ಕಾಮ್ಯಾಕ್ಯ ದೇವಸ್ಥಾನ: ಸರತಿಯಲ್ಲಿ ನಿಂತು ಉಸಿರುಗಟ್ಟಿದ್ದಕ್ಕೆ ವಾಪಸ್ ಹೊರಟ ಯುವತಿಗೆ ಬಾಟಲಿಯಿಂದ ಹೊಡೆದು ನಿಂದಿಸಿದ ಭಕ್ತರು
ಅಸ್ಸಾಂನ ಕಾಮಾಕ್ಯ ದೇಗುಲದಲ್ಲಿ ಅಂಬುಬಾಚಿ ಮೇಳದ ವೇಳೆ ಜನಸಂದಣಿಯಲ್ಲಿ ಉಸಿರುಗಟ್ಟಿದ ಯುವತಿ ಹೊರನಡೆಯಲು ಯತ್ನಿಸಿದಾಗ ಆಕೆಯ ಮೇಲೆ ಭಕ್ತರು ಬಾಟಲಿ ಎಸೆದು ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇಗುಲದ ಆವರಣದಲ್ಲಿ ಇಂತಹ ವರ್ತನೆ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಾಗೂ ಜನಸಂದಣಿ ನಿರ್ವಹಣೆಗೆ ಒತ್ತಾಯ ಕೇಳಿಬಂದಿದೆ.

ಮುಖ್ಯಾಂಶಗಳು
- ಕಾಮಾಕ್ಯ ದೇವಸ್ಥಾನದ ಸರತಿಯಲ್ಲಿ ನಿಂತಿದ್ದ ಯುವತಿ ಉಸಿರುಗಟ್ಟಿ ಹೊರಬರಲು ಯತ್ನಿಸಿದಾಗ ಭಕ್ತರು ನೀರಿನ ಬಾಟಲಿ ಎಸೆದಿದ್ದಾರೆ.
- ಬಾಟಲಿ ತಲೆಗೆ ಬಡಿದು ಯುವತಿ ಅಳುತ್ತಿರುವ ಭೀಕರ ವಿಡಿಯೋ ವೈರಲ್ ಆಗಿದೆ
- ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಒತ್ತಾಯ
ಗುವಾಹಟಿ, ಜೂನ್ 26: ಭಕ್ತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಬೇಕಿದ್ದ ದೇವಸ್ಥಾನದ ಆವರಣವೊಂದು ಜನರ ವಿಕೃತ ವರ್ತನೆಗೆ ಸಾಕ್ಷಿಯಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಸ್ಥಾನ(Temple)ದ ಆವರಣದಲ್ಲಿ ಯುವಕ-ಯುವತಿ ಮೇಲೆ ಕೆಲವರು ನೀರಿನ ಬಾಟಲಿಗಳನ್ನು ಎಸೆದು, ಹೀಯಾಳಿಸಿ ಅವಮಾನಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಲಭ್ಯವಿರುವ ವರದಿಗಳ ಪ್ರಕಾರ, ವಾರ್ಷಿಕ ‘ಅಂಬುಬಾಚಿ ಮೇಳ’ ನಡೆಯುತ್ತಿರುವುದರಿಂದ ಕಾಮಾಕ್ಯ ದೇವಾಲಯದಲ್ಲಿ ಭಕ್ತರ ಭಾರಿ ಜನಸಂದಣಿ ಇತ್ತು. ಈ ತೀವ್ರ ಜನದಟ್ಟಣೆಯ ನಡುವೆ ಸಿಲುಕಿದ್ದ ಯುವತಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ತಕ್ಷಣವೇ ಆಕೆ ತನ್ನ ಸ್ನೇಹಿತ ಜನಸಂದಣಿಯಿಂದ ಪಾರಾಗಿ ಸುರಕ್ಷಿತ ಜಾಗಕ್ಕೆ ಹೋಗಲು ಆವರಣದಿಂದ ಹೊರನಡೆಯಲು ಪ್ರಯತ್ನಿಸಿದ್ದಾಳೆ. ಇಬ್ಬರು ಜನಸಂದಣಿಯಿಂದ ಹೊರಬರುತ್ತಿರುವುದನ್ನು ನೋಡಿದ ಗುಂಪಿನಲ್ಲಿದ್ದ ಕೆಲವು ಕಿಡಿಗೇಡಿಗಳು ಯಾವುದೇ ಕಾರಣವಿಲ್ಲದೆ ಅವರ ಮೇಲೆ ಕೂಗಾಡಿ ಹೀಯಾಳಿಸಲು ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಕೆಲವರು ಅವರ ಮೇಲೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಇದರಲ್ಲಿ ಒಂದು ನೀರಿನ ಬಾಟಲಿ ನೇರವಾಗಿ ಯುವತಿಗೆ ತಲೆಗೆ ಬಲವಾಗಿ ಬಡಿದಿದೆ.
ಮತ್ತಷ್ಟು ಓದಿ: ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗ 20 ರೂ. ನೋಟಿನ ಮೇಲೆ ಬರೆದಿದ್ದ ಕೋರಿಕೆ ನೋಡಿ ಸಿಬ್ಬಂದಿ ಶಾಕ್
ನೋವು ತಡೆಯಲಾರದೆ ಆ ಯುವತಿ ತಕ್ಷಣವೇ ಗೋಡೆಯ ಮೇಲೆಯೇ ಕುಳಿತು ಕಣ್ಣೀರು ಹಾಕಿದ್ದಾಳೆ. ಆಕೆಯ ಮುಖದಲ್ಲಿದ್ದ ಆಘಾತ ಮತ್ತು ನೋವು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಸ್ನೇಹಿತ ಹತಾಶ ಸ್ಥಿತಿಯಲ್ಲೂ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
Reality of HINDU Devotees
Huge crowd gathered at Kamakhya temple, so a couple tried to escape it by reaching a higher ground
Suddenly crowd start shouting at them and someone threw a bottle at girl
These people came here to worship a Goddess but are abusing a girl in reality pic.twitter.com/qALQKOaXjn
— Tarun Gautam (@TARUNspeakss) June 25, 2026
ಭಕ್ತರ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಒಂದು ಕಡೆ ಭಕ್ತರು ಜಗನ್ಮಾತೆಯ ಆಶೀರ್ವಾದ ಪಡೆಯಲು ಗಂಟೆಗಟ್ಟಲೆ ಕಾಯುತ್ತಾ, ಮತ್ತೊಂದೆಡೆ ಕಣ್ಣೆದುರೇ ಕಷ್ಟದಲ್ಲಿದ್ದ ಇನ್ನೊಬ್ಬ ಯುವತಿಗೆ ಹೀಗೆ ಕ್ರೂರವಾಗಿ ಹೀಯಾಳಿಸಿ ಗಾಯಗೊಳಿಸಿರುವ ವಿರೋಧಾಭಾಸದ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಇವರ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಸಿಸಿಟಿವಿ ಮೂಲಕ ತಕ್ಷಣವೇ ಗುರುತಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಸ್ಸಾಂ ಸರ್ಕಾರ ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವರು, ಲಕ್ಷಾಂತರ ಜನ ಸೇರುವ ಇಂತಹ ದೊಡ್ಡ ಮೇಳಗಳಲ್ಲಿ ಸೂಕ್ತ ಜನಸಂದಣಿ ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ದೇವಸ್ಥಾನದ ಮಂಡಳಿಗೆ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




