Black coffee: ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ
ಕಾಫಿ ನಮ್ಮ ಅತ್ಯಂತ ಪ್ರಿಯವಾದ ಒಂದು ಪಾನೀಯ. ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಾಫಿ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ. ಇನ್ನು ಕೆಲಸದ ಮಧ್ಯೆ ಸಾಕಷ್ಟು ಮಾನಸಿಕ ಒತ್ತಡ ಇರುವ ಸಮಯದಲ್ಲಿ ನಾವು ಒಂದು ಕಪ್ ಕಾಫಿ ಕುಡಿಯುವುದರಿಂದ ನಮ್ಮ ಮನಸ್ಸಿಗೆ ಆ ಕ್ಷಣ ಖುಷಿ, ನೆಮ್ಮದಿ ಸಿಗುತ್ತದೆ ಎಂಬುದು ಕಾಫಿ ಕುಡಿಯುವುದರ ಹಿಂದಿನ ಉದ್ದೇಶ. ಆದರೆ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದು ಒಳ್ಳೆಯದೇ? ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.
Updated on: Apr 02, 2025 | 12:17 PM

ಕೆಲವರಿಗೆ ಬೆಳಗಿನ ಸಮಯದಲ್ಲಿ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಇದು ಒಳ್ಳೆಯದೋ ಅಥವಾ ಕೆಟ್ಟದ್ದೋ? ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ತೊಂದರೆಗಳಾಗಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಖಾಲಿ ಹೊಟ್ಟೆಗೆ ಕೆಫೀನ್ ಅಂಶ ಹೋದಾಗ ಯಾವ ರೀತಿ ಸಮಸ್ಯೆಗಳಾಗಬಹುದು ಎಂಬುದನ್ನು ತಿಳಿಯುವುದು ಬಹಳ ಅವಶ್ಯಕವಾಗಿದೆ.

ಸಂಶೋಧನೆ ಹೇಳುವ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಹೆಚ್ಚು ಆಮ್ಲ ಉತ್ಪತ್ತಿಯಾಗುತ್ತದೆ. ಅದಲ್ಲದೆ ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಉರಿ, ಕರುಳಿನ ಅಸ್ವಸ್ಥತೆಗಳು, ಎದೆಯುರಿ, ಹೊಟ್ಟೆಯಲ್ಲಿ ಹುಣ್ಣು, ವಾಕರಿಕೆ, ಅಜೀರ್ಣತೆ ಇತ್ಯಾದಿ ಗ್ಯಾಸ್ಟಿಕ್ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.

ಬ್ಲ್ಯಾಕ್ ಕಾಫಿಯನ್ನು ಕೆಲವರು ಹೆಚ್ಚಾಗಿ ಇಷ್ಟ ಪಡುತ್ತಾರೆ ಆದರೆ ಇದರಲ್ಲಿ ಕೆಫೀನ್ ಅಂಶ ಇರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿಯೂ ಇದು ಹೊಟ್ಟೆ ಉಬ್ಬರ, ಹೊಟ್ಟೆಯ ಅಸ್ವಸ್ಥತೆ ಮತ್ತು ಬಿಗಿಯಾದ ಭಾವನೆಯಂತಹ ಅಜೀರ್ಣ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಜೀರ್ಣಕಾರಿ ಸಮಸ್ಯೆ ಇರುವವರು ಅಂದರೆ ಗ್ಯಾಸ್ಟ್ರೈಟಿಸ್, ಅಲ್ಸರ್ ಅಥವಾ ಆಸಿಡ್ ರಿಫ್ಲಕ್ಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯಬಾರದು. ಅದರಲ್ಲಿಯೂ ಗರ್ಭಿಣಿ ಅಥವಾ ಹಾಲುಣಿಸುವ ತಾಯಂದಿರು ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿಯನ್ನು ಸೇವನೆ ಮಾಡುವುದು ಒಳ್ಳೆಯದಲ್ಲ.

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನಡುಕ, ಹೃದಯ ಬಡಿತ, ತಲೆನೋವು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಬ್ಲ್ಯಾಕ್ ಕಾಫಿಯ ನಿದ್ರೆಯ ಮೇಲೂ ಪರಿಣಾಮ ಬೀರಬಹುದು. ಅದರಲ್ಲೂ ಮಲಗುವ ಮುನ್ನ ಬ್ಲ್ಯಾಕ್ ಕಾಫಿ ಕುಡಿಯುವುದನ್ನು ತಪ್ಪಿಸಿ. ಜೊತೆಗೆ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಬ್ಲ್ಯಾಕ್ ಕಾಫಿ ಕುಡಿಯುವುದನ್ನು ನಿಲ್ಲಿಸುವುದೇ ಉತ್ತಮ. ಇದು ನಿಮ್ಮ ಆರೋಗ್ಯ ಹದಗೆಡಿಸಬಹುದು.

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
Read More




