- Kannada News Photo gallery Bannerghatta Unique Transgender Festival: Begalamma Devi Jatre and Champakadama Swamy Rathaotsava
ಬೇಗಿಹಳ್ಳಿಯ ಬೇಗಳಮ್ಮ ಜಾತ್ರೆಯಲ್ಲಿ ಚಂಪಕಧಾಮ ಸ್ವಾಮಿ ರಥೋತ್ಸವ: ಮಂಗಳಮುಖಿಯರ ಹರಕೆ ವಿಶೇಷವೇನು ಗೊತ್ತಾ?
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಮಂಗಳಮುಖಿಯರ ವಿಶೇಷ ಜಾತ್ರೆ ವಿಶಿಷ್ಟ ಸಂಪ್ರದಾಯವಾಗಿದೆ. ಇಲ್ಲಿ ಮಂಗಳಮುಖಿಯರು ತಮ್ಮ ಆರಾಧ್ಯ ದೇವತೆ ಬೇಗಳಮ್ಮಗೆ ಹರಕೆ ತೀರಿಸಲು ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ ಆಗಮಿಸುತ್ತಾರೆ. ಚಂಪಕಧಾಮ ಸ್ವಾಮಿ ರಥೋತ್ಸವದೊಂದಿಗೆ, ಬೇಗಳಮ್ಮ ದೇವಾಲಯಕ್ಕೆ ಬರಿಗಾಲಿನಲ್ಲಿ ನಡೆಯುವ ಈ ಪವಿತ್ರ ಯಾತ್ರೆ, ಗ್ರಾಮೀಣ ಸಂಸ್ಕೃತಿ ಮತ್ತು ಸಮುದಾಯದ ನಂಬಿಕೆಗಳನ್ನು ಅನಾವರಣಗೊಳಿಸುತ್ತದೆ.
Updated on: Mar 10, 2026 | 10:04 PM

ಜಾತ್ರೆ ಅಂದರೆ ಅದೊಂದು ರೀತಿಯ ಸಂಭ್ರಮ ಸಡಗರ. ತಮ್ಮ ಊರಿನ ದೇವರಿಗೆ ವರ್ಷಕ್ಕೊಮ್ಮೆ ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಲ್ಲೊಂದು ಕಡೆ ಮಂಗಳಮುಖಿಯರ ವಿಶೇಷ ಜಾತ್ರೆ ನಡೆಯುತ್ತದೆ. ತಮ್ಮ ಆರಾಧ್ಯ ದೇವಿಗೆ ವರ್ಷಕ್ಕೊಂದು ಬಾರಿ ಮಂಗಳಮುಖಿಯರು ಹರಕೆ ತೀರಿಸುತ್ತಾರೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ರಥೋತ್ಸವ ಮತ್ತು ಬೇಗಿಹಳ್ಳಿಯ ಬೇಗಳಮ್ಮ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರತಿ ವರ್ಷ ಇದೇ ಸಮಯದಲ್ಲಿ ರಥೋತ್ಸವ ನಡೆಯುತ್ತದೆ.

ಬೆಳಿಗ್ಗೆ ರಥದಲ್ಲಿ ಚಂಪಕಧಾಮ ಸ್ವಾಮಿಯನ್ನು ಕುಳ್ಳಿರಿಸಿ ಬನ್ನೇರುಘಟ್ಟದ ರಥ ಬೀದಿಯಲ್ಲಿ ಎಳೆಯುತ್ತಾರೆ. ಈ ಸಮಯದಲ್ಲಿ ಸಾವಿರಾರು ಜನ ರಥ ಎಳೆದು ಪುನೀತರಾದರು. ಈ ಜಾತ್ರೆಯ ವಿಶೇಷವೆಂದರೆ ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ಹಲವು ಕಡೆಗಳಿಂದ ಅಪಾರ ಸಂಖ್ಯೆಯ ಮಂಗಳಮುಖಿಯರು ಒಟ್ಟಾಗಿ ಸೇರಿ ಬೇಗಳಮ್ಮಗೆ ಪೂಜೆಸಲ್ಲಿಸಿದರು.

ಚಂಪಕಧಾಮ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಿಸಲಾಗಿದ್ದು, ಚಂಪಕ ಸ್ವಾಮಿ ಹಾಗೂ ಬೇಗಳಮ್ಮ ಅಣ್ಣ-ತಂಗಿ. ಹರಕೆ ಹೊತ್ತವರು ಮೊದಲಿಗೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿಯ ದರ್ಶನ ಪಡೆದು ಹೂವನ್ನು ಕಟ್ಟಿಸಿಕೊಳ್ಳುತ್ತಾರೆ. ಹಳದಿ ಸೀರೆ, ಜಡೆ ತುಂಬಾ ಮಲ್ಲಿಗೆ ಮುಡಿದು ತಮಟೆ ವಾದ್ಯಗಳ ನಡುವೆ ಬರಿಗಾಲಿನಲ್ಲಿ ಬಿಸಿಲಿನ ನಡುವೆ ಹೆಜ್ಜೆ ಹಾಕುತ್ತ ಮಂಗಳಮುಖಿಯರು ಬನ್ನೇರುಘಟ್ಟದಿಂದ ಸುಮಾರು 4 ಕಿಮೀ ದೂರ ಬೇಗಳಮ್ಮನ ದೇವಾಲಯಕ್ಕೆ ನಡೆದುಕೊಂಡು ಸಾಗುತ್ತ ಹರಕೆ ತಿರಿಸುತ್ತಾರೆ.

ಬೇಗಳಮ್ಮಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಎಲೆ ಅಡಿಕೆ, ಕಡ್ಡಿಪುಡಿಯನ್ನು ಹಾಗೂ ಕೋಳಿಯನ್ನು ಬೇಗಳಮ್ಮಗೆ ನೈವೇದ್ಯವಾಗಿ ನೀಡುತ್ತಾರೆ. ಒಟ್ಟಾರೆ ಚಂಪಕಧಾಮ ಸ್ವಾಮಿಯ ಗ್ರಾಮೀಣ ಸೊಬಗಿನ ಜಾತ್ರೆ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ಮಂಗಳಮುಖಿಯರು ಆರಾಧ್ಯ ದೇವಿಗೆ ಪೂಜೆ, ಹರಕೆ ಸಲ್ಲಿಸಿ ಖುಷಿಪಟ್ಟರು.