Narendra Modi: 3 ಸೇನಾ ಮುಖ್ಯಸ್ಥರೊಂದಿಗೆ ಮೋದಿ ಮಹತ್ವದ ಸಭೆ: ಪಾಕಿಸ್ತಾನಕ್ಕೆ ಕಾದಿದ್ಯಾ ಶಾಸ್ತಿ..?
Operation Sindoor: ಭಾರತೀಯ ಸೇನೆ ಆಪರೇಷನ್ ಸಿಂದೂರ್ ಆರಂಭಿಸಿದ ಬಳಿಕ ಬೆಚ್ಚಿಬಿದ್ದ ಪಾಕಿಸ್ತಾನ ತತ್ತರಿಸಿ ಹೋಗಿದೆ. ಪಾಕ್ ನಡೆಸಿದ್ದ ದಾಳಿತನ್ನು ವಿಫಲಗೊಳಿಸಿ ಬಳಿಕ ಭಾರತ ಪ್ರತಿದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಯಾವ ಸಂದರ್ಭದಲ್ಲಿ ಏನಾಗುತ್ತೋ ಎನ್ನುವುದು ಗೊತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರೂ ಸೇನಾ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ಮಾಡಿದ್ದಾರೆ.

ನವದೆಹಲಿ, (ಮೇ 09): ಪಾಕಿಸ್ತಾನ (Pakistan) ಸೇನೆ ಭಾರತದ (India) ನಗರಗಳ ಮೇಲೆ ದಾಳಿಗೆ ವಿಫಲ ಯತ್ನ ಮಾಡಿದ ನಂತರ ಭಾರತೀಯ ಸೇನೆ (Indian Army) ತಕ್ಕ ಪ್ರತ್ಯುತ್ತರ ನೀಡಿದೆ. ಒಂದೆಡೆ, ಭಾರತೀಯ ವಾಯು ಸೇನೆ ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಬಳಿಕ ಭಾರತ ಬಿಟ್ಟ ಬಾಣಕ್ಕೆ ಪಾಕಿಸ್ತಾನದ ಹಲವು ನಗರಗಳು ನಲುಗಿ ಹೋಗಿವೆ. ಇಷ್ಟಾದರೂ ಸುಮ್ಮನಾಗದ ಪಾಕ್, ಗಡಿಯಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಪದೇ ಪದೇ ಶೆಲ್ ಹಾಗೂ ಗುಂಡಿನ ದಾಳಿ ನಡೆಸುತ್ತಿದೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದ ಕಾರ್ಮೋಡ ಕವಿದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಮೇ 09) ಮೂರು ಸೇನೆಗಳ ಮುಖ್ಯಸ್ಥರ ಜೊತೆ ಸಭೆ ಮಾಡಿದ್ದು, ಮಹತ್ವದ ಮಾತುಕತೆ ಮಾಡಿದ್ದಾರೆ. ಇಲ್ಲಿಯವರೆಗಿನ ಕಾರ್ಯಚರಣೆ ಮಾಹಿತಿ ಪಡೆದುಕೊಳ್ಳುವುದರ ಜೊತೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅದಿಕೃತ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ನೆಲ, ಜಲ, ವಾಯು ಸೇನೆಯ ಮುಖ್ಯಸ್ಥರು ಭಾಗವಹಿಸಿದರು. ಜತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಈ ವೇಳೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ್ ಕ್ಷಿಪಣಿ, ಎಸ್ 400 ವಾಯು ರಕ್ಷಣಾ ವ್ಯವಸ್ಥೆಗಳ ಸಹಾಯದಿಂದ ಪಾಕಿಸ್ತಾನ ಡ್ರೋನ್ ದಾಳಿಗಳನ್ನು ವಿಫಲಗೊಳಿಸಿರುವ ಬಗ್ಗೆ ರಕ್ಷಣಾ ಅಧಿಕಾರಿಗಳು ಪ್ರಧಾನಿ ಮೋದಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಟರ್ಕಿ ಡ್ರೋನ್ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನ; ಸೋಫಿಯಾ ಖುರೇಷಿ
ಅಲ್ಲದೇ ಆಪರೇಷನ್ ಸಿಂದೂರ ಮುಂದುವರೆದಿರುವ ಬಗ್ಗೆ ಮಾಹಿತಿ ಕೇಳಿರುವ ಮೋದಿ, ಈ ವೇಳೆ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದ್ದು, ಭಾರತದ ಮುಂದಿನ ಹೆಜ್ಜೆ ಏನು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಈ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸೇನಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಮಾಡಿ ಸದ್ಯದ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಪ್ರಧಾನಿ ಮೋದಿ ಎಲ್ಲರ ಜೊತೆ ಹೈವೋಲ್ಟೇಜ್ ಸಭೆ ಮಾಡಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ.