RCB ತಂಡಕ್ಕೆ 5 ತವರು ಮೈದಾನ..!
IPL 2026: ಕಳೆದ 18 ವರ್ಷಗಳಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ ತವರು ಪಂದ್ಯಗಳನ್ನಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ದಿನಗಳಲ್ಲಿ ಕರ್ನಾಟಕದ ಇತರೆಡೆ ಕೂಡ ಹೋಮ್ ಮ್ಯಾಚ್ಗಳನ್ನಾಡಲಿದೆ. ಏಕೆಂದರೆ ಕರ್ನಾಟದಲ್ಲಿ 4 ಹೊಸ ಸ್ಟೇಡಿಯಂ ತಲೆ ಎತ್ತಲಿದ್ದು, ಇದರಿಂದಾಗಿ ಆರ್ಸಿಬಿ ತಂಡಕ್ಕೆ 5 ತವರು ಮೈದಾನದ ಆಯ್ಕೆ ದೊರೆಯಲಿದೆ.
Updated on: Aug 10, 2025 | 8:54 AM

ಐಪಿಎಲ್ನಲ್ಲಿ ಪ್ರತಿ ತಂಡಗಳಿಗೂ ಒಂದು ತವರು ಮೈದಾನವಿದೆ. ಹೀಗೆ ನಗರ ಮತ್ತು ಮೈದಾನವನ್ನು ಕೇಂದ್ರೀಕರಿಸಿಯೇ ಐಪಿಎಲ್ ತಂಡಗಳನ್ನು ರೂಪಿಸಲಾಗಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತವರು ಮೈದಾನಗಳನ್ನು ಹೊಂದಿದೆ. ಅಂದರೆ ನಿಗದಿತ ತವರು ಮೈದಾನವಲ್ಲದೇ, ಇತರೆಡೆ ಕೂಡ ತನ್ನ ಹೋಮ್ ಮ್ಯಾಚ್ಗಳನ್ನು ಆಡುತ್ತಿದೆ. ಭವಿಷ್ಯದಲ್ಲಿ ಎರಡು ಹೋಮ್ ಗ್ರೌಂಡ್ಗಳನ್ನು ಹೊಂದಿರುವ ತಂಡಗಳ ಪಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸೇರ್ಪಡೆಯಾಗಲಿದೆ.

ಏಕೆಂದರೆ ಕರ್ನಾಟಕದಲ್ಲಿ 4 ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳು ನಿರ್ಮಾಣವಾಗಲಿದೆ. ಈಗಾಗಲೇ ಒಂದು ಸ್ಟೇಡಿಯಂನ ಕೆಲಸಗಳು ಆರಂಭವಾಗಿದ್ದು, ಇನ್ನೊಂದರ ಶಂಕು ಸ್ಥಾಪನೆ ಶೀಘ್ರದಲ್ಲ ನೆರವೇರಲಿದೆ. ಹಾಗೆಯೇ ಮತ್ತೊಂದು ಸ್ಟೇಡಿಯಂಗಾಗಿ ರೂಪುರೇಷೆಗಳು ಸಿದ್ಧವಾಗುತ್ತಿದೆ. ಇದರ ನಡುವೆ ಬೆಂಗಳೂರಿನಲ್ಲೇ ಹೊಸ ಸ್ಟೇಡಿಯಂ ನಿರ್ಮಿಸಲು ಹಸಿರು ನಿಶಾನೆ ತೋರಿದೆ.

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲು ಕರ್ನಾಟಕ ವಸತಿ ಮಂಡಳಿ ಮುಂದಾಗಿದೆ. ಕೆಹೆಚ್ಬಿಯ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 8 ರಂದು ಅನುಮೋದನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೊಂದು ಸ್ಟೇಡಿಯಂ ನಿರ್ಮಾಣವಾಗುವುದು ಖಚಿತ. ಹಾಗಿದ್ರೆ ಕರ್ನಾಟಕದಲ್ಲಿ ತಲೆ ಎತ್ತಲಿರುವ 4 ಸ್ಟೇಡಿಯಂಗಳಾವುವು ಎಂದು ನೋಡೋಣ...

ಕೊಡಗು ಕ್ರಿಕೆಟ್ ಸ್ಟೇಡಿಯಂ: ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲಿ ಈ ಮೈದಾನವು ನಿಸರ್ಗದ ನಡುವೆ ನಿರ್ಮಾಣವಾಗುತ್ತಿದೆ. ವಿಶೇಷ ಅಂದರೆ, ಈ ಮೈದಾನವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರಲಿದೆ. ಅಲ್ಲದೆ ಈ ಮೈದಾನದ ಕಾಮಗಾರಿ ಮೂರು-ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ತುಮಕೂರು ಕ್ರಿಕೆಟ್ ಸ್ಟೇಡಿಯಂ: ತುಮಕೂರಿನ ಪಿ.ಗೊಲ್ಲಹಳ್ಳಿ ಮತ್ತು ಸೋರೆಕುಂಟೆ ವ್ಯಾಪ್ತಿಯಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. 41 ಎಕರೆ ಭೂ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಡಿ.2 ರಂದು ಶಂಕುಸ್ಥಾಪನೆ ನೆರವರೇಲಿದೆ. ಅಲ್ಲದೆ ಈ ಸುಸಜ್ಜಿತ ಕ್ರೀಡಾಂಗಣವು 2 ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ.

ಮೈಸೂರು ಕ್ರಿಕೆಟ್ ಸ್ಟೇಡಿಯಂ: ಅರಮನೆ ನಗರಿ ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಸ್ಟೇಡಿಯಂ ನಿರ್ಮಾಣಕಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದಲ್ಲಿ 20.8 ಎಕರೆ ಭೂಮಿಯನ್ನು ಗುರುತಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೈಸೂರಿನಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುವುದನ್ನು ನಿರೀಕ್ಷಿಸಬಹುದು.

ಬೆಂಗಳೂರು ಕೆಹೆಚ್ಬಿ ಸ್ಟೇಡಿಯಂ: ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. 80,000 ಆಸನ ಸಾಮರ್ಥ್ಯದ ಈ ಸ್ಟೇಡಿಯಂ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, 100 ಎಕರೆ ವಿಸ್ತೀರ್ಣದ ಜಾಗದಲ್ಲಿ ಹೊಸ ಕ್ರಿಕೆಟ್ ಮೈದಾನ ತಲೆ ಎತ್ತಲಿದೆ.

ಈ ನಾಲ್ಕು ಸ್ಟೇಡಿಯಂಗಳು ಲೋಕಾರ್ಪಣೆಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನೊಂದಿಗೆ ಇತರೆ ನಾಲ್ಕು ಹೋಮ್ ಗ್ರೌಂಡ್ ಆಯ್ಕೆಗಳು ದೊರೆಯಲಿದೆ. ಅದರಲ್ಲೂ ಮುಂದಿನ ಐದು ವರ್ಷದೊಳಗೆ ತುಮಕೂರು ಮತ್ತು ಕೊಡಗು ಕ್ರಿಕೆಟ್ ಸ್ಟೇಡಿಯಂಗಳು ಉದ್ಘಾಟನೆಗೊಳ್ಳುವುದು ಖಚಿತ. ಹೀಗಾಗಿ ಐಪಿಎಲ್ 2028 ರಿಂದ ಆರ್ಸಿಬಿ ಹೊಸ ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
