
ನವದೆಹಲಿ, ಫೆಬ್ರವರಿ 4: ಇಂದು ಬೆಳಿಗ್ಗೆ ಸಂಸತ್ ಭವನದ ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇಂದಿನ ಕಲಾಪದ ಆರಂಭಕ್ಕೂ ಮುನ್ನ ಪಾರ್ಲಿಮೆಂಟ್ ಹೊರಗೆ ಮೆಟ್ಟಿಲಿನ ಬಳಿ ಕಾಂಗ್ರೆಸ್ ಸಂಸದರು ಕುಳಿತಿದ್ದರು. ಆಗ ಅಲ್ಲಿಗೆ ಬಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ನೋಡಿ ತಮಾಷೆ ಮಾಡಿದ್ದಾರೆ. “ನನ್ನ ದೇಶದ್ರೋಹಿ ಸ್ನೇಹಿತ ಬಂದರು ನೋಡಿ” ಎಂದು ಹೇಳುತ್ತಾ ರವನೀತ್ ಸಿಂಗ್ಗೆ ಹಸ್ತಲಾಘವ ನೀಡಲು ಕೈಚಾಚಿದ್ದಾರೆ. ಆದರೆ, ತಮ್ಮನ್ನು ದೇಶದ್ರೋಹಿ ಎಂದು ಕರೆದಿದ್ದಕ್ಕೆ ಕೋಪಗೊಂಡ ರವನೀತ್ ಬಿಟ್ಟು ರಾಹುಲ್ ಗಾಂಧಿಯ ಹ್ಯಾಂಡ್ ಶೇಕ್ ಮಾಡಿಲ್ಲ. ಅಷ್ಟೇ ಅಲ್ಲದೆ, “ನೀವು ನಮ್ಮ ದೇಶದ ಶತ್ರು” ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಈ “ದೇಶದ್ರೋಹಿ” ಹಾಗೂ “ದೇಶದ ಶತ್ರು” ಎಂಬ ಹೇಳಿಕೆಗಳು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಅಂದಹಾಗೆ, ಈ ರವನೀತ್ ಸಿಂಗ್ ಬಿಟ್ಟು ಕಾಂಗ್ರೆಸ್ ನಾಯಕರಾಗಿದ್ದವರು. 3 ಬಾರಿ ಕಾಂಗ್ರೆಸ್ ಸಂಸದ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ರವನೀತ್ ಬಿಟ್ಟು 2024ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದಾದ ನಂತರ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರೂ ಆಗಿದ್ದರು.
#WATCH | Delhi: As Union MoS Ravneet Singh Bittu passes by the protesting Congress MPs at Makar Dwar, Lok Sabha LoP Rahul Gandhi says, “Here is a traitor walking right by. Look at the face…”
LoP Rahul Gandhi offered to shake his hands, saying, “Hello brother, my traitor… pic.twitter.com/5wMgjM8KAW
— ANI (@ANI) February 4, 2026
ಇಂದು ಆಗಿದ್ದೇನು?:
ಇಂದು ಕಾಂಗ್ರೆಸ್ ಸಂಸದರು ಸಂಸತ್ನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿ ರವನೀತ್ ಬಿಟ್ಟು ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ನೋಡಿದ ರಾಹುಲ್ ಗಾಂಧಿ “ಅದೋ ಅಲ್ಲಿ ನಮ್ಮ ಒಬ್ಬ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಮುಖ ನೋಡಿ” ಎಂದು ತಮಾಷೆ ಮಾಡಿದರು. ಆಗ ಅಲ್ಲಿ ಕುಳಿತಿದ್ದ ಬೇರೆ ಸಂಸದರು ಜೋರಾಗಿ ನಗಲಾರಂಭಿಸಿದರು. ಇದರಿಂದ ರವನೀತ್ ಬಿಟ್ಟುಗೆ ಅವಮಾನವಾಯಿತು. ಅಷ್ಟಕ್ಕೇ ಸುಮ್ಮನಾಗದ ರಾಹುಲ್ ಗಾಂಧಿ ಎದ್ದುನಿಂತು “ಹೆಲೋ ಬ್ರದರ್, ನನ್ನ ದೇಶದ್ರೋಹಿ ಸ್ನೇಹಿತ. ಡೋಂಟ್ ವರಿ, ನೀವು ಕಾಂಗ್ರೆಸ್ಗೆ ವಾಪಾಸ್ ಬರುತ್ತೀರಿ” ಎಂದು ಹೇಳುತ್ತಾ ಶೇಕ್ ಹ್ಯಾಂಡ್ಗೆ ಕೈ ಚಾಚಿದರು.
ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು
ಆದರೆ, ಅಷ್ಟರಲ್ಲೇ ಅವಮಾನಗೊಂಡಿದ್ದ ರವನೀತ್ ಸಿಂಗ್ ಬಿಟ್ಟು ರಾಹುಲ್ ಗಾಂಧಿಗೆ ಹಸ್ತಲಾಘವ ನೀಡಲಿಲ್ಲ. “ದೇಶ್ ಕೆ ದುಷ್ಮನ್ (ನೀವು ಈ ದೇಶದ ಶತ್ರು)” ಎಂದು ಹೇಳಿದ ರವನೀತ್ ಬಿಟ್ಟು ಅಲ್ಲಿ ಕುಳಿತಿದ್ದ ಪ್ರತಿಭಟನಾ ನಿರತ ಸಂಸದರ ಕುರಿತಾಗಿ “ನೀವು ಯುದ್ಧ ಗೆದ್ದಂತೆ ಕುಳಿತಿದ್ದೀರ” ಎಂದು ಲೇವಡಿ ಮಾಡಿದರು. ಇದಾದ ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು.
“ಪಕ್ಷಕ್ಕೆ ದ್ರೋಹ ಮಾಡುವವನಿಗೆ ಬೇರೆ ಯಾವುದೇ ಪದ ಸರಿಹೊಂದುವುದಿಲ್ಲ” ಎಂದು ಪ್ರತಿಪಾದಿಸುತ್ತಾ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. “ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲದಿದ್ದಾಗ ನಾವು ಏನು ಮಾಡಬಹುದು? ರವನೀತ್ ಬಿಟ್ಟು ಅವರನ್ನು ಸಂಸದರನ್ನಾಗಿ ಮಾಡಿದವರು ಯಾರು? ದೇಶದ್ರೋಹಿ ಬಗ್ಗೆ ನಾವು ಇನ್ನೇನು ಹೇಳಲು ಸಾಧ್ಯ?” ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ
ಸಿಖ್ ಶಾಸಕ ಮತ್ತು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಸಿಖ್ ಸಚಿವರಾದ ಬಿಟ್ಟು ಅವರ ಬಗ್ಗೆ ರಾಹುಲ್ ಗಾಂಧಿ ನೀಡಿದ “ದೇಶದ್ರೋಹಿ” ಎಂಬ ಹೇಳಿಕೆಯನ್ನು ಖಂಡಿಸಿದ್ದಾರೆ. “ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ದೇಶದ್ರೋಹಿಗಳು. ಸಿಖ್ಖರು ಮತ್ತು ಸರ್ದಾರ್ಗಳು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಈ ಹೇಳಿಕೆಯು ಕಾಂಗ್ರೆಸ್ನ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Wed, 4 February 26