
ನವದೆಹಲಿ, ಆಗಸ್ಟ್ 20: ದೆಹಲಿಯಲ್ಲಿ ಜುಲೈ 20ರಂದು ನಡೆದ ನೀಟ್ (NEET) ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪೋಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರದ ಕುರಿತು ಸ್ವತಂತ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್(Supreme Court) 5 ಸದಸ್ಯರ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿದೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ನೇತೃತ್ವದ ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು ಹಾಗೂ ಮಾಜಿ ಉನ್ನತ ಪೊಲೀಸ್ ಅಧಿಕಾರಿಗಳ ತಂಡವಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು, ಪ್ರತಿಭಟನಾಕಾರರ ಮೇಲಿನ ಬಲಪ್ರಯೋಗ ಹಾಗೂ ಪೊಲೀಸರ ಮೇಲಿನ ದಾಳಿ ಈ ಎರಡೂ ಕಡೆಯ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ
ಉನ್ನತ ಮಟ್ಟದ ವಿಚಾರಣಾ ಸಮಿತಿಯಲ್ಲಿರುವ ಪ್ರಮುಖರು:
ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ (ಅಧ್ಯಕ್ಷರು) – ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ.
ನ್ಯಾಯಮೂರ್ತಿ ರವಿ ಶಂಕರ್ ಝಾ – ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ
ನ್ಯಾಯಮೂರ್ತಿ ಶಾಲಿಂದರ್ ಕೌರ್ – ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು.
ಋಷಿ ಕುಮಾರ್ ಶುಕ್ಲಾ – ಸಿಬಿಐ ಮಾಜಿ ನಿರ್ದೇಶಕರು.
ಡಾ. ಎಲ್.ಆರ್. ಬಿಷ್ಣೋಯ್ – ಮೇಘಾಲಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರು (DGP).
ಅತಿಯಾದ ಬಲಪ್ರಯೋಗದ ತನಿಖೆ:
ಯಾವುದೇ ಮುನ್ನೆಚ್ಚರಿಕೆ ನೀಡದೆ ಪೆಲೆಟ್ ಗನ್ಗಳು, ಎಲೆಕ್ಟ್ರಿಕ್ ಬ್ಯಾಟನ್ಗಳು, ಲಾಠಿಚಾರ್ಜ್ ಹಾಗೂ ಅಶ್ರುವಾಯು ಬಳಸಿ ವಿದ್ಯಾರ್ಥಿಗಳಿಗೆ ತೀವ್ರ ಗಾಯಗೊಳಿಸಲಾಗಿದೆಯೇ ಎಂಬುದನ್ನು ಈ ಸಮಿತಿ ಪರಿಶೀಲಿಸಲಿದೆ. ಹಾಗೇ, ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ಕಿರುಕುಳ ಮತ್ತು ಲೈಂಗಿಕ ಕಿರುಕುಳದ ಆರೋಪಗಳಿಗೆ ಮೊದಲ ಆದ್ಯತೆ ನೀಡಿ ತಕ್ಷಣವೇ ಮಧ್ಯಂತರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಪೆಲೆಟ್ ಗನ್ ನಿಷೇಧದ ಪರಿಶೀಲನೆ:
ಪ್ರತಿಭಟನಾಕಾರರಿಗೆ ಚೇತರಿಸಿಕೊಳ್ಳಲಾಗದ ಗಾಯಗಳನ್ನು ಉಂಟುಮಾಡುವ ಪಂಪ್-ಆಕ್ಷನ್ ಗನ್ಗಳು ಹಾಗೂ ಲೋಹದ ಪೆಲೆಟ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೇ ಎಂಬುದರ ಕುರಿತು ಸಮಿತಿ ಶಿಫಾರಸು ಮಾಡಲಿದೆ. ಈ ಕಾರ್ಯಾಚರಣೆಯ ವೇಳೆ ಪೊಲೀಸರು ಸೂಕ್ತ ಸಮವಸ್ತ್ರ ಮತ್ತು ಕಾಣಿಸುವಂತಹ ನೇಮ್ ಪ್ಲೇಟ್ ಧರಿಸಿದ್ದರೇ ಎಂಬುದನ್ನು ಪರಿಶೀಲಿಸಿ, ದೌರ್ಜನ್ಯಕ್ಕೆ ಕಾರಣರಾದ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ.
ಹಾಗೇ, ವಿದ್ಯಾರ್ಥಿಗಳ ರೂಪದಲ್ಲಿ ಬಂದಿದ್ದ ಸಮಾಜಘಾತಕ ಶಕ್ತಿಗಳು ಹಿಂಸಾಚಾರ ನಡೆಸಿ ಕರ್ತವ್ಯನಿರತ ಪೋಲೀಸರಿಗೆ ಗಾಯಗೊಳಿಸಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂಬ ಸರ್ಕಾರದ ಆರೋಪಗಳನ್ನೂ ಈ ಸಮಿತಿ ತನಿಖೆ ಮಾಡಲಿದೆ. ಪ್ರತಿಭಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ, ಡ್ರೋನ್ ವಿಡಿಯೋಗಳು, ಬಾಡಿ ಕ್ಯಾಮೆರಾ ರೆಕಾರ್ಡಿಂಗ್ಗಳು ಮತ್ತು ಪಿಸಿಆರ್ ಕರೆ ದಾಖಲೆಗಳನ್ನು ಸುರಕ್ಷಿತವಾಗಿ ಸಮಿತಿಗೆ ಹಸ್ತಾಂತರಿಸಲು ಪೋಲಿಸ್ ಹಾಗೂ ತನಿಖಾ ಸಂಸ್ಥೆಗಳಿಗೆ ಆದೇಶಿಸಲಾಗಿದೆ.
ಇದನ್ನೂ ಓದಿ: ಬಿಹಾರ ವಿದ್ಯಾರ್ಥಿಗಳ ಪ್ರತಿಭಟನೆ; ಎಕೆ-47 ಬಳಸಿದ ಘಟನೆ, ಕಾನ್ಸ್ಟೆಬಲ್ ಅಮಾನತು ಬಳಿಕ ಎಸ್ಪಿ ತಲೆದಂಡ
ಶೈಲೇಂದ್ರ ಮಣಿ ತ್ರಿಪಾಠಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಪೊಲೀಸರು ಪೆಲೆಟ್ ಗನ್, ಎಲೆಕ್ಟ್ರಿಕ್ ಲಾಠಿ, ಲಾಠಿಚಾರ್ಜ್ ಹಾಗೂ ಅಶ್ರುವಾಯು ಬಳಸಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಮತ್ತು ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಮತ್ತೊಂದೆಡೆ, ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಭಾಗವಹಿಸಿದ್ದರು ಹಾಗೂ ಅವರು ಹಿಂಸಾಚಾರದಲ್ಲಿ ತೊಡಗಿದ್ದರಿಂದ ಹಲವು ಪೋಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ ಎಂದು ಸರ್ಕಾರ ಮತ್ತು ಪೋಲೀಸ್ ಇಲಾಖೆ ವಾದಿಸಿತ್ತು. ಸುಪ್ರೀಂ ಕೋರ್ಟ್ ಎರಡೂ ಕಡೆಯವರ ಆರೋಪಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ