Team India: ರುತುರಾಜ್ ಅನರ್ಹ, ಸರ್ಫರಾಝ್ಗೆ ಅನ್ಯಾಯ: ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು
India Test Squad: ಸರ್ಫರಾಝ್ ಖಾನ್ ಅವರನ್ನು ಕೈ ಬಿಟ್ಟು ಇಲ್ಲಿ ರುತುರಾಜ್ ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಿರುವುದೇ ಅಚ್ಚರಿ. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರುತುರಾಜ್ಗಿಂತಲೂ ಸರ್ಫರಾಝ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
Updated on: Jun 25, 2023 | 9:23 PM

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಹೊಸಮುಖಗಳಾಗಿ ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ.

ಇಲ್ಲಿ ಇವರಿಬ್ಬರ ಆಯ್ಕೆ ನಡುವೆ ಅವಕಾಶ ವಂಚಿತರಾಗಿರುವುದು ಸರ್ಫರಾಝ್ ಖಾನ್. ಕಳೆದ ಎರಡು ವರ್ಷಗಳಿಂದ ದೇಶೀಯ ಅಂಗಳದಲ್ಲಿ ರನ್ ರಾಶಿ ಕಲೆಹಾಕಿದರೂ ಯುವ ದಾಂಡಿಗನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡುತ್ತಿಲ್ಲ.

ಅದರಲ್ಲೂ ಸರ್ಫರಾಝ್ ಖಾನ್ ಅವರನ್ನು ಕೈ ಬಿಟ್ಟು ಇಲ್ಲಿ ರುತುರಾಜ್ ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಿರುವುದೇ ಅಚ್ಚರಿ. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರುತುರಾಜ್ಗಿಂತಲೂ ಸರ್ಫರಾಝ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರುತುರಾಜ್ ಗಾಯಕ್ವಾಡ್ ಇದುವರೆಗೆ 28 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 47 ಇನಿಂಗ್ಸ್ಗಳಿಂದ ಕಲೆಹಾಕಿರುವುದು 1941 ರನ್ಗಳು. ಇದೇ ವೇಳೆ 6 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮತ್ತೊಂದೆಡೆ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 54 ಇನಿಂಗ್ಸ್ ಆಡಿರುವ ಸರ್ಫರಾಝ್ ಖಾನ್ ಕಲೆಹಾಕಿರುವುದು ಬರೋಬ್ಬರಿ 3505 ರನ್ಗಳು. ಈ ವೇಳೆ ತ್ರಿಶತಕ ಸೇರಿದಂತೆ 13 ಶತಕ ಹಾಗೂ 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಅಂದರೆ ಇಲ್ಲಿ ರುತುರಾಜ್ ಗಾಯಕ್ವಾಡ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕೇವಲ 42.19 ರ ಸರಾಸರಿಯಲ್ಲಿ ರನ್ಗಳಿಸಿದ್ದರೆ, ಸರ್ಫರಾಝ್ ಖಾನ್ 79.65 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

ಇಲ್ಲಿ ಯಾವುದೇ ರೀತಿಯಲ್ಲೂ ಸರ್ಫರಾಝ್ ಖಾನ್ಗೆ ರುತುರಾಜ್ ಸರಿಸಾಟಿಯಲ್ಲ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಇದಾಗ್ಯೂ ಸರ್ಫರಾಝ್ ಅವರನ್ನು ಆಯ್ಕೆ ಸಮಿತಿಯು ಸತತವಾಗಿ ನಿರ್ಲಕ್ಷಿಸುತ್ತಿರುವುದೇ ಅಚ್ಚರಿ.

ಆಯ್ಕೆ ಸಮಿತಿಯ ಈ ನಡೆಯ ವಿರುದ್ಧ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಫರಾಝ್ ಖಾನ್ ಅವರಂತಹ ಪ್ರತಿಭೆಗಳನ್ನು ಗುರುತಿಸುವಲ್ಲಿ ಆಯ್ಕೆಗಾರರು ವಿಫಲವಾದರೆ, ರಣಜಿ ಟ್ರೋಫಿ ಆಡುವ ಅಗತ್ಯವಿಲ್ಲ.

ಇಲ್ಲಿ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗಲು ಐಪಿಎಲ್ ಆಡಿದ್ರೆ ಸಾಕು ಎನ್ನುವಂತಾಗಿದೆ. ಹೀಗಾದ್ರೆ ಸರ್ಫರಾಝ್ ಖಾನ್ನಂತಹ ಯುವ ಪ್ರತಿಭೆಗಳ ಕಥೆಯೇನು ಎಂದು ಸುನಿಲ್ ಗವಾಸ್ಕರ್ ಪ್ರಶ್ನೆಗಳೆನ್ನೆತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಯ್ಕೆ ಸಮಿತಿ ಸದಸ್ಯರು ಎಂದಿನಂತೆ ಈ ಬಾರಿ ಕೂಡ ಜಾಣ ಮೌನದಲ್ಲಿದ್ದಾರೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.




