JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್ಯು ಆಡಳಿತ
JNU rusticates entire elected students union leadership: ಜೆಎನ್ಯು ಅಂಗಳದಲ್ಲಿ ದಾಂದಲೆ ನಡೆಸಿದ ಕಾರಣಕ್ಕೆ ವಿದ್ಯಾರ್ಥಿ ಒಕ್ಕೂಟದ ಚುನಾಯಿತ ನಾಲ್ವರು ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಸೇರಿ ಐವರನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಒಕ್ಕೂಟದ ಇಡೀ ನಾಯಕತ್ವವೇ ಅಮಾನತುಗೊಂಡಂತಾಗಿದೆ. ಕ್ಯಾಂಪಸ್ನಲ್ಲಿರುವ ಲೈಬ್ರರಿಯ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿದ್ದನ್ನು ವಿರೋಧಿಸಿ ಪ್ರತಿಭಟಿಸುವ ವೇಳೆ ದಾಂದಲೆ ನಡೆಸಲಾಗಿತ್ತು.

ನವದೆಹಲಿ, ಫೆಬ್ರುವರಿ 8: ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ಸೆಂಟ್ರಲ್ ಲೈಬ್ರರಿ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸುವಾಗ ಸಿಸಿಟಿವಿ ಮತ್ತಿತರ ಆಸ್ತಿಗಳಿಗೆ ಹಾನಿ ಮಾಡಿದ ಕಾರಣಕ್ಕೆ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ (JNU students’ Union) ಎಲ್ಲಾ ಚುನಾಯಿತ ನಾಯಕತ್ವವನ್ನು ಅಮಾನತುಗೊಳಿಸಲಾಗಿದೆ. ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಅವರಲ್ಲದೇ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್, ಸೇರಿ ಒಟ್ಟು ಐವರನ್ನು ಎರಡು ಸೆಮಿಸ್ಟರ್ಗಳವರೆಗೆ ಅಮಾನತುಗೊಳಿಸಲಾಗಿದೆ.
ಈ ಐವರು ವಿದ್ಯಾರ್ಥಿ ಮುಖಂಡರಿಗೆ ಈ ವರ್ಷದ (2026) ವಿಂಟರ್ ಮತ್ತು ಮಾನ್ಸೂನ್ ಸೆಮಿಸ್ಟರ್ಗಳಿಗೆ ಕ್ಯಾಂಪಸ್ ಪ್ರವೇಶದಿಂದ ನಿರ್ಬಂಧಿಸಲಾಗಿದೆ. ಜೊತೆಗೆ ಎಲ್ಲರಿಗೂ 20,000 ರೂ ದಂಡ ಹಾಕಲಾಗಿದೆ. ಕಳೆದ ವಾರ (ಫೆ. 2) ಜವಾಹರಲಾಲ್ ಯೂನಿವರ್ಸಿಟಿ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡು ನೋಟೀಸ್ ಕೊಟ್ಟಿದೆ.
ಜೆಎನ್ಯು ಕ್ಯಾಂಪಸ್ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸೆಂಟ್ರಲ್ ಲೈಬ್ರರಿಯ ಪ್ರವೇಶದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿರುವುದನ್ನು ವಿರೋಧಿಸಿ ಹಲವು ವಿದ್ಯಾರ್ಥಿಗಳು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಲಾಟೆಯಾಗಿ ಬಯೋಮೆಟ್ರಿಕ್ ಸಿಸ್ಟಂ ಇದ್ದ ಗೇಟ್ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗೆ ಹಾನಿ ಮಾಡಿದ್ದರು. ಇದರಿಂದ ಜೆಎನ್ಯು ಆಡಳಿತಕ್ಕೆ ಅಂದಾಜು 20 ಲಕ್ಷ ರೂ ನಷ್ಟವಾಗಿತ್ತು ಎನ್ನಲಾಗಿದೆ. 2025ರ ನವೆಂಬರ್ 21ರಂದು ತನಿಖೆ ನಡೆಸಲಾಯಿತು. ಇದೀಗ ಯೂನಿವರ್ಸಿಟಿಯ ಆಡಳಿತವು ವಿದ್ಯಾರ್ಥಿ ಸಂಘದ ನಾಯಕತ್ವದ ಮೇಲೆ ಶಿಸ್ತಿನ ಕ್ರಮ ಜರುಗಿಸಿದೆ.
ಇದನ್ನೂ ಓದಿ: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್ಗಳು ಭಾರತದಿಂದ
ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದು ವಿದ್ಯಾರ್ಥಿಗಳ ಧ್ವನಿ ಅಡಗಿಸುವ ಕೆಲಸ ಎಂದು ಎಐಎಸ್ಎ ಮುಂತಾದ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಕಾಂಗ್ರೆಸ್, ಸಿಪಿಐ ಎಂಎಲ್, ಭಾರತ್ ಆದಿವಾಸಿ ಪಾರ್ಟಿ, ಆರ್ಜೆಡಿ ಪಕ್ಷದ ಕೆಲ ಸಂಸದರು, ಈ ಐವರು ವಿದ್ಯಾರ್ಥಿಗಳ ವಿರುದ್ಧದ ಅಮಾನತು ಕ್ರಮವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
