ಸಿಕ್ಕ ಸಿಕ್ಕ ಕ್ಲಿನಿಕ್ಗೆ ಹೋಗುವ ಮುನ್ನ ಎಚ್ಚರ! ರಾಜ್ಯದಲ್ಲಿದ್ದಾರೆ 583 ಕ್ಕೂ ಹೆಚ್ಚು ನಕಲಿ ವೈದ್ಯರು
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಕಲಿ ವೈದ್ಯರು ಹಾಗೂ ಕ್ಲಿನಿಕ್ಗಳ ಹಾವಳಿ ಮಿತಿಮೀರಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಈಗಾಗಲೇ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದ್ದು, ಸಾರ್ವಜನಿಕರು ಸಿಕ್ಕ ಸಿಕ್ಕ ಕ್ಲಿನಿಕ್ಗಳಿಗೆ ಹೋಗುವ ಮುನ್ನ ವೈದ್ಯರ ಪ್ರಮಾಣಪತ್ರ ಪರಿಶೀಲಿಸುವಂತೆ ಸೂಚಿಸಲಾಗಿದೆ. ನಕಲಿ ವೈದ್ಯರನ್ನು ಮಟ್ಟಹಾಕಲು ಜಾಗೃತಿ ವಹಿಸಿ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ನಕಲಿ ವೈದ್ಯರು ಮತ್ತು ಕ್ಲಿನಿಕ್ಗಳ ಹಾವಳಿ ಹೆಚ್ಚಾಗಿದೆ.
- ರಾಜ್ಯದಲ್ಲಿ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ.
- ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ಪ್ರಮಾಣಪತ್ರ ಪರಿಶೀಲಿಸಲು ಸೂಚಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 07: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಕಲಿ ಕ್ಲಿನಿಕ್ ಹಾಗೂ ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಕೊವಿಡ್ ಸಾಂಕ್ರಾಮಿಕದ ಬಳಿಕ ಸೂಕ್ತ ಪದವಿ, ತರಬೇತಿ ಹಾಗೂ ನೋಂದಣಿ ಇಲ್ಲದೆಯೇ ತಲೆ ಎತ್ತಿರುವ ಸಾವಿರಾರು ನಕಲಿ ಕ್ಲಿನಿಕ್ಗಳ ವಿರುದ್ಧ ಆರೋಗ್ಯ ಇಲಾಖೆ ಈಗ ಸಮರ ಸಾರಿದೆ.
583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ!
ರಾಜ್ಯದಲ್ಲಿ ಇದುವರೆಗೆ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಆದಾಗ್ಯೂ, ಆರೋಗ್ಯ ಇಲಾಖೆಗೆ ನಕಲಿ ವೈದ್ಯರ ವಿರುದ್ಧ ದೂರುಗಳ ಸುರಿಮಳೆಯೇ ಬರುತ್ತಿದೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ಹೆಸರುಗಳಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ.
ಗಡಿ ಭಾಗದ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕೆಲವರು ‘ಮೊಬೈಲ್ ಕ್ಲಿನಿಕ್’ ಮಾಡಿಕೊಂಡು ಪ್ರತಿದಿನ ಸ್ಥಳ ಮತ್ತು ಫೋನ್ ನಂಬರ್ ಬದಲಾಯಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ನಿರುದ್ಯೋಗಿಗಳು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಎಂಬಿಬಿಎಸ್ ಪದವಿ ಇಲ್ಲದೆ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ
ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಮಾತ್ರೆ ಮತ್ತು ಚಿಕಿತ್ಸೆಯಿಂದ ಸಾರ್ವಜನಿಕರ ಜೀವಕ್ಕೆ ಸಂಚಕಾರ ಒದಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
- ಯಾವುದೇ ಕ್ಲಿನಿಕ್ ಆಸ್ಪತ್ರೆಗೆ ತೆರಳುವ ಮುನ್ನ ವೈದ್ಯರ ಪ್ರಮಾಣಪತ್ರ ಮತ್ತು ಆಸ್ಪತ್ರೆಯ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
- ಸಿಕ್ಕ ಸಿಕ್ಕ ಕ್ಲಿನಿಕ್ಗಳಿಗೆ ಹೋಗಿ ತುರ್ತು ಚಿಕಿತ್ಸೆ ಪಡೆಯುವ ಬದಲು ಅಧಿಕೃತ ವೈದ್ಯರನ್ನು ಮಾತ್ರ ಸಂಪರ್ಕಿಸಬೇಕು.
- ನಕಲಿ ವೈದ್ಯರನ್ನು ಮಟ್ಟಹಾಕಲು ಆರೋಗ್ಯ ಇಲಾಖೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು.
ಇತ್ತೀಚೆಗೆ ಕಲುಷಿತ ಆಹಾರ ನೀಡುತ್ತಿದ್ದ ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದ ಸರ್ಕಾರ, ಈಗ ನಕಲಿ ವೈದ್ಯರ ಜಾಲವನ್ನು ಧ್ವಂಸ ಮಾಡಲು ಮುಂದಾಗಿದೆ. ಸಾರ್ವಜನಿಕರು ಜಾಗರೂಕರಾಗಿದ್ದಾಗ ಮಾತ್ರ ಈ ನಕಲಿ ವೈದ್ಯರ ದಂಧೆಗೆ ಪೂರ್ಣವಿರಾಮ ಇಡಲು ಸಾಧ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




