70 ವರ್ಷದವರೆಗೂ ಸರ್ಕಾರಿ ವೈದ್ಯರ ಸೇವೆ ಲಭ್ಯ: ತಜ್ಞ ವೈದ್ಯರ ಬರಕ್ಕೆ ಮದ್ದು ಅರೆದ ಉತ್ತರ ಪ್ರದೇಶ
ಉತ್ತರ ಪ್ರದೇಶ ಸರ್ಕಾರ ತಜ್ಞ ವೈದ್ಯರ ಕೊರತೆ ನೀಗಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ನಿವೃತ್ತ ಸರ್ಕಾರಿ ವೈದ್ಯರು 70 ವರ್ಷದವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಇದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಹಿರಿಯ ವೈದ್ಯರ ಅನುಭವದ ಲಾಭ ದೊರೆಯಲಿದೆ. ಕರ್ನಾಟಕದಲ್ಲಿಯೂ ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು 65ಕ್ಕೆ ಏರಿಸಲಾಗಿದೆ. ಯುಪಿಯ ಈ ನಡೆ ರಾಜ್ಯಕ್ಕೂ ದಿಕ್ಸೂಚಿ.

ಲಕ್ನೋ, ಸೆಪ್ಟೆಂಬರ್ 09: ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ತೀವ್ರ ಸಂಕಷ್ಟ ತಂದಿಟ್ಟಿರುವ ಹೊತ್ತಲ್ಲೇ, ಉತ್ತರ ಪ್ರದೇಶ ಸರ್ಕಾರ ಒಂದು ಮಹತ್ವದ ಗೇಮ್ಚೇಂಜರ್ ನಿರ್ಧಾರ ಕೈಗೊಂಡಿದೆ. ನಿವೃತ್ತರಾಗುವ ಸರ್ಕಾರಿ ವೈದ್ಯರನ್ನು ಮರುನೇಮಕಾತಿ ಮಾಡಿಕೊಂಡು 70 ವರ್ಷ ವಯಸ್ಸಿನವರೆಗೂ ಸೇವೆಯಲ್ಲಿ ಉಳಿಸಿಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ಕರ್ನಾಟಕದಲ್ಲೂ ಸೂಪರ್ ಸ್ಪೆಷಾಲಿಟಿ ವೈದ್ಯರ ಕೊರತೆಯಿಂದ ಬಳಲುತ್ತಿರುವ ಆರೋಗ್ಯ ಇಲಾಖೆಗೆ ಯುಪಿಯ ಈ ನಡೆ ಹೊಸ ದಿಕ್ಸೂಚಿಯಾಗಿ ಗೋಚರಿಸುತ್ತಿದೆ.
ಅನುಭವದ ಸದ್ಬಳಕೆಯೇ ಸರ್ಕಾರದ ಅಸ್ತ್ರ: ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ (CHC) ಪ್ರತಿದಿನ ಗ್ರಾಮೀಣ ಭಾಗದ ಲಕ್ಷಾಂತರ ಬಡ ರೋಗಿಗಳು ಬರುತ್ತಾರೆ. ಹಲವು ದಶಕಗಳ ಕಾಲ ಜಟಿಲ ರೋಗಗಳಿಗೆ ಚಿಕಿತ್ಸೆ ನೀಡಿ ಪಳಗಿದ ಹಿರಿಯ ವೈದ್ಯರ ಕೈಚಳಕ ಮತ್ತು ಅನುಭವ ರೋಗಿಗಳಿಗೆ ನೇರವಾಗಿ ಸಿಗಬೇಕು ಎಂಬುದು ಯುಪಿ ಸರ್ಕಾರದ ಮುಖ್ಯ ಉದ್ದೇಶ.
ತಜ್ಞ ವೈದ್ಯರ ಅಭಾವಕ್ಕೆ ತಾತ್ಕಾಲಿಕ ಮದ್ದು: ಪ್ರಸ್ತುತ ಯುಪಿಯಲ್ಲಿ ವೈದ್ಯರ ನಿವೃತ್ತಿ ವಯಸ್ಸು 65 ವರ್ಷವಿದೆ. ಆದರೆ ಕಾರ್ಡಿಯಾಲಜಿ, ಪೀಡಿಯಾಟ್ರಿಕ್ಸ್, ಗೈನೆಕಾಲಜಿ, ಅರಿವಳಿಕೆ ತಜ್ಞರ ಕೊರತೆ ಹೆಚ್ಚಾಗಿರುವುದರಿಂದ ಅರ್ಹ ವೈದ್ಯರಿಗೆ 70 ವರ್ಷದವರೆಗೆ ಮರುನೇಮಕ ಭಾಗ್ಯ ಕಲ್ಪಿಸಲು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸೂಚನೆ ನೀಡಿದ್ದಾರೆ.
ಮತ್ತಷ್ಟು ಓದಿ: ಕಲಬುರಗಿ, ರಾಯಚೂರಿನಲ್ಲೇ ಅತಿ ಹೆಚ್ಚು ಫೇಕ್ ಡಾಕ್ಟರ್ಸ್: 582 ಕ್ಲಿನಿಕ್ಗಳ ವಿರುದ್ಧ ಆರೋಗ್ಯ ಇಲಾಖೆಯಿಂದ ಶಿಸ್ತುಕ್ರಮ
ಆಸ್ಪತ್ರೆಗಳ ಮೇಲಿನ ಹೊರೆ ಇಳಿಕೆ: ಹಿರಿಯ ವೈದ್ಯರು ನಿರಂತರವಾಗಿ ಕರ್ತವ್ಯದಲ್ಲಿರುವುದರಿಂದ ಕಿರಿಯ ವೈದ್ಯರಿಗೆ ಮಾರ್ಗದರ್ಶನ ಸಿಗುವುದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಗಣನೀಯವಾಗಿ ತಗ್ಗಲಿದೆ.
ಕರ್ನಾಟಕದಲ್ಲೂ 65ಕ್ಕೆ ಏರಿಕೆ: ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ತಜ್ಞರ ಭಾರಿ ಅಭಾವವಿದೆ. ಸೂಪರ್ ಸ್ಪೆಷಾಲಿಟಿ ಶಿಕ್ಷಣ ಮುಗಿಸಿ ವೈದ್ಯರು ಸೇವೆಗೆ ಬರುವಷ್ಟರಲ್ಲೇ ಅವರ ವಯಸ್ಸು 35ರಿಂದ 40 ದಾಟಿರುತ್ತದೆ. ಹೀಗಾಗಿ, ಕೇವಲ 20 ವರ್ಷಗಳ ಸೇವೆಯ ನಂತರ 60ಕ್ಕೆ ನಿವೃತ್ತಿ ಹೊಂದಿದರೆ ರಾಜ್ಯಕ್ಕೆ ಅವರ ಪರಿಣತಿ ಪೂರ್ಣ ಪ್ರಮಾಣದಲ್ಲಿ ದಕ್ಕುವುದಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರವು ಇತ್ತೀಚೆಗೆ ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಿದೆ.
ಪೋಸ್ಟ್
Lucknow, Uttar Pradesh: Deputy Chief Minister Brajesh Pathak says, “The age limit for doctors working in the Medical and Health Department of Uttar Pradesh has been increased to 70 years. This means doctors can continue providing medical services in government hospitals until the… pic.twitter.com/V6jTCmUEmi
— IANS (@ians_india) September 9, 2026
ಡಾ. ಸಿ.ಎನ್. ಮಂಜುನಾಥ್ ಸಮಿತಿಯ ಮೌಲ್ಯಯುತ ಸಲಹೆ: ಜಯದೇವ, ಕಿದ್ವಾಯಿಯಂತಹ ಪ್ರಸಿದ್ಧ ಸಂಸ್ಥೆಗಳಲ್ಲಿ ನುರಿತ ವೈದ್ಯರು ಹೊರಹೋದರೆ ಬದಲಿ ವೈದ್ಯರು ತಕ್ಷಣ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಡಾ. ಸಿ.ಎನ್. ಮಂಜುನಾಥ್ ನೇತೃತ್ವದ ಸಮಿತಿಯು ತಜ್ಞರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಈಗ ಯುಪಿ ಸರ್ಕಾರ70 ವರ್ಷಕ್ಕೆ ವಿಸ್ತರಿಸಿರುವ ಮಾದರಿಯನ್ನು ಕರ್ನಾಟಕ ಸರ್ಕಾರವೂ ಗ್ರಾಮೀಣ ತಜ್ಞರ ಕೊರತೆ ನೀಗಿಸಲು ಅಳವಡಿಸಿಕೊಳ್ಳಬೇಕೇ ಎಂಬ ಕೂಗು ಆರೋಗ್ಯ ವಲಯದಲ್ಲಿ ಕೇಳಿಬರುತ್ತಿದೆ.
ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವ ಯುವ ಎಂಬಿಬಿಎಸ್ ಹಾಗೂ ಎಂಡಿ ಪದವೀಧರರಿಗೆ ಹಿನ್ನಡೆಯಾಗಬಹುದು ಎಂಬ ಆತಂಕ ಒಂದೆಡೆಯಾದರೆ, ಅನುಭವಿ ಕೈಗಳ ಸೇವೆ ಗ್ರಾಮೀಣ ಬಡವರಿಗೆ ಸಂಜೀವಿನಿಯಾಗಲಿದೆ ಎಂಬುದು ತಜ್ಞರ ಅಭಿಮತ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




