ 8ಕ್ಕೆ ಏರಿಕೆ, 190ಕ್ಕೂ ಹೆಚ್ಚು ರಸ್ತೆಗಳ ಸಂಚಾರ ಬಂದ್
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ
ಸುಷ್ಮಾ ಚಕ್ರೆ
|

Updated on: Aug 03, 2024 | 5:32 PM

Share

ಕುಲು: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದ ನಂತರ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹಿಮಾಚಲ ಪ್ರದೇಶದ 3 ಜಿಲ್ಲೆಗಳಾದ ಕುಲು, ಮಂಡಿ ಮತ್ತು ಶಿಮ್ಲಾದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಮೂರು ಮೇಘಸ್ಫೋಟಗಳಿಂದ ಉಂಟಾದ ಹಠಾತ್ ಪ್ರವಾಹದ ನಂತರ ಇನ್ನೂ ನಾಪತ್ತೆಯಾಗಿರುವ ಸುಮಾರು 45 ಜನರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಡ್ರೋನ್‌ಗಳ ನಿಯೋಜನೆಯೊಂದಿಗೆ ಇಂದು ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ. ದುರಂತದ ಘಟನೆಗಳಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿದೆ. ಗುಡ್ಡಗಾಡು ರಾಜ್ಯದಲ್ಲಿ 60ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.

ಶುಕ್ರವಾರದಿಂದ ಜೋಗಿಂದರ್‌ನಗರದಲ್ಲಿ ಅತಿ ಹೆಚ್ಚು ಅಂದರೆ 85 ಮಿಮೀ ಮಳೆಯಾಗಿದೆ. ನಂತರ ಗೋಹರ್ (80 ಮಿಮೀ), ಶಿಲಾರೂ (76.4 ಮಿಮೀ), ಪೊಂಟಾ ಸಾಹಿಬ್ (67.2), ಪಾಲಂಪುರ್ (57.2 ಮಿಮೀ) ಧರ್ಮಶಾಲಾ (55.6 ಮಿಮೀ) ಮತ್ತು ಚೋಪಾಲ್​ನಲ್ಲಿ (52 ಮಿಮೀ) ಮಳೆಯಾಗಿದೆ. ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ ಮಂಡಿಯಲ್ಲಿ 46, ಕುಲುವಿನಲ್ಲಿ 38 ಮತ್ತು ಶಿಮ್ಲಾದಲ್ಲಿ 15 ಸೇರಿದಂತೆ ಒಟ್ಟು 190 ರಸ್ತೆಗಳ ಸಂಚಾರವನ್ನು ಮುಚ್ಚಲಾಗಿದೆ.

ಇದನ್ನೂ ಓದಿ: Wayanad Landslide: ವಯನಾಡಿನಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ

ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (HRTC) ಒಟ್ಟು 3612 ಮಾರ್ಗಗಳಲ್ಲಿ 82 ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಶಿಮ್ಲಾ, ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಇನ್ನೂ 53 ಮಂದಿ ನಾಪತ್ತೆಯಾಗಿದ್ದಾರೆ. ಮಂಡಿಯ ರಾಜ್‌ಬಾನ್ ಗ್ರಾಮದಲ್ಲಿ ಎರಡು ಮತ್ತು ಕುಲುವಿನ ನಿರ್ಮಂದ್‌ನಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಕುಲುವಿನ ಶ್ರೀಖಂಡ್ ಮಹಾದೇವ್ ಸುತ್ತಮುತ್ತ ಸಿಲುಕಿರುವ ಸುಮಾರು 300 ಜನರು ಸುರಕ್ಷಿತವಾಗಿದ್ದಾರೆ ಮತ್ತು ಮಲಾನಾದಲ್ಲಿ ಸುಮಾರು 25 ಪ್ರವಾಸಿಗರನ್ನು ಸ್ಥಳೀಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Himachal Pradesh Flood: ಹಿಮಾಚಲ ಪ್ರದೇಶದಲ್ಲಿ ಪ್ರವಾಹ; ರೌದ್ರಾವತಾರ ತಾಳಿದ ಬಿಯಾಸ್ ನದಿ

ಸುಮಾರು 45 ಜನರನ್ನು ಪತ್ತೆ ಹಚ್ಚುವ ರಕ್ಷಣಾ ಕಾರ್ಯಾಚರಣೆ ಶನಿವಾರ ಪುನರಾರಂಭವಾಗಿದೆ. ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದ ನಂತರ ಈ ಜನರು ನಾಪತ್ತೆಯಾಗಿದ್ದಾರೆ. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್ (ಎಸ್‌ಡಿಆರ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಪೊಲೀಸ್ ಮತ್ತು ಹೋಮ್ ಗಾರ್ಡ್‌ಗಳ ತಂಡಗಳಿಂದ ಒಟ್ಟು 410 ರಕ್ಷಕರು ಡ್ರೋನ್‌ಗಳ ಸಹಾಯದಿಂದ ಶೋಧ ಮತ್ತು ರಕ್ಷಣೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ