ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್‌, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ

ಭಾರತೀಯ ಪಡೆಗಳು ಆಪರೇಷನ್ ಸಿಂಧೂರದ ಕಾರ್ಯಾಚರಣೆಯ ಸಮಯದಲ್ಲಿ 5 ಪಾಕಿಸ್ತಾನಿ ಫೈಟರ್ ಜೆಟ್‌ ಹಾಗೂ 1 ಬೃಹತ್ ವಿಮಾನವನ್ನು ಹೊಡೆದುರುಳಿಸಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಮಾಹಿತಿ ನೀಡಿದ್ದಾರೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್‌ಗಳನ್ನು ಸಹ ನಾಶಪಡಿಸಲಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್‌, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
Ap Singh

Updated on: Aug 09, 2025 | 3:25 PM

ಬೆಂಗಳೂರು, ಆಗಸ್ಟ್ 9: ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ 5 ಪಾಕಿಸ್ತಾನಿ ಫೈಟರ್ ಜೆಟ್‌ಗಳು (Pakistani Fighter Jets) ಮತ್ತು ಪಾಕಿಸ್ತಾನಿ ವಾಯುಪಡೆಯ ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆಯ (IAF) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ (AP Singh) ಇದು ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್‌ಗಳು ಸಹ ನಾಶವಾಗಿವೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಯ್ ಮತ್ತು ಚಕ್ಲಾಲಾದಂತಹ ಎರಡು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದಿದ್ದಾರ.

ಒಂದು ದೊಡ್ಡ ವಿಮಾನವನ್ನು ಕೂಡ ಹೊಡೆದುರುಳಿಸಲಾಗಿದ್ದು, ಅದು ELINT ವಿಮಾನ ಅಥವಾ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಆಗಿರಬಹುದು. ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದ ಹೊಡೆದುರುಳಿಸಲಾಗಿದೆ ಎಂದಿದ್ದಾರ. ಭಾರತ ಇತ್ತೀಚೆಗೆ ಖರೀದಿಸಿದ್ದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಅದ್ಭುತ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಹಾಗೇ S-400ಗಳನ್ನು “ಗೇಮ್-ಚೇಂಜರ್” ಎಂದು ಅವರು ಕರೆದಿದ್ದಾರೆ.


ಇದನ್ನೂ ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ


ಇದೇ ವೇಳೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಡ್ಕೆ-ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಮೇಲಿನ ದಾಳಿಯ ಮೊದಲು ಮತ್ತು ನಂತರದ ಫೋಟೋಗಳನ್ನು ಕೂಡ IAF ಮುಖ್ಯಸ್ ಎಪಿ ಸಿಂಗ್ ತೋರಿಸಿದ್ದಾರೆ. ಇದೇ ವೇಳೆ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಭಾರತದ ರಾಜಕೀಯ ನಾಯಕತ್ವವನ್ನು ಕೂಡ ಶ್ಲಾಘಿಸಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಪಡೆಗಳ ಯಶಸ್ಸಿಗೆ ಇದು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಭಾರತೀಯ ಪಡೆಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಯಿತು, ಸರ್ಕಾರದಿಂದ ಅವುಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಿಲ್ಲ. ಇದರಿಂದ ಆಪರೇಷನ್ ಮತ್ತಷ್ಟು ಯಶಸ್ವಿಯಾಯಿತು ಎಂದಿದ್ದಾರೆ.


“ಪಾಕಿಸ್ತಾನದಲ್ಲಿ ದಾಳಿಗೊಳಗಾದ ಪ್ರಮುಖ ವಾಯುನೆಲೆಗಳಲ್ಲಿ ಒಂದಾದ ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ಒಂದು F-16 ಹ್ಯಾಂಗರ್ ಇದೆ. ಆ ಹ್ಯಾಂಗರ್‌ನ ಅರ್ಧದಷ್ಟು ಭಾಗ ನಾಶವಾಗಿದೆ. ಒಳಗೆ ಕೆಲವು ವಿಮಾನಗಳು ಹಾನಿಗೊಳಗಾಗಿವೆ. ನಾವು ಮುರಿದ್ ಮತ್ತು ಚಕ್ಲಾಲಾದಂತಹ ಎರಡು ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಧ್ವಂಸ ಮಾಡಲು ಸಾಧ್ಯವಾಯಿತು. 6 ರಾಡಾರ್‌ಗಳು, ಅವುಗಳಲ್ಲಿ ಕೆಲವು ದೊಡ್ಡವು, ಕೆಲವು ಚಿಕ್ಕವು ನಾಶವಾಗಿವೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: 9 ಗುರಿ, ಪಾಕಿಸ್ತಾನದಲ್ಲಿ 100ಕ್ಕೂ ಹೆಚ್ಚು ಉಗ್ರರ ಹತ್ಯೆ; ಆಪರೇಷನ್ ಸಿಂಧೂರ್ ಕುರಿತು ಸಂಸತ್​​ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ


ಭಾರತೀಯ ಪಡೆಗಳು ಪಾಕಿಸ್ತಾನದ ಮೇಲೆ ಸ್ಪಷ್ಟವಾಗಿ ಮೇಲುಗೈ ಸಾಧಿಸಿವೆ. ಪಾಕಿಸ್ತಾನದವರಿಗೆ ತಾವು ಮುಂದುವರಿದು ದಾಳಿ ನಡೆಸಿದರೆ ಇನ್ನೂ ಹೆಚ್ಚು ಹೆಚ್ಚು ಬೆಲೆ ತೆರಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿತ್ತು. ಆದ್ದರಿಂದ ಅವರು ಮುಂದೆ ಬಂದು ನಮ್ಮ ಡಿಜಿಎಂಒ ಜೊತೆ ಮಾತನಾಡಲು ಬಯಸುವುದಾಗಿ ಸಂದೇಶ ಕಳುಹಿಸಿದರು. ಇದನ್ನು ನಮ್ಮ ಕಡೆಯಿಂದ ಸ್ವೀಕರಿಸಲಾಯಿತು. ಬಳಿಕ ಕದನವಿರಾಮದ ಮಾತುಕತೆ ನಡೆಸಲಾಯಿತು” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ