Uttar Pradesh Rains: ಉತ್ತರ ಪ್ರದೇಶದಲ್ಲಿ ವರುಣಾರ್ಭಟ; ಭೀಕರ ಬಿರುಗಾಳಿ ಮಳೆಗೆ 74 ಮಂದಿ ಸಾವು, ಹಲವೆಡೆ ರೆಡ್ ಅಲರ್ಟ್
ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಇದುವರೆಗೆ 74 ಜನರು ಬಲಿಯಾಗಿದ್ದಾರೆ. ಪ್ರಯಾಗ್ರಾಜ್ ಮತ್ತು ಉನ್ನಾವ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿದ್ದು, ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ 38 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಲಖನೌ, ಮೇ 14: ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ (Uttar Pradesh Rains) ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ ಸುಮಾರು 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ಮುಖ್ಯಾಂಶಗಳು
- ಉತ್ತರ ಪ್ರದೇಶದಾದ್ಯಂತ ಮಳೆ ಮತ್ತು ಗಾಳಿಗೆ 74 ಮಂದಿ ಬಲಿ
- ಪ್ರಯಾಗ್ರಾಜ್ನಲ್ಲಿ ಅತಿ ಹೆಚ್ಚು ಅಂದರೆ 17 ಸಾವು
- ಉನ್ನಾವ್ನಲ್ಲಿ ಬಾಲಕ ಸೇರಿ 7 ಮಂದಿ ದುರ್ಮರಣ.
ಬಿರುಗಾಳಿಯ ರೌದ್ರ ನರ್ತನ
ಹವಾಮಾನ ಇಲಾಖೆಯ ವರದಿಯಂತೆ, ಪಶ್ಚಿಮ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ ಮತ್ತು ದಕ್ಷಿಣ ರಾಜಸ್ಥಾನದಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದಾಗಿ ಗಂಟೆಗೆ 80 ರಿಂದ 100 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ. ಬುಧವಾರ ಮಧ್ಯಾಹ್ನ ಆರಂಭವಾದ ಈ ಹವಾಮಾನ ವೈಪರೀತ್ಯ ಸಂಜೆ ವೇಳೆಗೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟು ಭಾರಿ ಅವಾಂತರ ಸೃಷ್ಟಿಸಿದೆ.
ಉತ್ತರ ಪ್ರದೇಶದ ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿ?
ಭೀಕರ ಮಳೆಗೆ ಪ್ರಯಾಗ್ರಾಜ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ 17 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಉಳಿದಂತೆ ಭದೋಹಿಯಲ್ಲಿ 10, ಫತೇಪುರ್ 8, ಉನ್ನಾವ್ 7, ಬದಾಯೂನ್ 6 ಮತ್ತು ಬರೇಲಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಉನ್ನಾವ್ ಜಿಲ್ಲೆಯ ದಹಿ ಎಂಬಲ್ಲಿ ಮರ ಬಿದ್ದು 70 ವರ್ಷದ ರೈತ ಮೃತಪಟ್ಟರೆ, ಅಸಿವಾನ್ನಲ್ಲಿ 9 ವರ್ಷದ ಬಾಲಕ ಬಲಿಯಾಗಿದ್ದಾನೆ.
ವಿದ್ಯುತ್ ಮತ್ತು ಸಂಚಾರ ವ್ಯತ್ಯಯ
ಬಿರುಗಾಳಿಯ ಆರ್ಭಟಕ್ಕೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಹಲವಾರು ಕಾರುಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ
ಮುಂದಿನ ಕೆಲವು ಗಂಟೆಗಳಲ್ಲಿ ಲಖನೌ, ಉನ್ನಾವ್, ಸೀತಾಪುರ ಮತ್ತು ಪ್ರಯಾಗ್ರಾಜ್ ಸೇರಿದಂತೆ 38 ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಸಿಡಿಲು ಸಹಿತ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮೇ 15 ರಿಂದ ಮತ್ತೆ ತಾಪಮಾನ ಏರಿಕೆಯಾಗಲಿದ್ದು, ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟುವ ನಿರೀಕ್ಷೆಯಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಗಾಳಿ ಮಳೆ ಅಬ್ಬರ: ಉನ್ನಾವ್ನಲ್ಲಿ ವರುಣಾರ್ಭಟದ ರೌದ್ರ ನರ್ತನ ಹೇಗಿತ್ತು ನೋಡಿ!
ಮುಖ್ಯಮಂತ್ರಿ ಕಚೇರಿಯು ಜಿಲ್ಲಾಧಿಕಾರಿಗಳಿಗೆ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಸೂಚಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




