ಮನೆ ಮುಂದೆ ಈ ಹೂವಿನ ಗಿಡಗಳನ್ನು ನೆಡಲೇಬೇಕಂತೆ
ಹಚ್ಚ ಹಸಿರಿನ ಗಿಡ ಮರಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಸಕಾರಾತ್ಮಕತೆಯ ಜೊತೆಗೆ ಅಲ್ಲಿನ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ. ಸಕಾರಾತ್ಮಕತೆ, ಶುದ್ಧ ಗಾಳಿ ಲಭಿಸುತ್ತದೆ ಎಂದು ಅನೇಕರು ಮನೆಯ ಮುಂದೆ ತರಹೇವಾರಿ ಗಿಡಗಳನ್ನು ನೆಡುತ್ತಾರೆ. ಇನ್ನೂ ಕೆಲವರು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸಲೆಂದು ಬಿದಿರಿನ ಗಿಡ, ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್, ರಬ್ಬರ್ ಪ್ಲಾಂಟ್, ಪೀಸ್ ಲಿಲಿ, ಅಲೋವೆರಾ ಇತ್ಯಾದಿ ಗಿಡಗಳನ್ನು ನೆಡುತ್ತಾರೆ. ಇದೇ ರೀತಿ ಈ ಒಂದಷ್ಟು ಹೂವಿನ ಗಿಡಗಳನ್ನು ಸಹ ಮನೆಯ ಮುಂಭಾಗದಲ್ಲಿ ನೆಡಬೇಕಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Jul 01, 2025 | 5:32 PM

ಚೆಂಡು ಹೂವು: ಹಿಂದೂ ಸಂಪ್ರದಾಯದಲ್ಲಿ ಚೆಂಡು ಹೂವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲದೆ ಶಾಸ್ತ್ರಗಳ ಪ್ರಕಾರ ಮಾರಿಗೋಲ್ಡ್ ಅಂದರೆ ಚೆಂಡು ಹೂವಿನ ಗಿಡ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಹಾಗಾಗಿ ಈ ಹೂವಿನ ಗಿಡವನ್ನು ಮನೆ ಮುಂದೆ ನೆಡಬೇಕು.

ಗುಲಾಬಿ ಗಿಡ: ಗುಲಾಬಿ ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇದು ಪ್ರೀತಿ ಮತ್ತು ಸಂತೋಷದ ಸಂಕೇತವಾಗಿದೆ. ಅದೇ ರೀತಿ ಈ ಗುಲಾಬಿ ಗಿಡವನ್ನು ಮನೆಯಲ್ಲಿ ನೆಡುವುದು ಕೂಡಾ ತುಂಬಾನೇ ಒಳ್ಳೆಯದು. ಈ ಗಿಡ ಕುಟುಂಬ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಬಿಳಿ ಗುಲಾಬಿ ಹೂವಿನ ಗಿಡ ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.

ದಾಸವಾಳ: ದಾಸವಾಳ ಹೂವಿನ ಅತ್ಯುತ್ತಮ ವಾಸ್ತು ಸಸ್ಯವಾಗಿದೆ. ಸಾಮಾನ್ಯವಾಗಿ ಈ ಹೂವಿನ ಗಿಡ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದರ ವಿಶೇಷ ಏನೆಂದರೆ ಇದು ಮನೆ ತುಂಬಾ ಸಕಾರಾತ್ಮಕತೆ ಮತ್ತು ಚೈತನ್ಯಶೀಲ ಶಕ್ತಿಯನ್ನು ಹರಡುತ್ತದೆ. ಅಲ್ಲದೆ ದಾಸವಾಳ ಹೂವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.

ಮಲ್ಲಿಗೆ ಹೂವಿನ ಗಿಡ: ನೀವು ಮನೆಯ ಮುಂಭಾಗದಲ್ಲಿ ಮಲ್ಲಿಗೆ ಹೂವಿನ ಗಿಡವನ್ನು ಸಹ ನೆಡಬಹುದು. ವಿಶೇಷವಾಗಿ ಈ ಹೂವು ಮನಸ್ಸಿಗೆ ಶಾಂತಿ ಮತ್ತು ಮುದವನ್ನು ನೀಡುತ್ತದೆ. ಅಲ್ಲದೆ ಈ ಗಿಡಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಕಮಲದ ಹೂವು: ಕಮಲದ ಹೂವುಗಳು ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವಾಗಿದೆ. ಜೊತೆಗೆ ಈ ವಿಶೇಷ ಹೂವು ಶುದ್ಧತೆ ಮತ್ತು ಸೌಂದರ್ಯದ ಸಂಕೇತವಾಗಿದೆ. ಹೀಗಿರುವಾಗ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕು ಎಂದಾದರೆ ನೀವು ಒಂದು ಕುಂಡದಲ್ಲಿ ಕಮಲದ ಹೂವಿನ ಗಿಡವನ್ನು ನೆಡಿ.

ನಂದಿ ಬಟ್ಟಲು: ನಂದಿ ಬಟ್ಟಲು ಹೂವಿನ ಗಿಡವನ್ನು ಸಹ ಮನೆಯ ಮುಂಭಾಗದಲ್ಲಿ ನೆಟ್ಟರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹೌದು ಶಾಸ್ತ್ರಗಳ ಪ್ರಕಾರ ಈ ಸಸ್ಯ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮನೆಯೊಳಗೆ ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಅಲ್ಲದೆ ಈ ಗಿಡ ಗಾಳಿಯನ್ನು ಶುದ್ಧೀಕರಿಸಲು ಸಹ ಸಹಕಾರಿ.

ಶಂಖ ಪುಷ್ಪ ಗಿಡ: ಈ ಗಿಡ ಧನಾತ್ಮಕ ಶಕ್ತಿ, ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಈ ಗಿಡವನ್ನು ಮನೆ ಮುಂದೆ ನೆಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ಹೋಗುತ್ತದೆ, ಸಕಾರಾತ್ಮಕತೆ ನೆಲೆಸುತ್ತದೆ ಎಂಬ ನಂಬಿಕೆಯಿದೆ.

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More
