AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೂ ಕಾಲು ಕತ್ತರಿಸಿದ್ದ ಸಿಪಿಐಂ ಕ್ರೌರ್ಯವನ್ನು ರಾಜ್ಯಸಭೆಯಲ್ಲಿ ವಿವರಿಸಿದ್ದ ಸದಾನಂದನ್ ಮಾಸ್ಟರ್​ಗೆ ಪ್ರಧಾನಿ ಮೋದಿ ಮೆಚ್ಚುಗೆ

ರಾಜ್ಯಸಭೆಯಲ್ಲಿ ಸಿ ಸದಾನಂದನ್ ಮಾಸ್ಟರ್ ಅವರ ಧೈರ್ಯಶಾಲಿ ಭಾಷಣಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1994ರಲ್ಲಿ ಸಿಪಿಐಎಂ ಕಾರ್ಯಕರ್ತರಿಂದ ಕಾಲು ಕಳೆದುಕೊಂಡ ಘಟನೆಯನ್ನು, ಸದನದಲ್ಲಿ ಬೆಂಚ್ ಮೇಲೆ ಕೃತಕ ಕಾಲುಗಳನ್ನು ಪ್ರದರ್ಶಿಸಿ ಮಾಸ್ಟರ್ ವಿವರಿಸಿದ್ದರು. ಅವರ ತ್ಯಾಗ ಮತ್ತು ರಾಷ್ಟ್ರಪ್ರೇಮಕ್ಕೆ ಮೋದಿ ಪತ್ರ ಬರೆದು ಅಭಿನಂದಿಸಿದ್ದಾರೆ. ಈ ಪ್ರಶಂಸೆ ತಮ್ಮ ಸೇವಾಭಾವನೆಗೆ ಮತ್ತಷ್ಟು ಬಲ ನೀಡಿದೆ ಎಂದು ಸದಾನಂದನ್ ಮಾಸ್ಟರ್ ಪ್ರತಿಕ್ರಿಯಿಸಿದ್ದಾರೆ.

ಎರಡೂ ಕಾಲು ಕತ್ತರಿಸಿದ್ದ ಸಿಪಿಐಂ ಕ್ರೌರ್ಯವನ್ನು ರಾಜ್ಯಸಭೆಯಲ್ಲಿ ವಿವರಿಸಿದ್ದ ಸದಾನಂದನ್ ಮಾಸ್ಟರ್​ಗೆ ಪ್ರಧಾನಿ ಮೋದಿ ಮೆಚ್ಚುಗೆ
ಸದಾನಂದನ್ ಮಾಸ್ಟರ್​, ಪ್ರಧಾನಿ ಮೋದಿImage Credit source: TV9 Network
Ganapathi Sharma
|

Updated on: Feb 07, 2026 | 12:48 PM

Share

ನವದೆಹಲಿ, ಫೆಬ್ರವರಿ 7: ರಾಜ್ಯಸಭೆಯಲ್ಲಿ (Rajya Sabha) ಚೊಚ್ಚಲ ಭಾಷಣದ ಮೂಲಕ ಗಮನ ಸೆಳೆದ ಕೇರಳದ ಬಿಜೆಪಿ ಸದಸ್ಯ ಸಿ. ಸದಾನಂದನ್ ಮಾಸ್ಟರ್ (C.Sadanandan Master) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಪತ್ರ ಬರೆದು ಅಭಿನಂದಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ 1994ರ ಜನವರಿ 25ರಂದು ಸಿಪಿಐಎಂ ಕಾರ್ಯಕರ್ತರಿಂದ ನಡೆದ ಹಲ್ಲೆ ಹಾಗೂ ಅದರಿಂದ ಕಾಲು ಕಳೆದುಕೊಂಡ ಘಟನೆ ಕುರಿತು ಮನಕಲಕುವಂತೆ ವಿವರಿಸಿದ್ದ ಸದಾನಂದನ್ ಮಾಸ್ಟರ್ ಅವರ ಧೈರ್ಯ ಮತ್ತು ನಿಲುವಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಪೋಸ್ಟ್ ಮಾಡಿರುವ ಸದಾನಂದನ್ ಮಾಸ್ಟರ್, ‘ರಾಜ್ಯಸಭೆಯಲ್ಲಿ ನನ್ನ ಮೊದಲ ಭಾಷಣಕ್ಕೆ ಪ್ರಧಾನಿಯಿಂದ ಬಂದ ಪ್ರಶಂಸೆ ನನ್ನ ಸೇವಾಭಾವನೆಗೆ ಮತ್ತಷ್ಟು ಬಲ ನೀಡಿದೆ’ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಸದಾನಂದನ್ ಮಾಸ್ಟರ್ ತಮ್ಮ ಕೃತಕ ಕಾಲುಗಳನ್ನು ಸದನದ ಬೆಂಚ್ ಮೇಲೆ ಪ್ರದರ್ಶಿಸಿ, ತಾವು ಎದುರಿಸಿದ ಹಿಂಸೆ ಮತ್ತು ದಾಳಿಯ ಕುರಿತು ವಿವರಿಸಿದ್ದರು. ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಮಾತುಗಳನ್ನಾಡುವ ಎಡಪಂಥೀಯರು ತಮ್ಮ ಸೈದಾಂತಿಕ ವಿರೋಧಿಗಳಿಗೆ ನೀಡಿದ ಹಿಂಸೆ ಬಗ್ಗೆ ಅವರು ಉಲ್ಲೇಖಿಸಿದ್ದು, ಕೆಲಕಾಲ ಸದನದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಸದಾನಂದನ್ ಮಾಸ್ಟರ್ ಎಕ್ಸ್ ಸಂದೇಶ

1994ರ ಜನವರಿ 25ರಂದು ಕೇರಳದಲ್ಲಿ ಸಿಪಿಐಎಂ ಕಾರ್ಯಕರ್ತರದ್ದು ಎನ್ನಲಾದ ಗುಂಪೊಂದು ಸದಾನಂದನ್ ಮಾಸ್ಟರ್ ಮೇಲೆ ದಾಳಿ ನಡೆಸಿ, ಅವರ ಕಾಲುಗಳನ್ನು ಕತ್ತರಿಸಿ ಅಡಗಿಸಿಟ್ಟ ಘಟನೆ ದೊಡ್ಡ ಸಂಚಲನ ಮೂಡಿಸಿತ್ತು. ಅದಾದ ನಂತರವೂ ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಸದಾನಂದನ್ ಮಾಸ್ಟರ್ ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಪ್ರಶಂಸೆಯ ಪತ್ರದಲ್ಲಿ ಮೋದಿ ಹೇಳಿದ್ದೇನು?

‘ಶಾಂತಚಿತ್ತದಿಂದ ಮತ್ತು ಆತ್ಮವಿಶ್ವಾಸದಿಂದ ರಾಜ್ಯಸಭೆಯಲ್ಲಿ ನೀವು ಮಾತುಗಳನ್ನಾಡಿದ ರೀತಿ ಶ್ಲಾಘನೀಯ. ಸಂಸತ್ತಿನ ಕಾರ್ಯಚಟುವಟಿಕೆಗಳಿಗೆ ನಿಮ್ಮ ಅನುಭವ ಮತ್ತು ವಿಚಾರಗಳು ಮುಂದೆಯೂ ಮಾರ್ಗದರ್ಶನವಾಗಲಿ’ ಎಂದು ಮೋದಿ ತಮ್ಮ ಪತ್ರದಲ್ಲಿ ಸದಾನಂದನ್ ಮಾಸ್ಟರ್​ ಅವರನ್ನು ಅಭಿನಂದಿಸಿದ್ದಾರೆ. ‘ನೀವು ನಿಮ್ಮನ್ನು ಹೊಸ ಸದಸ್ಯ ಎಂದು ಹೇಳಿಕೊಂಡರೂ, ನಿಮ್ಮಲ್ಲಿ ದೀರ್ಘ ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಮ್ಮ ಮಾತುಗಳಲ್ಲಿ ನೈತಿಕ ಶಕ್ತಿ ಮತ್ತು ದೃಢ ನಿಲುವು ಕಂಡುಬಂತು ಎಂದು ಮೋದಿ ಉಲ್ಲೇಖಿಸಿದ್ದಾರೆ.

ಕೇರಳದಲ್ಲಿ ನಡೆದಿದ್ದ ದಾಳಿಯ ಕುರಿತು ಪ್ರಸ್ತಾಪಿಸಿ, ‘ನಿಮ್ಮ ಸಂಕಷ್ಟಗಳನ್ನು ಕಂಡು ದೇಶದ ಜನ ಮರುಗಿದ್ದಾರೆ, ಧೈರ್ಯ ಕಂಡು ಬೆರಗಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ನೋವು ತಂದರೂ, ನೀವು ಸಂಸತ್ತಿನಲ್ಲಿ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತಿರುವುದು ಪ್ರೇರಣಾದಾಯಕ’ ಎಂದು ಮೋದಿ ಉಲ್ಲೇಖಿಸಿದ್ದಾರೆ. ಅಲ್ಲದೆ, ದೇಶಸೇವೆಯಲ್ಲಿ ಮುಂದುವರಿಯಲು ನಿಮಗೆ ಆರೋಗ್ಯ ಮತ್ತು ಶಕ್ತಿ ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!: ಸತ್ಯ ತಿಳಿಯಲು ಈ ವಿಡಿಯೋ ನೋಡಿ

ಪ್ರಧಾನಿಯ ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸದಾನಂದನ್ ಮಾಸ್ಟರ್, ‘ಪ್ರಧಾನಮಂತ್ರಿಯಿಂದ ಬಂದ ಈ ಅಪರೂಪದ ಪ್ರೋತ್ಸಾಹದ ಮಾತುಗಳು ಮತ್ತು ಪ್ರಶಂಸೆ ನನ್ನ ಸೇವಾ ಸಂಕಲ್ಪಕ್ಕೆ ಇನ್ನಷ್ಟು ಬಲ ನೀಡುತ್ತದೆ’ ಎಂದು ಹೇಳಿದ್ದಾರೆ. ಮೋದಿ ಜಿ ಅವರ ಪ್ರೇರಣಾದಾಯಕ ಮಾತುಗಳು ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಸಮರ್ಪಣೆಯಿಂದ ಕೆಲಸ ಮಾಡಲು ಉತ್ತೇಜನ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ