AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಬೀದಿ ನಾಯಿ ದಾಳಿ, 60ಕ್ಕೂ ಹೆಚ್ಚು ಮಂದಿಗೆ ಗಾಯ

ಉತ್ತರ ಪ್ರದೇಶದ ಬುಡೌನ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬೀದಿ ನಾಯಿ ದಾಳಿ ನಡೆಸಿ, 60ಕ್ಕೂ ಹೆಚ್ಚು ಅತಿಥಿಗಳಿಗೆ ಗಾಯಗಳಾಗಿವೆ. ವಧು ಬೀಳ್ಕೊಡುವ ಸಂದರ್ಭದಲ್ಲಿ ನಡೆದ ಈ ಘಟನೆ ಕಾಲ್ತುಳಿತಕ್ಕೆ ಕಾರಣವಾಯಿತು. ಗಾಯಗೊಂಡವರಿಗೆ ರೇಬೀಸ್ ಲಸಿಕೆ ನೀಡಲಾಗಿದ್ದು, ಸ್ಥಳೀಯರು ಬೀದಿ ನಾಯಿಗಳ ನಿರ್ವಹಣೆಯಲ್ಲಿ ಪುರಸಭೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಬೀದಿ ನಾಯಿ ದಾಳಿ, 60ಕ್ಕೂ ಹೆಚ್ಚು ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ Image Credit source: Free Press Journal
ನಯನಾ ರಾಜೀವ್
|

Updated on: Apr 23, 2026 | 8:15 AM

Share

ಲಕ್ನೋ, ಏಪ್ರಿಲ್ 23: ಮದುವೆ(Marriage) ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು, ವಧುವನ್ನು ಬೀಳ್ಕೊಡುವ ಭಾವುಕ ಕ್ಷಣ ಅದು. ಆ ಸಮಯದಲ್ಲಿ ಬೀದಿ ನಾಯಿ ಮಂಟಪಕ್ಕೆ ನುಗ್ಗಿ ಅತಿಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಭಾಂಗಣದಲ್ಲಿ ಕಾಲ್ತುಳಿತದಂತಹ ಸನ್ನಿವೇಶ ಬಿಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ಅಭಿನಂದನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ಘಟನೆ ಜರುಗಿದೆ. ನಾಯಿ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಮನಬಂದಂತೆ ದಾಳಿ ಮಾಡಲಾರಂಭಿಸಿತು. ಇದರಿಂದ ಭಯಭೀತರಾದ ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಗಾಗಿ ಓಡಲಾರಂಭಿಸಿದರು. ಈ ಅವಸರದಲ್ಲಿ ಕೆಲವರು ಬಿದ್ದು ಗಾಯಗೊಂಡರೆ, ಇನ್ನು ಕೆಲವರು ಕಾಲ್ತುಳಿತದಂತಹ ಪರಿಸ್ಥಿತಿಗೆ ಸಿಲುಕಿದರು.

ಸಭಾಂಗಣದ ಒಳಗೆ ತನ್ನ ಅಟ್ಟಹಾಸ ಮೆರೆದ ನಾಯಿ, ನಂತರ ರಸ್ತೆಗೆ ಜಿಗಿದು ದಾರಿಹೋಕರು ಮತ್ತು ಅಂಗಡಿಯವರ ಮೇಲೂ ದಾಳಿ ನಡೆಸಿತು. ಅಷ್ಟಕ್ಕೇ ನಿಲ್ಲದೆ ಸಮೀಪದ ಹಳ್ಳಿಗೆ ಓಡಿಹೋಗಿ ಅಲ್ಲಿನ ದನಕರುಗಳನ್ನೂ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 9 ವರ್ಷದ ಮಗುವಿನಿಂದ ಹಿಡಿದು 66 ವರ್ಷದ ವೃದ್ಧರವರೆಗೆ ಈ ದಾಳಿಗೆ ತುತ್ತಾಗಿದ್ದಾರೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ಮುಗಿಬಿದ್ದ ಜನ ಗಾಯಗೊಂಡವರನ್ನು ತಕ್ಷಣ ಬಿಸೌಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಸಿಎಚ್‌ಸಿ ವೈದ್ಯಾಧಿಕಾರಿ ಅರವಿಂದ್ ವರ್ಮಾ ಅವರ ಪ್ರಕಾರ, ಅಂದು ಸುಮಾರು 109 ಜನರು ರೇಬೀಸ್ ವಿರೋಧಿ ಚುಚ್ಚುಮದ್ದಿಗಾಗಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ 60ಕ್ಕೂ ಹೆಚ್ಚು ಜನರು ಮದುವೆಗೆ ಬಂದ ಅತಿಥಿಗಳಾಗಿದ್ದಾರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಈಗ ಬಿಡುಗಡೆ ಮಾಡಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಕೋಪಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಬೀದಿ ನಾಯಿಗಳ ನಿರ್ವಹಣೆಗೆ ಪುರಸಭೆ ಬಜೆಟ್‌ನಲ್ಲಿ ಹಣ ಖರ್ಚು ಮಾಡುತ್ತಿದ್ದರೂ, ಇಂತಹ ಅಪಾಯಕಾರಿ ನಾಯಿಗಳು ಮುಕ್ತವಾಗಿ ತಿರುಗಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಜನರು ಕಿಡಿಕಾರಿದ್ದಾರೆ.

ವಿಷಯ ತಿಳಿದ ತಕ್ಷಣ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬಿಸೌಲಿ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಮತ್ತು ದಾಳಿ ಮಾಡಿದ ನಾಯಿಯನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮದುವೆಯಂತಹ ಮಂಗಳಕರ ಸಮಾರಂಭಗಳು ಇಂತಹ ಅನಿರೀಕ್ಷಿತ ಘಟನೆಗಳಿಂದ ಕಹಿ ನೆನಪಾಗಿ ಉಳಿಯುವುದು ದುರದೃಷ್ಟಕರ. ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಅವುಗಳಿಗೆ ಲಸಿಕೆ ಹಾಕದಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us