ರೈತರಿಗೆ ಒಳ್ಳೆ ಸುದ್ದಿ; 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮೋದಿ ಸಂಪುಟ ಒಪ್ಪಿಗೆ

2026-27ರ ಋತುವಿನ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ರೈತರಿಗೆ ಒಳ್ಳೆ ಸುದ್ದಿ; 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮೋದಿ ಸಂಪುಟ ಒಪ್ಪಿಗೆ
Crop
Image Credit source: AI

Updated on: May 13, 2026 | 4:23 PM

ನವದೆಹಲಿ, ಮೇ 13: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಇಂದು 4 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 2026-27ರ ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದಾಗಿ ಸೂರ್ಯಕಾಂತಿ ಬೀಜವು ಕ್ವಿಂಟಾಲ್‌ಗೆ 622 ರೂ. ಹೆಚ್ಚಳವನ್ನು ಕಂಡಿದ್ದು, ಅದರ ಒಟ್ಟು MSP ಕ್ವಿಂಟಾಲ್‌ಗೆ 8,343 ರೂ. ತಲುಪಿದೆ.

ಖಾರಿಫ್ ಋತುವಿನಲ್ಲಿ ರೈತರಿಗೆ ಅಂದಾಜು 2 ಲಕ್ಷ 60 ಸಾವಿರ ಕೋಟಿ ರೂ. ಪಾವತಿ ಮಾಡಲಾಗುತ್ತದೆ. ಈ ಋತುವಿನಲ್ಲಿ ಅಂದಾಜು 824 ಲಕ್ಷ ಮೆಟ್ರಿಕ್ ಟನ್ ಬೆಳೆಗಳನ್ನು ಖರೀದಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳ?:

ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಾಲ್‌ಗೆ 622 ರೂ. MSP ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಹತ್ತಿಗೆ ಕ್ವಿಂಟಾಲ್‌ಗೆ 557 ಮತ್ತು ಎಳ್ಳಿಗೆ ಕ್ವಿಂಟಾಲ್‌ಗೆ 500 ರೂ.ಗಳ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಎ ದರ್ಜೆಯ ಭತ್ತಕ್ಕೆ ಕ್ವಿಂಟಾಲ್‌ಗೆ 2 ಸಾವಿರದ 461 ರೂ. ಕನಿಷ್ಠ ಬೆಂಬಲ ಬೆಲೆ, ಹೈಬ್ರಿಡ್‌ ಜೋಳಕ್ಕೆ ಕ್ವಿಂಟಾಲ್‌ಗೆ 4,023 ರೂ.ಗಳು, ಬಾಜ್ರಾಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,900 ರೂ.ಗಳು ಮತ್ತು ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್‌ಗೆ 8,450 ರೂ. ಬೆಂಬಲ ಬೆಲೆಯನ್ನು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಜೋಶಿ ಮನವಿಗೆ ಸ್ಪಂದಿಸಿ ಬೆಂಬಲ ಬೆಲೆ ಹೆಸರು ಖರೀದಿಗೆ ಕಾಲಾವಕಾಶ ವಿಸ್ತರಣೆ

2019ರಲ್ಲಿ ಘೋಷಿಸಲಾದ ನೀತಿಗೆ ಅನುಗುಣವಾಗಿ, ಎಲ್ಲಾ ಅಧಿಸೂಚಿತ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟು ಹೆಚ್ಚಿಸಲಾಗಿದೆ. ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಸುಮಾರು 824.41 ಲಕ್ಷ ಮೆಟ್ರಿಕ್ ಟನ್‌ಗಳ ವಾರ್ಷಿಕ ಸಂಗ್ರಹಣೆಯನ್ನು ಸರ್ಕಾರ ಅಂದಾಜಿಸಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ ಮಾಡಿದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​

ಹಾಗೇ, ನಮೋ ಭಾರತ್ ರೈಲು ಕಾರ್ಯಾಚರಣೆಗಳ ಅಡಿಯಲ್ಲಿ 20,667 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಬ್ರಾಡ್‌ಗೇಜ್‌ನಲ್ಲಿ ಭಾರತದ ಮೊದಲ ಅರೆ-ಹೈ-ಸ್ಪೀಡ್ ರೈಲು ಕಾರಿಡಾರ್ (134 ಕಿಮೀ) ಅನ್ನು ಸಹ ಸಂಪುಟ ಅನುಮೋದಿಸಿದೆ. ಧೋಲೆರಾ SIR ಅನ್ನು ಅಹಮದಾಬಾದ್ (ಸಬರಮತಿ), ಧೋಲೆರಾ ವಿಮಾನ ನಿಲ್ದಾಣ ಮತ್ತು ಲೋಥಾಲ್ NHMCಯೊಂದಿಗೆ ಸಂಪರ್ಕಿಸುವುದಾಗಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Wed, 13 May 26

Loading...
Unable to load recommendations.
Follow Us