ಓ ಹೆಣ್ಮಗು… ಸ್ಕೂಟಿಯಲ್ಲಿ ಬಂದು ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ! ಮುಂದೇನಾಯ್ತು ನೋಡಿ
ಉತ್ತರಾಖಂಡ್ನ ಖತಿಮಾದಲ್ಲಿ ಸ್ಕೂಟರ್ ಸವಾರ ಮಹಿಳೆಯೊಬ್ಬರು ರಸ್ತೆಗೆ ಬಂದ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಈ ಭೀಕರ ಅಪಘಾತದಲ್ಲಿ ಆನೆಯ ದಂತ ಮುರಿದಿದ್ದು, ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆ ಮುರಿದ ದಂತ ವಶಪಡಿಸಿಕೊಂಡು, ಗಾಯಗೊಂಡ ಆನೆಯ ಆರೋಗ್ಯದ ಮೇಲೆ ನಿಗಾ ಇಡಲು ಬಲೆ ಕ್ಯಾಮರಾಗಳನ್ನು ಅಳವಡಿಸಿದೆ. ಚಾಲಕರು ಅರಣ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ.

ಖತಿಮಾ, ಮೇ.22: ಹೆದ್ದಾರಿಯಲ್ಲಿ ಚಲಿಸುವಾಗ ಮುಂದೆ ಬರುವ ವಾಹನಗಳಿಗೆ ಅಥವಾ ಸಣ್ಣ-ಪುಟ್ಟ ನಾಯಿ, ಬೆಕ್ಕು, ಧನಗಳಿಗೆ ಡಿಕ್ಕಿ ಹೊಡೆಯುವುದಿರುವ ಸುದ್ದಿಗಳನ್ನು ಕೇಳಿರಬಹುದು. ಆದರೆ, ಉತ್ತರಾಖಂಡ್ನ ಖತಿಮಾ ಎಂಬಲ್ಲಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ದೈತ್ಯ ಆನೆಗೇ ನೇರವಾಗಿ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಆನೆಯ ದಂತವೇ ಮುರಿದು ಬಿದ್ದಿದ್ದು, ಗಾಯಗೊಂಡ ಆನೆ ಕಿರುಚುತ್ತಾ ಕಾಡಿನೊಳಗೆ ಓಡಿಹೋಗಿದೆ.
ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಖತಿಮಾದ ‘ಹಿಂದ್ ಪಬ್ಲಿಕ್ ಸ್ಕೂಲ್’ನ ಶಿಕ್ಷಕಿ ನಿಕಿತಾ ಕಪ್ರಿ ಎಂದು ಗುರುತಿಸಲಾಗಿದೆ. ನಿಕಿತಾ ಅವರು ತನಕ್ಪುರದಲ್ಲಿದ್ದ ತಮ್ಮ ತಾಯಿಯ ಸಂಬಂಧಿಕರ ಮನೆಗೆ ಹೋಗಿ, ಮಂಗಳವಾರ ಬೆಳಿಗ್ಗೆ (ಮೇ 19) ಸ್ಕೂಟರ್ನಲ್ಲಿ ವಾಪಸ್ ಬರುತ್ತಿದ್ದರು. ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಅರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಆನೆ ಕಾರಿಡಾರ್ (Elephant Corridor) ವಲಯದಲ್ಲಿ ಆನೆಯೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಿದೆ. ಹಠಾತ್ ಆನೆಯನ್ನು ಕಂಡು ಗಾಬರಿಗೊಂಡ ಶಿಕ್ಷಕಿ, ಸ್ಕೂಟರ್ ನಿಯಂತ್ರಣ ಸಿಗದೆ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು
ಇಲ್ಲಿದೆ ನೋಡಿ ವೈರಲ್ ವಿಡಿಯೋ:
View this post on Instagram
ಅಪಘಾತದ ತೀವ್ರತೆಗೆ ಶಿಕ್ಷಕಿ ನಿಕಿತಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಯ ಮುರಿದ ದಂತವನ್ನು ವಶಕ್ಕೆ ಪಡೆದು ಕಚೇರಿಯಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ದಂತ ಮುರಿದುಕೊಂಡು ನೋವಿನಿಂದ ಕಾಡಿಗೆ ಓಡಿರುವ ಆನೆಯ ಆರೋಗ್ಯದ ಮೇಲೆ ನಿಗಾ ಇಡಲು ಅರಣ್ಯ ಸಿಬ್ಬಂದಿ ಕಾಡಿನೊಳಗೆ ಎರಡು ‘ಟ್ರ್ಯಾಪ್ ಕ್ಯಾಮೆರಾ’ಗಳನ್ನು (Trap Cameras) ಅಳವಡಿಸಿದ್ದಾರೆ. ಸದ್ಯ ಈ ಅಪಘಾತದ ನಂತರದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅರಣ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಮನವಿ ಮಾಡಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

