- Kannada News Photo gallery Bhadravathi Unseasonal Rains Wreak Havoc: Shivamogga Farmers Face Massive Crop and Property Loss
ಅಕಾಲಿಕ ಮಳೆಗೆ ಬೆದರಿದ ಭದ್ರಾವತಿ: ವರುಣನ ಅಬ್ಬರಕ್ಕೆ ರೈತರ ಬದುಕು ಮೂರಾಬಟ್ಟೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸುರಿದ ಅಕಾಲಿಕ ಗಾಳಿ ಮಳೆಯಿಂದ ವ್ಯಾಪಕ ಹಾನಿಯಾಗಿದೆ. ಅಡಿಕೆ ತೋಟಗಳು ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಸ್ತೆಗಳಲ್ಲಿ ಮರಗಳು ಉರುಳಿ, ವಿದ್ಯುತ್ ಕಂಬಗಳು ಮುರಿದು, ಹಲವು ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ, ಜನಪ್ರತಿನಿಧಿಗಳು ಪರಿಹಾರದ ಭರವಸೆ ನೀಡಿದ್ದಾರೆ.
Updated on: Apr 27, 2026 | 6:17 PM

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಸುರಿದ ಗಾಳಿ ಮಳೆ ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಭದ್ರಾವತಿ ತಾಲೂಕಿನಲ್ಲಿ ಸುರಿದ ಮಳೆಯು ಜನರ ಮತ್ತು ರೈತರ ಬದುಕು ಮೂರಾಬಟ್ಟೆ ಮಾಡಿದೆ. ತಾಲೂಕಿನ ಹೊಳೆಹೊನ್ನೂರು ಹೋಬಳಿ ಕೈಮರ,ನಾಗಸಮುದ್ರ, ಸನ್ಯಾಸಿಕೋಡಿಮಗ್ಗಿ, ಲಕ್ಷ್ಮಿಪುರ, ಮೈದೊಳಲು, ಮುಂಗೋಟೆ ಹೀಗೆ ಹತ್ತಾರು ಹಳ್ಳಿಯ ಜನರು ಗಾಳಿ ಮಳೆ ಮಾಡಿರುವ ಹಾನಿಯಿಂದ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ವರುಣನ ಅಬ್ಬರಕ್ಕೆ ರಸ್ತೆಯುದ್ದಕ್ಕೂ ಬೃಹತ್ ಮರಗಳು ಧರೆ ಉರುಳಿವೆ. ಇದರ ಜೊತೆ 200ಕ್ಕೂ ಹೆಚ್ಚು ವಿದ್ಯುತ್ ಕಂಬಳು ನೆಲಕ್ಕಚ್ಚಿವೆ. ಹಲವೆಡೆ ಮನೆಯ ಹೆಂಚು, ಶೀಟ್ಗಳು ಹಾರಿ ಹೋಗಿವೆ. ಮನೆಯಲ್ಲಿರುವ ಎಲ್ಲ ವಸ್ತುಗಳು ನೀರುಪಾಲಾಗಿದ್ದು, ನಿನ್ನೆಯ ಮಳೆ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿದೆ.

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದ ನೂರಾರು ಎಕರೆ ಅಡಿಕೆ ತೋಟವು ಗಾಳಿ ಮಳೆಗೆ ನಾಶವಾಗಿದ್ದು, ಇದರಿಂದ ಒಂದೊಂದು ಎಕೆರೆಗೆ ಎರಡರಿಂದ ಮೂರು ಲಕ್ಷ ರೂಪಾಯಿ ನಷ್ಟವಾಗಿದೆ. ಮಲೆನಾಡಿನಲ್ಲಿ ಎಂದೂ ಕಂಡರಿಯದ ಈ ಬಿರುಗಾಳಿ ಮಳೆಗೆ ಭದ್ರಾವತಿ ತಾಲೂಕಿನ ಜನರು ತತ್ತರಿಸಿಹೋಗಿದ್ದಾರೆ.

ಮಗುವಿನಂತೆ ಸಲಹಿದ್ದ ಅಡಿಕೆ ಗಿಡಗಳು ಧರೆಗೆ ಉರುಳಿದ್ದು ನೋಡಿ ರೈತ ಮಹಿಳೆಯು ಕಣ್ಣೀರು ಹಾಕುತ್ತಿದ್ದು, ಭದ್ರಾವತಿ ತಾಲೂಕಿನ ಆನವೇರಿ ಮತ್ತು ಹೊಳೆಹೊನ್ನೂರು ಹೋಬಳಿಯ ಗ್ರಾಮಸ್ಥರು ಕಂಗಾಲಾಗಿದ್ದಾರೆ. ರಾತ್ರಿಯಿಂದ ವಿದ್ಯುತ್ ಸಂಪರ್ಕ ಕೂಡ ಇಲ್ಲದ ಕಾರಣ ಹಾನಿಗಳೊಗಾದ ಮನೆಗೆಳ ಶೀಘ್ರ ದುರಸ್ತಿಗೂ ಸಮಸ್ಯೆ ಉಂಟಾಗಿದೆ.

ಹಲವರ ತೋಟಗಳೇ ನಾಮಾವಶೇಷವಾಗಿದ್ದರೆ, ಇನ್ನು ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಐದು ಟಿಸಿ ಸೇರಿದಂತೆ ವಿದ್ಯುತ್ ಕಂಬಗಳು ಸೇರಿ ಸಂಪೂರ್ಣ ವ್ಯವಸ್ಥೆಯೇ ಬುಡಮೇಲಾಗಿದೆ. ಜನಪ್ರತಿನಿಧಿಗಳು ಈಗಾಗಲೇ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಶೀಘ್ರ ಪರಿಹಾರದ ಭರವಸೆ ನೀಡಿದ್ದಾರೆ.



