ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

ಕ್ಷೇತ್ರ ಪುನರ್ ವಿಂಗಡಣೆ (Delimitation) ಪ್ರಕ್ರಿಯೆಯೊಂದಿಗೆ ಮಹಿಳಾ ಮೀಸಲಾತಿ ವಿಧೇಯಕವನ್ನು ಜೋಡಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಉಂಟಾಗಿರುವ ಗೊಂದಲಗಳ ನಡುವೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಮಧ್ಯೆ ಇಂದು ತೀವ್ರ ವಾಕ್ಸಮರ ನಡೆದಿದೆ. ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದ ವಿಡಿಯೋಗೆ ಕೇಂದ್ರ ಸಚಿವ ಕಿರಣ್ ರಿಜಿಜು ಕಾಮೆಂಟ್ ಮಾಡಿದ್ದು, ಈಗಲಾದರೂ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲ ನೀಡುವಂತೆ ಸವಾಲು ಹಾಕಿದರು. ಇದಾದ ನಂತರ ಇಬ್ಬರು ನಡುವೆ ಪರಸ್ಪರ ಕಾಮೆಂಟ್​​ಗಳ ದಾಳಿ ಆರಂಭವಾಯಿತು.

ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ
Kiren Rijiju Rahul Gandhi
Image Credit source: PTI

Updated on: Aug 08, 2026 | 4:32 PM

ನವದೆಹಲಿ, ಆಗಸ್ಟ್ 8: ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವ್ಯಂಗ್ಯವಾಡಿದ್ದರು. ಇದರಿಂದ ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಮಹಿಳಾ ಸ್ವಾತಂತ್ರ್ಯದ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು “ಪಾಸಿಟಿವ್ ಸಂದೇಶ” ಎಂದು ಬಣ್ಣಿಸಿದ ಕಿರಣ್ ರಿಜಿಜು, “ಮಹಿಳೆಯರ ವಿಷಯದಲ್ಲಿ ರಾಹುಲ್ ಗಾಂಧಿಯ ಮನಸ್ಸಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ” ಎಂದು ಕಾಲೆಳೆದರು. ಇದಕ್ಕೆ ರಾಹುಲ್ ಗಾಂಧಿಯೂ ತಿರುಗೇಟು ನೀಡಿದ್ದಾರೆ.

ಕಿರಣ್ ರಿಜಿಜು ಅವರ ಕಾಮೆಂಟ್​​ಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಈ ಮಸೂದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್​ವಿಂಗಡಣೆಗೆ ಏಕೆ ಜೋಡಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು.


ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನವು ಬಹುತೇಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಕ್ಷೇತ್ರ ಪುನರ್​ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ಕುರಿತು ಕಿರಣ್ ರಿಜಿಜು ಕಳೆದ ವಾರದಲ್ಲಿ ರಾಹುಲ್ ಗಾಂಧಿ ಅವರನ್ನು ಹಲವು ಬಾರಿ ಸಂಪರ್ಕಿಸಿದ್ದಾರೆ. ಇದು ಸಂವಿಧಾನ ತಿದ್ದುಪಡಿ ವಿಧೇಯಕವಾಗಿರುವುದರಿಂದ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಆದರೆ, ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಂತವಾಗಿ ಈ ಸಂಖ್ಯಾಬಲವಿಲ್ಲ. ಹೀಗಾಗಿ ಈ ಸಂಪರ್ಕ ಸಭೆಗಳು ನಡೆದಿವೆ.

YouTube video player
ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ ನಡುವಿನ ವಾಗ್ದಾಳಿ:

ಇಂದು ಕೂಡ ಈ ಮಸೂದೆಗೆ ಬೆಂಬಲ ನೀಡುವಂತೆ ಸಚಿವ ಕಿರಣ್ ರಿಜಿಜು ಮತ್ತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದರು. ಸೂಕ್ತ ಸಮಯ ನೋಡಿದ ಸಚಿವರು, ಮಹಿಳೆಯರಿಗೆ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕೆಂದು ರಾಹುಲ್ ಗಾಂಧಿ ಕರೆ ನೀಡಿದ್ದ ವಿಡಿಯೋವನ್ನು ಹಂಚಿಕೊಂಡು, ವಿರೋಧ ಪಕ್ಷದ ನಾಯಕರಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯು ಮಾತ್ರ ಬಳಸಲಾಗಿದೆ’; ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರ ಸ್ಪಷ್ಟನೆ

ರಾಹುಲ್ ಗಾಂಧಿಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಇದು ಕಾಂಗ್ರೆಸ್ ಕಡೆಯಿಂದ ಪಾಸಿಟಿವ್ ಸಂದೇಶವೆಂದು ತೋರುತ್ತದೆ. ಮಹಿಳೆಯರ ಕುರಿತು ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ” ಎಂದು ಹೇಳಿದರು. ಅಲ್ಲದೆ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಧೇಯಕವನ್ನು ಬೇಷರತ್ತಾಗಿ ಬೆಂಬಲಿಸಬೇಕೆಂದು ಅವರು ಕೋರಿದರು.


ಈ ಪ್ರತಿಕ್ರಿಯೆಗೆ 2 ಗಂಟೆಗಳ ಒಳಗಾಗಿ ರಾಹುಲ್ ಗಾಂಧಿ ಅವರಿಂದ ತಿರುಗೇಟು ಬಂದಿದೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ 2023ರಲ್ಲೇ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಗೊಂಡಿದೆ ಎಂಬುದನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಿರಣ್ ರಿಜಿಜು ಅವರಿಗೆ ನೆನಪಿಸಿದರು. “ಕಾಂಗ್ರೆಸ್ ಸಂಪೂರ್ಣ ಬೆಂಬಲದೊಂದಿಗೆ ವಿಧೇಯಕವನ್ನು ಈಗಾಗಲೇ ಸರ್ವಾನುಮತದಿಂದ ಅಂಗೀಕರಿಸಲಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

“ಪ್ರಶ್ನೆ ಏನೆಂದರೆ, 3 ವರ್ಷಗಳ ನಂತರವೂ ಇದನ್ನು ಏಕೆ ಜಾರಿಗೆ ತಂದಿಲ್ಲ ಮತ್ತು ಈಗ ನೀವು ಅದನ್ನು ಅನಗತ್ಯವಾಗಿ ಕ್ಷೇತ್ರ ಪುನರ್ ವಿಂಗಡಣೆಗೆ ಏಕೆ ಜೋಡಿಸಲು ಬಯಸುತ್ತೀರಿ?” ಎಂದು ರಾಹುಲ್ ಗಾಂಧಿ ಮತ್ತಷ್ಟು ಪ್ರಶ್ನಿಸಿದರು. ಕೇಂದ್ರ ಸರ್ಕಾರವು 2023ರ ಕಾಯ್ದೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಿಚ್ಚು: ರಾಹುಲ್ ಗಾಂಧಿಗೆ ನಿಷ್ಠಾವಂತ ಕಾರ್ಯಕರ್ತರ ಪತ್ರ

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ:

ಮಹಿಳಾ ಮೀಸಲಾತಿ ವಿಧೇಯಕ ಅಥವಾ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು 2023ರಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದವು. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಉದ್ದೇಶ ಹೊಂದಿದೆ. ಆದರೆ, 2023ರ ಕಾಯ್ದೆಯು ಅದರ ಜಾರಿಯನ್ನು ಭವಿಷ್ಯದ ಜನಗಣತಿಗೆ ಜೋಡಿಸಿತ್ತು. ಇದರಿಂದಾಗಿ ಇದರ ಅನುಷ್ಠಾನವು 2034ರ ನಂತರಕ್ಕೆ ತಳ್ಳಲ್ಪಡುತ್ತಿತ್ತು. ಹೊಸ ವಿಧೇಯಕವು 2029ರ ಲೋಕಸಭಾ ಚುನಾವಣೆಗೆ ಮೊದಲು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು 2011ರ ಜನಗಣತಿಯನ್ನು ಬಳಸಿಕೊಳ್ಳಲು ಬಯಸುತ್ತದೆ. ಆದರೆ ಸಂಸದೀಯ ಕ್ಷೇತ್ರಗಳನ್ನು ಮರುರಚಿಸಲು ವಿಧೇಯಕವನ್ನು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಜೋಡಿಸುವ ಸರ್ಕಾರದ ನಡೆ ಬಿಕ್ಕಟ್ಟಿಗೆ ಕಾರಣವಾಗಿದೆ.


ಈ ಪ್ರಕ್ರಿಯೆಯಿಂದ ಲೋಕಸಭಾ ಒಟ್ಟು ಸೀಟುಗಳ ಸಂಖ್ಯೆ 543ರಿಂದ 850ಕ್ಕೆ ಏರಿಕೆಯಾಗಲಿದೆ. ಅವುಗಳಲ್ಲಿ ಶೇ. 33 ಅಂದರೆ 273 ಸೀಟುಗಳು ಮಹಿಳೆಯರಿಗೆ ಕಾಯ್ದಿರಿಸಲ್ಪಡುತ್ತವೆ. 2011ರ ಜನಗಣತಿಯ ಆಧಾರದ ಮೇಲೆ ಜನಸಂಖ್ಯೆ-ಆಧಾರಿತ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ, ದಕ್ಷಿಣದ ರಾಜ್ಯಗಳಿಗಿಂತ ಜನಸಂಖ್ಯೆ ಬೆಳವಣಿಗೆ ಹೆಚ್ಚಾಗಿರುವ ಉತ್ತರ ಭಾರತಕ್ಕೆ ಅನ್ಯಾಯವಾಗಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ಕಳೆದ ಏಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ 131ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ಪ್ರಯತ್ನ ವಿಫಲವಾಗಿತ್ತು. ಈಗ ಸರ್ಕಾರ ಮುಂಗಾರು ಅಧಿವೇಶನದಲ್ಲೇ ಈ ಮಸೂದೆಯನ್ನು ಅಂಗೀಕರಿಸಲು ತನ್ನ ಪ್ರಯತ್ನವನ್ನು ಪುನರಾರಂಭಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sat, 8 August 26

Loading...
Unable to load recommendations.
Follow Us