- Kannada News Photo gallery after Ceasefire Pakistan attacked Jammu and other cities what happens Next Major development between countries
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಜಮ್ಮು, ರಾಜಸ್ಥಾನ, ಪಂಜಾಬ್ನಲ್ಲಿ ಕಟ್ಟೆಚ್ಚರ; ಇಂದು ಏನೆಲ್ಲ ಆಯ್ತು?
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಘೋಷಣೆಯಾಗಿತ್ತು. ಆದರೆ, ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ ನಿರ್ಧಾರದಿಂದ ಭಾರತ ಹಿಂದೆ ಸರಿದಿರಲಿಲ್ಲ. ಮೇ 12ರಂದು ಎರಡೂ ದೇಶಗಳು ಮಾತುಕತೆ ನಡೆಸಲಿದ್ದು, ಅದಾದ ನಂತರ ಉಭಯ ದೇಶಗಳ ನಡುವಿನ ಮುಂದಿನ ನಡೆಯ ಬಗ್ಗೆ ನಿರ್ಧಾರವಾಗಲಿದೆ ಎನ್ನಲಾಗಿತ್ತು. ಆದರೆ, ಅಷ್ಟರವರೆಗೆ ಕಾಯದ ಪಾಕಿಸ್ತಾನ ಇಂದು ರಾತ್ರಿಯೇ ಜಮ್ಮುವಿನಲ್ಲಿ ಡ್ರೋನ್ ದಾಳಿ ನಡೆಸಿದೆ. ಇದರಿಂದ ರಾಜಸ್ಥಾನ, ಪಂಜಾಬ್, ಛತ್ತೀಸ್ಗಢದ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸಂಪೂರ್ಣ ಬ್ಲಾಕ್ಔಟ್ ಮಾಡಲಾಗಿದೆ. ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಏನೆಲ್ಲ ನಡೆಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
Updated on: May 10, 2025 | 9:41 PM

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಕಟ್ಟಡದ ಮೇಲೆ ಶನಿವಾರ ಮುಂಜಾನೆ ಶೆಲ್ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಒಬ್ಬ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಪಟ್ಟಣದಲ್ಲಿರುವ ಹೆಚ್ಚುವರಿ ಉಪ ಆಯುಕ್ತ (ರಾಜೌರಿ) ರಾಜ್ ಕುಮಾರ್ ಥಾಪಾ ಅವರ ಅಧಿಕೃತ ನಿವಾಸಕ್ಕೆ ಫಿರಂಗಿ ಶೆಲ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಅವರ ಜತೆಗಿದ್ದ ಇಬ್ಬರು ಸಿಬ್ಬಂದಿಗಳಿಗೂ ಗಾಯಗಳಿವೆ. ರಾಜ್ ಕುಮಾರ್ ಥಾಪಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವ ಇಬ್ಬರು ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದೆ.

ಇಂದು ಮುಂಜಾನೆ, ಭಾರತ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದ ಹಲವು ಕಡೆ ಸ್ಫೋಟಗಳ ಶಬ್ದಗಳು ಕೇಳಿಬಂದಿದೆ. ಪಾಕಿಸ್ತಾನವು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ರಾಜಧಾನಿ ಇಸ್ಲಾಮಾಬಾದ್ ಬಳಿಯ ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ನೂರ್ ಖಾನ್ ವಾಯುನೆಲೆ, ಚಕ್ವಾಲ್ ನಗರದ ಮುರಿಯ್ ವಾಯುನೆಲೆ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಗಳ ಮೇಲೆ ಭಾರತ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿದೆ

ಮುಂದಿನ ಬಾರಿ ಭಾರತದ ಮೇಲೆ ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದಕ ದಾಳಿಗಳನ್ನು ಯುದ್ಧ ಕೃತ್ಯಗಳೆಂದು ಪರಿಗಣಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ. ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ದೇಶದ ವಿರುದ್ಧದ ಯುದ್ಧ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲಾಗುವುದು ಎಂದು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಎರಡು ದಿನಗಳ ಕಾಲ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಪ್ರಯತ್ನಿಸಿದ ನಂತರ ಭಾರತ ಸರ್ಕಾರ ಈ ಹೇಳಿಕೆ ನೀಡಿದೆ. ಪಾಕಿಸ್ತಾನದ ಡ್ರೋನ್ ದಾಳಿಯನ್ನು ಪ್ರಚೋದನಕಾರಿ ಕೃತ್ಯ ಎಂದು ವಿದೇಶಾಂಗ ಇಲಾಖೆ ಟೀಕಿಸಿದೆ.

ಸಮುದಾಯ ಜಾಗೃತಿ ಅಭಿಯಾನಗಳನ್ನು ಹೊರತುಪಡಿಸಿ ಮಾಧ್ಯಮಗಳು ತಮ್ಮ ಟಿವಿ ಕಾರ್ಯಕ್ರಮಗಳಲ್ಲಿ ವಾಯುದಾಳಿಯ ವೇಳೆ ಮೊಳಗಿಸಲಾಗುವ ನಾಗರಿಕ ರಕ್ಷಣಾ ಸೈರನ್ಗಳ ಶಬ್ದಗಳನ್ನು ಬಳಸದಂತೆ ಎಲ್ಲಾ ಮಾಧ್ಯಮ ವಾಹಿನಿಗಳಿಗೆ ಆದೇಶ ನೀಡಿದೆ. ನಾಗರಿಕ ರಕ್ಷಣಾ ಕಾಯ್ದೆ, 1968ರ ಅಡಿಯಲ್ಲಿ ಹೊರಡಿಸಲಾದ ಈ ಸೂಚನೆ, ಸೈರನ್ ಶಬ್ದಗಳನ್ನು ಆಗಾಗ ಟಿವಿಗಳಲ್ಲಿ ಬಳಸುವುದರಿಂದ ಸಾರ್ವಜನಿಕರ ಸಂವೇದನೆ ಕಡಿಮೆಯಾಗುತ್ತದೆ. ನಿಜವಾದ ವಾಯುದಾಳಿಯ ಸಮಯದಲ್ಲಿ ಸೈರನ್ ಮೊಳಗಿಸಿದಾಗಲೂ ಇದರಿಂದ ಜನರ ಗೊಂದಲಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಅಮೆರಿಕದ ನಡುವೆ ಮಧ್ಯಸ್ಥಿಕೆ ವಹಿಸಿದ್ದಾರೆ. ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು "ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ" ತೋರಿಸಿದ್ದಕ್ಕಾಗಿ ಶ್ಲಾಘಿಸಿದ್ದರು. ದಿನಗಟ್ಟಲೆ ಉಲ್ಬಣಗೊಳ್ಳುತ್ತಿದ್ದ ಮಿಲಿಟರಿ ಸಂಘರ್ಷದ ನಂತರ ಯುದ್ಧವನ್ನು ನಿಲ್ಲಿಸಿ ಶಾಂತತೆಯನ್ನು ಪುನಃಸ್ಥಾಪಿಸುವ ಎರಡೂ ದೇಶಗಳ ನಿರ್ಧಾರವನ್ನು ಅವರು ಶ್ಲಾಘಿಸಿದ್ದರು.

ಕದನವಿರಾಮಕ್ಕೆ ಒಪ್ಪಿದರೂ ಸಿಂಧೂ ನದಿಯ ನೀರನ್ನು ಭಾರತ ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಐದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಕದನ ವಿರಾಮ ಘೋಷಣೆ ನಂತರ ಎಲ್ಲ ಮುಕ್ತವಾಗುವುದಿಲ್ಲ. ಹಾಗಾಗಿ ಈ ಐದು ನಿರ್ಧಾರಗಳು ಸ್ಥಿರವಾಗಿರುತ್ತದೆ ಎಂದು ಹೇಳಿತ್ತು ಅದರ ಬೆನ್ನಲ್ಲೇ ಪಾಕಿಸ್ತಾನ ಇಂದು ರಾತ್ರಿ ಉದ್ಧಟತನ ತೋರಿದೆ.

ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು ಸತ್ಯ. ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಲಿದೆ. ಮೇ 12 ರಂದು ಮತ್ತೆ ಮಾತುಕತೆ ನಡೆಯಲಿದೆ. ನಮಗೆ ಪಾಕಿಸ್ತಾನ ಕರೆ ಮಾಡಿತು. ಎರಡೂ ಕಡೆಯವರು ದಾಳಿ ನಿಲ್ಲಿಸಲು ಒಪ್ಪಿದ್ದೇವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಸ್ಪಷ್ಟನೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವೆ ತಕ್ಷಣದ ಕದನ ವಿರಾಮದ ಬಗ್ಗೆ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ ಕೆಲವೇ ನಿಮಿಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹೇಳಿಕೆ ನೀಡಿದ್ದು, ಇಸ್ಲಾಮಾಬಾದ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸಿದೆ" ಎಂದಿದ್ದರು. ಆದರೆ, ಪಾಕಿಸ್ತಾನವೇ ಕದನವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಮಾಡಿದೆ.

ಪಾಕಿಸ್ತಾನವೇ ಭಾರತದ ಬಳಿ ಕದನವಿರಾಮವನ್ನು ಪ್ರಸ್ತಾಪಿಸಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೂ ತನ್ನ ಹಳೇ ಚಾಳಿ ಮುಂದುವರೆಸಿರುವ ಪಾಕಿಸ್ತಾನ ಕದನವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ. ಇಂದು ಸಂಜೆ 5 ಗಂಟೆಯಿಂದ ಕದನವಿರಾಮ ಘೋಷಿಸಲಾಗಿತ್ತು. ಆದರೆ, ಇಂದು ರಾತ್ರಿ 8.45ರ ಸುಮಾರಿಗೆ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಲಾಗಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಚ್ ಗಡಿಯಲ್ಲಿ ಹೊಸ ಡ್ರೋನ್ಗಳು ಪತ್ತೆಯಾಗಿವೆ, ಶ್ರೀನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.



















