ಅಕ್ಟೋಬರ್ 2ರಂದು 1 ಖಾದಿ ಉತ್ಪನ್ನ ಖರೀದಿಸಿ; ಪ್ರಧಾನಿ ಮೋದಿ ಸ್ವದೇಶಿ ಅಭಿಯಾನ
ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಕನಿಷ್ಠ ಒಂದು ಖಾದಿ ಉತ್ಪನ್ನವನ್ನು ಖರೀದಿಸುವಂತೆ ಮತ್ತು ಅದನ್ನು 'ವೋಕಲ್ ಫಾರ್ ಲೋಕಲ್' ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ಮೋದಿ ಜನರನ್ನು ಆಗ್ರಹಿಸಿದ್ದಾರೆ. ಮನ್ ಕಿ ಬಾತ್ ರೇಡಿಯೋ ಸರಣಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಇಂದು ಮಾತನಾಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 28: ಇಂದು (ಭಾನುವಾರ) ‘ಮನ್ ಕಿ ಬಾತ್’ನ 126ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi), ಈ ಗಾಂಧಿ ಜಯಂತಿಯಂದು ‘ಸ್ವದೇಶಿ’ ವಸ್ತು ಸ್ವೀಕರಿಸಲು ಮತ್ತು ಅದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ದೇಶವಾಸಿಗಳಿಗೆ ಕರೆ ನೀಡಿದರು.
“ಅಕ್ಟೋಬರ್ 2ರಂದು ಗಾಂಧಿ ಜಯಂತಿ. ಗಾಂಧೀಜಿ ಯಾವಾಗಲೂ ಸ್ವದೇಶಿ ವಸ್ತುಗಳನ್ನು ಖರೀದಿಸಲು ಮತ್ತು ಬಳಸಲು ಒತ್ತು ನೀಡುತ್ತಿದ್ದರು. ಖಾದಿ ಅವುಗಳಲ್ಲಿ ಪ್ರಮುಖವಾಗಿತ್ತು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಖಾದಿಯ ಮೋಡಿ ಕಡಿಮೆಯಾಗುತ್ತಿದೆ. ಆದರೆ ಕಳೆದ 11 ವರ್ಷಗಳಲ್ಲಿ ಖಾದಿಯ ಕಡೆಗೆ ದೇಶದ ಆಕರ್ಷಣೆ ಗಮನಾರ್ಹವಾಗಿ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಖಾದಿ ಮಾರಾಟವು ಏರಿಕೆ ಕಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: Mann Ki Baat: ಛತ್ ಪೂಜೆಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಶ್ರಮ; ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
“ಅಕ್ಟೋಬರ್ 2ರಂದು ನೀವೆಲ್ಲರೂ ಒಂದಲ್ಲ ಒಂದು ಖಾದಿ ಉತ್ಪನ್ನವನ್ನು ಖರೀದಿಸುವಂತೆ ನಾನು ಒತ್ತಾಯಿಸುತ್ತೇನೆ. ಇವು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳಿ. ‘ವೋಕಲ್ ಫಾರ್ ಲೋಕಲ್’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಳ್ಳಿ” ಎಂದು ಅವರು ಹೇಳಿದ್ದಾರೆ.
In his 126th episode, Mann Ki Baat, PM Modi (@narendramodi) says, “2nd October is Gandhi Jayanti. Gandhiji always emphasized adopting Swadeshi, with Khadi being the most prominent. Unfortunately, after independence, Khadi’s charm had dimmed, but in the past 11 years, people’s… pic.twitter.com/F3cjSsF5Tg
— Press Trust of India (@PTI_News) September 28, 2025
“ಖಾದಿಯಂತೆಯೇ ನಮ್ಮ ಕೈಮಗ್ಗ ಮತ್ತು ಕರಕುಶಲ ವಲಯವು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ. “ಸಂಪ್ರದಾಯ ಮತ್ತು ನಾವೀನ್ಯತೆ ಒಗ್ಗೂಡಿದಾಗ ಹೊಸ ಮಾದರಿಯ ಫಲಿತಾಂಶಗಳನ್ನು ಪಡೆಯಬಹುದು” ಎಂದು ತೋರಿಸುವ ಹಲವಾರು ಉದಾಹರಣೆಗಳು ಭಾರತದಲ್ಲಿ ಹೊರಹೊಮ್ಮುತ್ತಿವೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: Mann Ki Baat: ಪ್ರತಿಯೊಬ್ಬ ಭಾರತೀಯ ಯುವಕರಿಗೂ ಸ್ಫೂರ್ತಿ; ಭಗತ್ ಸಿಂಗ್ 118ನೇ ಜನ್ಮ ದಿನಾಚರಣೆಗೆ ಪ್ರಧಾನಿ ಮೋದಿ ಗೌರವ
ಈ ಬಗ್ಗೆ ಒಂದು ಉದಾಹರಣೆ ನೀಡಿದ ಪ್ರಧಾನಿ ಮೋದಿ, “ತಮಿಳುನಾಡಿನ ಯಾಜ್ ನ್ಯಾಚುರಲ್ಸ್ ಬಗ್ಗೆ ನೀವು ಕೇಳಿರಬಹುದು. ಅಲ್ಲಿ, ಅಶೋಕ್ ಜಗದೀಶನ್ ಮತ್ತು ಪ್ರೇಮ್ ಸೆಲ್ವರಾಜ್ ಎಂಬುವವರು ತಮ್ಮ ಕಾರ್ಪೊರೇಟ್ ಉದ್ಯೋಗಗಳನ್ನು ತೊರೆದು ಹೊಸ ಪ್ರಯೋಗಕ್ಕೆ ಮುಂದಾದರು. ಅವರು ಹುಲ್ಲು ಮತ್ತು ಬಾಳೆಯ ನಾರಿನಿಂದ ಯೋಗ ಮ್ಯಾಟ್ಗಳನ್ನು ತಯಾರಿಸಿದರು, ಗಿಡಮೂಲಿಕೆಯ ಬಣ್ಣಗಳಿಂದ ಬಟ್ಟೆಗಳಿಗೆ ಬಣ್ಣ ತಯಾರಿಸಿದರು. 200 ಕುಟುಂಬಗಳಿಗೆ ಈ ಬಗ್ಗೆ ತರಬೇತಿ ನೀಡುವ ಮೂಲಕ ಉದ್ಯೋಗವನ್ನು ಒದಗಿಸಿದರು” ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೋಹರ್ಗ್ರಾಮ್ ಬ್ರ್ಯಾಂಡ್ ಮೂಲಕ ಬುಡಕಟ್ಟು ನೇಯ್ಗೆ ಮತ್ತು ಉಡುಪುಗಳನ್ನು ಜಾಗತಿಕ ಹಂತಕ್ಕೆ ತಂದ ಜಾರ್ಖಂಡ್ನ ಆಶಿಶ್ ಸತ್ಯವ್ರತ್ ಸಾಹು ಅವರ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. “ಸಾಹು ಅವರ ಪ್ರಯತ್ನಗಳಿಂದಾಗಿ, ಇತರ ದೇಶಗಳ ಜನರು ಸಹ ಜಾರ್ಖಂಡ್ನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದುಕೊಂಡಿದ್ದಾರೆ” ಎಂದು ಅವರು ಹೇಳಿದರು.
“ಬಿಹಾರದ ಮಧುಬನಿ ಜಿಲ್ಲೆಯ ಸ್ವೀಟಿ ಕುಮಾರಿ ಎಂಬಾಕೆ ಸಂಕಲ್ಪ ಕ್ರಿಯೇಷನ್ಸ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಅವರು ಮಿಥಿಲಾ ಚಿತ್ರಕಲೆಯನ್ನು ಮಹಿಳೆಯರಿಗೆ ಜೀವನೋಪಾಯದ ಸಾಧನವಾಗಿ ಪರಿವರ್ತಿಸಿದ್ದಾರೆ. ಇಂದು, 500ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಅವರೊಂದಿಗೆ ಸೇರಿಕೊಂಡು ಸ್ವಾವಲಂಬನೆಯ ಹಾದಿಯಲ್ಲಿದ್ದಾರೆ. ಈ ಎಲ್ಲಾ ಯಶಸ್ಸಿನ ಕಥೆಗಳು ನಮಗೆ ಪಾಠವಾಗಬೇಕು, ಸ್ಫೂರ್ತಿಯಾಗಬೇಕು. ನಮ್ಮ ಸಂಕಲ್ಪ ಬಲವಾಗಿದ್ದರೆ ಯಶಸ್ಸು ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




