‘ಡೀಲ್ ಮಾಡಲು ಯಾರಾದರೂ 26 ದಿನ ಹಸಿವಿನಿಂದ ಇರುತ್ತಾರಾ?’: ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸೋನಂ ವಾಂಗ್ಚುಕ್
ಸೋನಮ್ ವಾಂಗ್ಚುಕ್ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ನಂತರ, ಸಚಿವರ ಸಮ್ಮುಖದಲ್ಲಿ ಉಪವಾಸ ಮುರಿದಿದ್ದಕ್ಕೆ ಎದುರಾದ ಟೀಕೆಗಳಿಗೆ ವೀಡಿಯೊ ಸಂದೇಶದ ಮೂಲಕ ಉತ್ತರ ನೀಡಿದ್ದಾರೆ. 11 ಕೆಜಿ ತೂಕ ಕಳೆದುಕೊಂಡು ಐಸಿಯುನಲ್ಲಿ ದಾಖಲಾಗಿದ್ದ ವಾಂಗ್ಚುಕ್, ಸರ್ಕಾರದೊಂದಿಗೆ 'ಡೀಲ್' ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಜೆಪಿ ವಕ್ತಾರರು ಅವರ ನಿರ್ಧಾರವನ್ನು ಸ್ವಾಗತಿಸಿದರೂ, ಪರೀಕ್ಷಾ ಅಕ್ರಮಗಳ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ದೆಹಲಿ, ಜು.25: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಪರೀಕ್ಷಾ ಅಕ್ರಮ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ನಡೆಸುತ್ತಿದ್ದ 26 ದಿನಗಳ ಸತತ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ಬೆನ್ನಲ್ಲೇ, ಲಡಾಖ್ನ ಪ್ರಖ್ಯಾತ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ತಮ್ಮ ಬೆಂಬಲಿಗರು ಹಾಗೂ ವಿಮರ್ಶಕರನ್ನು ಉದ್ದೇಶಿಸಿ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಮನವೋಲಿ ಅವರ ಸತ್ಯಾಗ್ರಹವನ್ನು ಕೊನೆಗೊಳಿಸಿದಕ್ಕೆ ಇದೀಗ ಭಾರೀ ಟೀಕೆಗಳು ಬರುತ್ತಿದೆ. ಇದಕ್ಕೆ ವಾಂಗ್ಚುಕ್ ಅವರು ಸರಿಯಾಗಿ ಉತ್ತರ ನೀಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಿಂದ ಆಸ್ಪತ್ರೆಯ ಐಸಿಯು ವಾರ್ಡ್ಗೆ ದಾಖಲಾಗಿದ್ದ ವಾಂಗ್ಚುಕ್ ಅವರು, 26 ದಿನಗಳ ಸುದೀರ್ಘ ಹಸಿವಿನ ನಂತರವೂ ನಾನು ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ? ಎಂದು ಪ್ರಶ್ನಿಸಿದ್ದಾರೆ. ಆಸ್ಪತ್ರೆಯ ಹಾಸಿಗೆಯಿಂದಲೇ ರೆಕಾರ್ಡ್ ಮಾಡಿದ 22 ನಿಮಿಷಗಳ ವೀಡಿಯೊದಲ್ಲಿ ಮಾತನಾಡಿದ ಅವರು “ಸ್ವಲ್ಪ ಬೇಸರ, ಆಶ್ಚರ್ಯ ಹಾಗೂ ಕೋಪದಿಂದ ಈ ವೀಡಿಯೊ ಮಾಡುತ್ತಿದ್ದೇನೆ. 26 ದಿನಗಳ ಹಸಿವಿನಿಂದಾಗಿ ದೇಹದ ಸ್ನಾಯುಗಳು ಕ್ಷೀಣಿಸಿವೆ, ಸುಮಾರು 11 ಕೆಜಿ ತೂಕ ಕಡಿಮೆಯಾಗಿದೆ ಮತ್ತು ಅಂಗಾಂಗಗಳಿಗೆ ತೀವ್ರ ಹಾನಿಯಾಗಿದೆ” ಎಂದು ನೋವು ತೋಡಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಕೇಂದ್ರ ಸಚಿವರಾದ ಜೇಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ಉಪವಾಸ ಮುರಿದಿದ್ದಕ್ಕೆ ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಅವರು, “ಸರ್ಕಾರದೊಂದಿಗೆ ಡೀಲ್ ಮಾಡಿಕೊಳ್ಳಲು ಯಾರಾದರೂ 26 ದಿನ ಹಸಿವಿನಿಂದ ಬಳಲುತ್ತಾರೆಯೇ? ಡೀಲ್ ಮಾಡಿಕೊಳ್ಳುವುದಿದ್ದರೆ ದೆಹಲಿಯ ಭಾರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಕೂರುವ ಬದಲು ಏಸಿ ಕೊಠಡಿಯಲ್ಲಿ ಕುಳಿತು ಮಾಡಬಹುದಿತ್ತಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: “ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮತ್ತೊಂದೆಡೆ, ವಾಂಗ್ಚುಕ್ ಅವರು ಉಪವಾಸ ಹಿಂಪಡೆದಿರುವುದನ್ನು ಸಿಜೆಪಿ (CJP) ವಕ್ತಾರ ಅಶುತೋಷ್ ರಂಕಾ ಸ್ವಾಗತಿಸಿದ್ದಾರೆ. “ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದ ಕಾರಣ ನಾವೇ ಉಪವಾಸ ಹಿಂಪಡೆಯಲು ವಿನಂತಿಸುತ್ತಿದ್ದೆವು. ಅವರು ಉಪವಾಸ ಅಂತ್ಯಗೊಳಿಸಿರುವುದು ಸಂತಸ ತಂದಿದೆ, ಆದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ” ಎಂದಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




