Bangalore Rains: ಬೆಂಗಳೂರಿನಲ್ಲಿ ಮಳೆ ಅವಾಂತರ ಒಂದೇ, ಎರಡೇ… ಇಲ್ಲಿವೆ ಫೋಟೊಸ್
ಬೆಂಗಳೂರು, ಅಕ್ಟೋಬರ್ 21: ಮುಳುಗಿದ ಬೈಕ್ಗಳು, ನಿವಾಸಿಗಳು ಮನೆಯಲ್ಲೇ ಲಾಕ್, ರಸ್ತೆ ತುಂಬಾ ನೀರಿನ ಹರಿವು, ಅದರಲ್ಲೇ ಬೈಕ್, ಆಟೋ ತಳ್ಳಿಕೊಂಡು ಸಾಗುತ್ತಿರುವ ಸವಾರರು! ಈ ದೃಶ್ಯಗಳೆಲ್ಲ ಕಂಡುಬಂದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ಭಾನುವಾರ ರಾತ್ರಿ, ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆ ಬೆಂಗಳೂರು ಜನರನ್ನು ಅಕ್ಷರಶಃ ಕಂಗಾಲಾಗಿಸಿತ್ತು.
Updated on: Oct 21, 2024 | 2:32 PM

ಹೆಚ್ಎಸ್ಆರ್ ಲೇಔಟ್ನಲ್ಲಿ ಮಳೆ ಅವಾಂತರದಿಂದಾಗಿ ಶಾಲೆಗೆ ಜಲದಿಗ್ಬಂಧನ ಉಂಟಾಯಿತು. 10ಕ್ಕೂ ಹೆಚ್ಚು ಬಸ್ಗಳು ಮುಳುಗಡೆಯಾದವು. ಮಳೆಯಿಂದಾಗಿ ಫ್ರೀಡಂ ಶಾಲೆ ಸೇರಿದಂತೆ ಸುತ್ತ ಮುತ್ತ ಕೆರೆಯಂತಾಗಿತ್ತು. ಶಾಲೆ ಹೊರಗೆ ನಿಂತಿರುವ ಬಸ್ಗಳು ಕೂಡ ನೀರುಪಾಲಾದವು.

ಜೆಜೆ ನಗರದ ವಿಎಸ್ ಗಾರ್ಡನ್ನಲ್ಲಿಯೂ ನಿವಾಸಿಗಳ ಬದುಕೇ ನರಕಮಯವಾಯಿತು. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಕೊಳಚೆ ನೀರು ಹೊರಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು.

ಕೋರಮಂಗಲದಲ್ಲಿ ಮುಖ್ಯರಸ್ತೆಗಳೇ ಹಳ್ಳ, ಕೊಳ್ಳಗಳಾಗಿವೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಇಷ್ಟೇ ಅಲ್ಲ ನೆಟ್ಬಾಲ್ ಕ್ರೀಡಾಂಗಣ ಜಲಾವೃತ ಆಗಿದ್ದರಿಂದದ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಗಿದೆ.

ಭಾರಿ ಮಳೆಗೆ ಸರ್ಜಾಪುರ-ದೊಮ್ಮಸಂದ್ರ ರಸ್ತೆ ಜಲಾವೃತಗೊಂಡಿತು. ದೊಮ್ಮಸಂದ್ರ ಸರ್ಕಲ್ ಬಳಿ ರಸ್ತೆ ಕೆರೆಯಂತಾಯಿತು. ಇದರಿಂದ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳೇ ಆಗಿವೆ. ಹೀಗಾಗಿ ಮಳೆಹಾನಿ ಪ್ರದೇಶಕ್ಕೆ ವಿಪಕ್ಷ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಭೇಟಿ ನೀಡಿದ ವಿಪಕ್ಷ ನಾಯಕ ಅಶೋಕ್, ಅಲ್ಲಿನ ಸಮಸ್ಯೆ ಆಲಿಸಿದರು. ಅಶೋಕ್ಗೆ ಶಾಸಕ ನಂದೀಶ್ ರೆಡ್ಡಿ ಸಾಥ್ ನೀಡಿದರು.

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.
Read More



