ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಉಸಿರುಗಟ್ಟಿ ಓರ್ವ ಭಕ್ತ ಸಾವು, ಹಲವರಿಗೆ ಗಾಯ
ಒಡಿಶಾದ ಪುರಿಯಲ್ಲಿ ಇಂದು ನಡೆದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಒಬ್ಬ ಭಕ್ತ ಮೃತಪಟ್ಟಿದ್ದಾರೆ ಮತ್ತು ಸುಮಾರು 100 ಭಕ್ತರು ಗಾಯಗೊಂಡಿದ್ದಾರೆ. ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ರಥಗಳನ್ನು ಎಳೆಯುವ ಪವಿತ್ರ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಸೇರಿದ್ದಾಗ ಈ ದುರಂತ ಸಂಭವಿಸಿದೆ. ಕಾಲ್ತುಳಿತಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪುರಿ, ಜುಲೈ 16: ಒಡಿಶಾದ ಪುರಿಯಲ್ಲಿ ಇಂದು ಅತ್ಯಂತ ವೈಭವದಿಂದ ಆರಂಭವಾದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ಸಂದರ್ಭದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಉಸಿರುಗಟ್ಟಿ ಓರ್ವ ಭಕ್ತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವತೆ ಸುಭದ್ರೆಯ ರಥ ಎಳೆಯುವ ಪವಿತ್ರ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಜಮಾಯಿಸಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಕಟಕ್ ಜಿಲ್ಲೆಯ ನಿವಾಸಿಯಾದ 35 ವರ್ಷದ ಅನಿಲ್ ದಾಸ್ ಎಂದು ಗುರುತಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?:
ರಥ ಯಾತ್ರೆಯನ್ನು ವೀಕ್ಷಿಸಲು ಭಕ್ತರು ಪುರಿಯ ಪ್ರಮುಖ ರಸ್ತೆಯಾದ ‘ಬಡಾ ದಂಡಾ’ ಬಳಿ ಕಾಯುತ್ತಿದ್ದಾಗ ಅನಿಲ್ ದಾಸ್ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುರಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನೂಕುನುಗ್ಗಲಿನಿಂದಾಗಿ ಇನ್ನೂ ಕೆಲವು ಭಕ್ತರಿಗೆ ಗಾಯಗಳಾಗಿದ್ದು, ತುರ್ತು ರಕ್ಷಣಾ ತಂಡಗಳು ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನದಟ್ಟಣೆಯನ್ನು ನಿರ್ವಹಿಸಲು ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ.
ಇದನ್ನೂ ಓದಿ: ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ, ಎಲ್ಲೆಲ್ಲೂ ಭಕ್ತಸಾಗರ
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ, ಲಕ್ಷಾಂತರ ಭಕ್ತರು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ 9 ದಿನಗಳ ವಾರ್ಷಿಕ ರಥಯಾತ್ರೆ ವೀಕ್ಷಿಸಲು ಜಮಾಯಿಸಿದ್ದರು. ಈ ಪವಿತ್ರ ಆಚರಣೆಯು ವಿಷ್ಣುವಿನ ಸುದರ್ಶನ ಚಕ್ರವನ್ನು ಜಗನ್ನಾಥ ದೇವಾಲಯದಿಂದ ಹೊರತಂದು ಸುಭದ್ರೆಯ ‘ದರ್ಪದಾಲನ್’ ರಥದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಆರಂಭವಾಯಿತು. ನಂತರ ಜಗನ್ನಾಥನ ಹಿರಿಯ ಸಹೋದರ ಬಲಭದ್ರನನ್ನು ‘ತಾಳಧ್ವಜ’ ರಥಕ್ಕೆ ಮತ್ತು ಜಗನ್ನಾಥನನ್ನು ‘ನಂದಿಘೋಷ’ ರಥಕ್ಕೆ ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.
ಈ ವೇಳೆ ಭಕ್ತರು “ಜೈ ಜಗನ್ನಾಥ್” ಎಂದು ಘೋಷಣೆಗಳನ್ನು ಕೂಗಿದರು. ಒಡಿಸ್ಸಿ ನೃತ್ಯಗಾರರು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




