Karnataka CM News Highlights: ಸರ್ಕಾರ ರಚಿಸಿಲು ಡಿಕೆ ಶಿವಕುಮಾರ್ಗೆ ಆಹ್ವಾನಿಸಿದ ರಾಜ್ಯಪಾಲ ಗೆಹ್ಲೋಟ್
ಕರ್ನಾಟಕ ಹೊಸ ಸರ್ಕಾರ ರಚನೆ ಸುದ್ದಿ ಲೈವ್: ಸಿದ್ದರಾಮಯ್ಯ ಸಲ್ಲಿಸಿದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ನಂತರ ನೂತನ ಸಿಎಂ ಆಯ್ಕೆಗೆ ಮುಹೂರ್ತ ಬಂದೊದಗಿದೆ. ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದ್ದು, ಈ ವೇಳೆ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಹೆಸರನ್ನು ಘೋಷಿಸಲಿದ್ದಾರೆ. ಈಗಾಗಲೇ ಡಿ ಕೆ ಶಿವಕುಮಾರ್ ಸಿಎಂ ಆಗಲಿರುವ ವಿಷಯ ಬಹಿರಂಗವಾಗಿದ್ದು, ಇಂದಿನ ಸಭೆಯಲ್ಲಿ ಇದು ಅಧಿಕೃತವೆನಿಸಿಕೊಳ್ಳಲಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 30: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಇಡೀ ರಾಜ್ಯ ಕಾತುರದಿಂದ ಕಾಯುತ್ತಿದೆ. ರಾಜೀನಾಮೆ ಘೊಷಿಸಿದ ನಂತರ, ಮುಂದಿನ ಸಿಎಂ ಆಗಿ ಡಿಕೆ ಶಿವಕುಮಾರ್ ಕುರ್ಚಿ ಏರಲಿದ್ದಾರೆ ಎಂದು ಸಿದ್ದರಾಮಯ್ಯ ಸುಳಿವು ನೀಡಿದ್ದರು. ಅದರಂತೆಯೇ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP) ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿಯಾಗಿ ಯಾರು ರಾಜ್ಯಭಾರ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ತೆರೆ ಬೀಳಲಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನದ ಮುಹೂರ್ತವೂ ಸಹ ಇಂದು ಫಿಕ್ಸ್ ಆಗಲಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಪೊಲೀಸ್ ಭದ್ರತೆ
ಇದೇ ಜೂನ್ 3ರಂದು ಸಂಜೆ ಕರ್ನಾಟಕ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಹಾಗೇ ಭದ್ರತಾ ದೃಷ್ಟಿಯಿಂದ ಡಿಕೆಶಿ ನಿವಾಸಕ್ಕೆ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.
-
ಅಜ್ಜಯ್ಯನ ಮಠಕ್ಕೆ ನಿಯೋಜಿತ ಸಿಎಂ ಡಿಕೆಶಿ ಭೇಟಿ
ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ನಂತರ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಅಜ್ಯಯ್ಯನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಅಜ್ಯಯ್ಯನ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
-
-
ಜೂನ್ 3ರಂದು ಡಿಕೆ ಶಿವಕುಮಾರ್ ಪ್ರಮಾಣವಚನ
ಡಿಕೆ ಶಿವಕುಮಾರ್ ಅವರು ಶಾಸಕಾಂಗ ಫಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ರಾಜ್ಯಪಾಲರು ಸಹ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಜೂನ್ 3ರ ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
-
ಸರ್ಕಾರ ರಚಿಸಿಲು ಡಿಕೆಶಿಗೆ ಆಹ್ವಾನಿಸಿದ ರಾಜ್ಯಪಾಲ
ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾದ ಬಳಿಕ ಡಿಕೆ ಶಿವಕುಮಾರ್ ಅವರು ಲೋಕಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಬಳಿಕ ಗವರ್ನರ್ ಥಾವರ್ ಚೆಂದ್ ಗೆಹ್ಲೋಟ್ ಅವರೂ ಸಹ ಸಿಎಲ್ಪಿ ನಾಯಕ ಡಿ.ಕೆ.ಶಿವಕುಮಾರ್ಗೆ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದರು. ಇದರೊಂದಿಗೆ ಎಲ್ಲಾ ಪ್ರಕ್ರಿಯೆಗಳು ಅಂತ್ಯವಾಗಿದ್ದು, ಇನ್ನೇನಿದ್ದರೂ ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದೊಂದೇ ಬಾಕಿ.
-
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ
ಶಾಸಕಾಂಗ ಸಭೆ ಬಳಿಕ ಡಿಕೆ ಶಿವಕುಮಾರ್ ಅವರು ನೇರವಾಗಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ್ದಾರೆ. ಶಾಸಕರ ಒಪ್ಪಿಗೆ ಇರುವುದು, ಪಕ್ಷವು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿರುವ ಪತ್ರವನ್ನೂ ಗರ್ವನರ್ ಗೆ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
-
-
ಲೋಕಭವನಕ್ಕೆ ತೆರಳಿದ ಕಾಂಗ್ರೆಸ್ ನಾಯಕರು
ಸಿಎಲ್ಪಿ ನಾಯಕನಾಗಿ ಡಿ.ಕೆ.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಲೋಕಭವನಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರು ಒಂದೇ ಕಾರಿನಲ್ಲಿ ಲೋಕಭವನಕ್ಕೆ ತೆರಳಿದ್ದು, ಈ ವೇಳೆ ಡಿಕೆಶಿ ಅವರು ಗರ್ವನರ್ ಅವರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
-
ಸಿದ್ದರಾಮಯ್ಯ ನಾಯಕತ್ವದಲ್ಲೇ ಚುನಾವಣೆ
2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಿದ್ದರಾಮಯ್ಯ ನಾಯಕತ್ವದಲ್ಲೇ ಕಾಂಗ್ರೆಸ್ ಚುನಾವಣೆಗೆ ಹೋಗಲಿದೆ. ಕಾಂಗ್ರಸ್ ಪಕ್ಷ ಸಿದ್ದರಾಮಯ್ಯರನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದ ಕೆಸಿ ವೇಣುಗೋಪಾಲ್, ಮಾಧ್ಯಮದವರ ಮುಂದೆಯೇ ಸಿದ್ದರಾಮಯ್ಯನವರಿಗೆ ಧನ್ಯವಾದ ತಿಳಿಸಿದರು
-
ಸರ್ವಾನುಮತದಿಂದ ಡಿಕೆಶಿ ಆಯ್ಕೆ ಎಂದ ವೇಣುಗೋಪಾಲ್
ಸಿಎಲ್ಪಿ ನಾಯಕ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಇದನ್ನು ಡಾ.ಜಿ.ಪರಮೇಶ್ವರ್ ಅನುಮೋದಿಸಿದರು.ಬಳಿಕ ಎಲ್ಲಾ ಶಾಸಕರು CLP ನಾಯಕನಾಗಿ ಡಿಕೆ ಆಯ್ಕೆಗೆ ಸಹಮತಿಸಿದ್ದಾರೆ. ಹೀಗಾಗಿ CLP ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
-
ಸಿಎಲ್ಪಿ ಸಭೆ ಬಳಿಕ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಗವರ್ನರ್ ಸಹ ಅಂಗೀಕರಿಸಿದ್ದಾರೆ. ಹೀಗಾಗಿ ಸಿಎಲ್ಪಿ ನಾಯಕ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಸಿ ವೇಣುಗೋಪಾಲ್ ಹೇಳಿದರು.
-
ವಿಧಾನಸೌಧದಲ್ಲಿ ನಡೆಯುತ್ತಿದ್ದ ಸಿಎಲ್ಪಿ ಸಭೆ ಮುಕ್ತಾಯ
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರನ್ನು ಕೆಲ ಗೊಂದಲ, ಆತಂಕದಲ್ಲಿ ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯ್ತು. ಇಂದು (ಮೇ 30) ವಿಧಾನಸಭೆಯಲ್ಲಿ ನಡೆದ ಸಿಎಲ್ಪಿ ಸಭೆ ಅಂತ್ಯವಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.
-
ಭಾವುಕರಾದ ಕೆಸಿ ವೇಣುಗೋಪಾಲ್
ಇನ್ನು ಸಿಎಲ್ಪಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾತನಾಡಿ ಭಾವುಕರಾಗಿರುವ ಘಟನೆ ನಡೆದಿದೆ. ಇಂದು ನಮಗೆ ಅತ್ಯಂತ ಭಾವುಕ ದಿನ. ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ಭಾವುಕ ದಿನ. ಸಿದ್ದರಾಮಯ್ಯನವರು ನಮೆಲ್ಲರಿಗಾಗೂ ನಿಂತು ಕೆಲಸ ಮಾಡಿದ್ದಾರೆ. ನಿಮ್ಮ ಸೇವೆ ಕರ್ನಾಟಕದ ಜೊತೆ ರಾಷ್ಟ್ರಕ್ಕೂ ಬೇಕಿದೆ. ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಅಗತ್ಯತೆ ಇದೆ ಎಂದಿದ್ದಾರೆ.
-
17 ವರ್ಷಗಳ ನಂತರ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಬರೋಬ್ಬರಿ 17 ವರ್ಷಗಳ ಕಾಲ ಸುದೀರ್ಘವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಆದ್ರೆ, ಇದೀಗ 17 ವರ್ಷದ ನಂತರ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಬಿಟ್ಟು ಕೊಟ್ಟಿದ್ದಾರೆ.
-
ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಮಾತು
ಸಿಎಲ್ಪಿ ಸಭೆಯಲ್ಲಿ ಸಿದ್ದರಾಂಯ್ಯನವರು ಮಾತನಾಡಿದ್ದು, ತಮ್ಮ ಆಡಳಿತದ ಬಗ್ಗೆ ವಿವರಿಸಿದರು.ರಾಜ್ಯದಲ್ಲಿ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದೇವೆ. ಇದರೊಂದಿಗೆ ಅತ್ಯತ್ತಮ ಆಡಳಿತ ನೀಡುವ ಪ್ರಯತ್ನ ಮಾಡಿದ್ದೇನೆ. ಕೇಂದ್ರದ ತಾರತಮ್ಯ ನೀತಿಯ ಹೊರತಾಗಿಯೂ ಉತ್ತಮ ಅರ್ಥಿಕ ನಿರ್ವಹಣೆ ಮಾಡಿದ್ದೇವೆ ಎಂದು ತಮ್ಮ ಆಡಳಿತ ವೈಖರಿ ಬಗ್ಗೆ ಶಾಸಕರಿಗೆ ಮನದಟ್ಟು ಮಾಡಿಕೊಟ್ಟರು.
-
ಸಿಎಲ್ಪಿ ಸಭೆ ಆರಂಭದಲ್ಲಿ ಅಚ್ಚರಿ ಬೆಳವಣಿಗೆ
ಸಿಎಲ್ಪಿ ಸಭೆ ಆರಂಭದಲ್ಲಿ ಅಚ್ಚರಿ ಬೆಳವಣಿಗೆ ನಡೆದಿದೆ. ಸಿಎಲ್ಪಿ ನಾಯಕನ ಆಯ್ಕೆಯನ್ನು ಶಾಸಕರು ಎಐಸಿಸಿಗೆ ಹೆಗಲಿಗೆ ಹಾಕಿದ್ದರು. ಬಳಿಕ ಸಿದ್ದರಾಮಯ್ಯ ಮನವೊಲಿಸಿದ ಹೈಕಮಾಂಡ್ ನಾಯಕರು, ಇಲ್ಲೇ ಮತ್ತು ಇಂದೇ ಆಯ್ಕೆ ಪ್ರಕ್ರಿಯೆ ಮಾಡುವಂತೆ ಮನವೊಲಿಸಿದ್ದು, ಬಳಿಕ ಹೈಕಮಾಂಡ್ ಸಿದ್ದರಾಮಯ್ಯ ಮೂಲಕವೇ ಹೆಸರು ಸೂಚಿಸಿತು. ಸಿದ್ದರಾಮಯ್ಯ ಮನವೊಲಿಕೆ ನಂತರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.
-
ಸಿದ್ದರಾಮಯ್ಯ ಪರ ಡಿಕೆಶಿ ಗೌರವ ನಿರ್ಣಯ ಮಂಡನೆ
ಸಿದ್ದರಾಂಯ್ಯನವರು ಒನ್ ಲೈನ್ ನಿರ್ಣಮ ಮಂಡಿಸುವುದರ ಮೂಲಕ ಡಿಕೆ ಶಿವಕುಮಾರ್ ಅವರನ್ನ ಶಾಸಕಾಂಗ ಪಕ್ಷದ ನಾಯನಾಗಿ ಆಯ್ಕೆ ಮಾಡಲಾಯ್ತು. ಬಳಿಕ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಪರ ಗೌರವ ನಿರ್ಣಯ ಮಂಡಿಸಿದ್ದು, ಸಿಎಂ ಆಗಿ ಅವರ ಸೇವೆಯನ್ನು ಸಭೆಯಲ್ಲಿ ಮೆಲುಕು ಹಾಕಲಾಗುತ್ತದೆ..
-
ಸಿಎಲ್ಪಿ ನಾಯಕನಾಗಿ ಡಿಕೆ ಶಿವಕುಮಾರ್ ಹೆಸರು ಘೋಷಣೆ
ಕೆಲಹೊತ್ತು ವಿರಾಮದ ನಂತರ ಸಿಎಲ್ಪಿ ಸಭೆ ಪುನಾರಂಭವಾಗಿದ್ದು, ನಾಯಕನಾಗಿ ಡಿ.ಕೆ.ಶಿವಕುಮಾರ್ ಹೆಸರು ಘೋಷಣೆ ಮಾಡಲಾಯ್ತು. ಶಾಸಕರು ಹೈಕಮಾಂಡ್ ನಿರ್ಧಾರಕ್ಕೆ ಎಂದಿದ್ದರಿಂದ ಸಂಪ್ರದಾಯದಂತೆ ಸಿದ್ದರಾಮಯ್ಯನವರು ಸಭೆಯಿಂದ ತಮ್ಮ ಕಚೇರಿಗೆ ತೆರಳಿ ಸುರ್ಜೆವಾಲ ಅವರ ಜತೆ ಸಭೆ ನಡೆಸಿದ್ದು, ಬಳಿಕ ಸಿಎಲ್ಪಿ ಸಭೆಗೆ ಬಂದು ಡಿಕೆ ಶಿವಕುಮಾರ್ ಅವರ ಹೆಸರು ಘೋಷಣೆ ಮಾಡಿದರು. ಸಿದ್ದರಾಮಯ್ಯನವರು ಒನ್ ಲೈನ್ ನಿರ್ಣಮ ಮಂಡಿಸಿದರು. ಇದರೊಂದಿಗೆ ಅಧಿಕೃತವಾಗಿ ಡಿಕೆ ಶಿವಕುಮಾರ್ ನೂತನ ಶಾಸಕಾಂಗ ಪಕ್ಷದ ನಾಯಕ ಎಂದು ಅಧಿಕೃತವಾಗಿ ಆಯ್ಕೆ ಮಾಡಲಾಯ್ತು.
-
ನಾಯಕನ ಆಯ್ಕೆ ಜವಾಬ್ದಾರಿ ಹೈಕಮಾಂಡ್ ಹೆಗಲಿಗೆ
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಜವಾಬ್ದಾರಿಯನ್ನು ಶಾಸಕರು ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ. ಎಐಸಿಸಿ ಹೇಳಿದವರಿಗೆ ನಮ್ಮ ಬೆಂಬಲ ಎಂದು ಶಾಸಕರು ಹೇಳಿದ್ದಾರೆ. ಹೀಗಾಗಿ ಔಪಚಾರಿಕ ಸಭೆ ನಡೆಸಿದ ಆನಂತರವಷ್ಟೇ ಅಧಿಕೃತವಾಗಿ CLP ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಿದ್ದರಾಮಯ್ಯ, ಸುರ್ಜೆವಾಲ ಸಭೆ ನಡೆಸಿದ್ದು, ಈ ವೇಳೆ ಡಿಕಶಿ ಸಹ ಆಗಮಿಸಿ ಚರ್ಚೆ ನಡೆಸಿದ್ದಾರೆ.
-
ಸರ್ಕಾರ ರಚನೆಗೆ ಹಕ್ಕು ಮಂಡಿಸಲಿರುವ ಡಿಕೆಶಿ
ಸಿಎಲ್ಪಿ ನಾಯಕನ ಆಯ್ಕೆ ನಂತರ ರಾಜ್ಯಪಾಲರ ಭೇಟಿ ಪ್ರಕ್ರಿಯೆ ಇರಲಿದ್ದು, ರಾಜ್ಯಪಾಲರ ಭೇಟಿಗೆ 10 ನಾಯಕರಿಗೆ ಮಾತ್ರ ಅವಕಾಶವಿರುತ್ತೆ. ಅದರಂತೆ ಸಿಎಲ್ಪಿ ಸಭೆ ಬಳಿಕ ಡಿಕೆ ಶಿವಕುಮಾರು 10 ಜನರೊಂದಿಗೆ ಲೋಕಸಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಈ ವೇಳೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
-
ಸಿಎಲ್ಪಿ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ
ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಹೆಸರು ಹೇಳಿ ನಿರ್ಣಯ ಮಂಡನೆ ಮಾಡಿದ್ದು, ಇದಕ್ಕೆ ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಬಳಿಕ ಎಲ್ಲ ಶಾಸಕರು ಒಪ್ಪಿಗೆ ಸೂಚಿಸಿದರು. ಇದರೊಂದಿಗೆ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರಾಗಿ ಆಯ್ಕೆಯಾದರು.
-
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ
ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಕೆಲವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಶಾಸಕರು ಸಭೆಗೆ ಹಾಜರಾಗಿದ್ದಾರೆ. ಇನ್ನು ವೀಕ್ಷಕರಾಗಿ ವೇಣುಗೋಪಾಲ, ಸುರ್ಜೆವಾಲ ಉಪಸ್ಥಿತರಿದ್ದಾರೆ.
-
ಸಿಎಲ್ಪಿ ಸಭೆ ಬಳಿ ಅನೌಪಚಾರಿಕ ಸಭೆ
ಸಿಎಲ್ಪಿ ಸಭೆ ಬಳಿಕ ಡಿಕೆ ಶಿವಕುಮಾರ್ ಕುನಾರ್ಯ ಕೊಠಡಿಯಲ್ಲಿ ಅನೌಪಚಾರಿಕ ಸಭೆ ನಡೆಯಲಿದೆ. ಸುರ್ಜೇವಾಲ ವೇಣುಗೋಪಾಲ್ ಡಿ ಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಸಭೆ ನಡೆಸಲಿದ್ದು, ಬಳಿಕ ರಾಜಭವನಕ್ಕೆ ತೆರಳಿ ಸರ್ಕಾರ ರಚನೆ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.
-
ಸಿಎಲ್ಪಿ ಸಭೆಗೂ ಮುನ್ನ ಡಿಕೆಶಿ ಅಜ್ಜಯ್ಯನಿಗೆ ವಿಶೇಷ ಪೂಜೆ
ಸಿಎಲ್ಪಿ ಸಭೆಗೂ ಮುನ್ನವೇ ಡಿಕೆ ಶಿವಕುಮಾರ್ ಅವರು ತಮ್ಮ ನೆಚ್ಚಿನ ಗುರುಗಳಾದ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿ ಗಮನಸೆಳೆದಿದ್ದಾರೆ. ಎಲ್ಲರನ್ನೂ ಹೊರಗೆ ಕಳಿಸಿ ವಿಧಾನಸೌಧ ಕೊಠಡಿಯಲ್ಲಿ ಆರಾಧ್ಯ ದೈವ ಅಜ್ಜಯ್ಯರಿಗೆ ಪೂಜೆ ಸಲ್ಲಿಸಿದರು. ಬಳಿಕ ಸಿಎಲ್ಪಿ ಸಭೆಯ ಸಭಾಂಗಣಕ್ಕೆ ತೆರಳಿದ್ದು, ಶಾಸಕರು ಕುಳಿತಲ್ಲೇ ಹೋಗಿ ಹಸ್ತಲಾಘವ ಮಾಡಿದರು.
-
ಸಿಎಲ್ಪಿ ಸಭೆಗೆ ಹೈಕಮಾಂಡ್ ನಾಯಕರ ಆಗಮನ
ರಾಜ್ಯ ಕಾಂಗ್ರೆಸ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಹ ಸಿಎಲ್ಪಿ ಸಭೆಗೆ ಆಗಮಿಸಿದ್ದಾರೆ.ಖಾಸಗಿ ಹೋಟೆಲ್ನಿಂದ ನೇರವಾಗಿ ಸಿಎಲ್ಪಿ ಸಭೆ ನಡೆಯುವ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
-
ಸಿಎಲ್ಪಿ ಸಭಾಂಗಣಕ್ಕೆ ಡಿಕೆ ಶಿವಕುಮಾರ್ ಆಗಮನ
ನಿಯೋಜಿತ ಶಾಸಕಾಂಗ ಪಕ್ಷದ ನಾಯಕ ಡಿಕೆ ಶಿವಕುಮಾರ್ ಅವರು ಸಿಎಲ್ಪಿ ಸಭಾಂಗಣಕ್ಕೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಸಿ ವೇಣುಗೋಪಾಲ್ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ನೇರವಾಗಿ ಖಾಸಗಿ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
-
ಪ್ರಮಾಣವಚನದ ಸ್ಥಳ ಪರಿಶೀಲನೆ
ಜೂನ್ 3ರ ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿಪಿಎಆರ್ ಕಾರ್ಯದರ್ಶಿ ಕೆ.ಜಿ. ಜಗದೀಶ್ ಅವರು ಗಾಜಿನ ಮನೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
-
ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುತ್ತಿರುವ ಶಾಸಕರು
ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಒಬ್ಬೊಬ್ಬರೇ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಶಾಸಕರಾದ ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಸಿ.ಪಿ.ಯೋಗೇಶ್ವರ್, ಆನೇಕಲ್ ಶಿವಣ್ಣ, ಪ್ರದೀಪ್ ಈಶ್ವರ್, ಅಶೋಕ್ ಪಟ್ಟಣ್ , ಪುಟ್ಟರಂಗಶೆಟ್ಟಿ, ನಯನಾ ಮೋಟಮ್ಮ ಸೇರಿ ಹಲವು ಶಾಸಕರು ಆಗಮಿಸಿದ್ದಾರೆ.
-
ಶಾಸಕಾಂಗ ಪಕ್ಷದ ನಾಯಕನ ಪ್ರಕ್ರಿಯೆ ಹೇಗೆ?
ಮೊದಲು ಶಾಸಕರ ಹಾಜರಾತಿ ಪಡೆದುಕೊಳ್ಳುವ ಪ್ರಕ್ರಿಯೆ ಇರಲಿದೆ. ಬಳಿಕ ಸಿಎಲ್ಪಿ ಕಾರ್ಯದರ್ಶಿ ಅಲ್ಲಮ್ ಪ್ರಭು ಪಾಟೀಲ್ ಅವರು ಸ್ವಾಗತ ಭಾಷಣ ಮಾಡಲಿದ್ದು, ನಂತರ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾತನಾಡಲಿದ್ದಾರೆ. ತದನಂತರ ಸಿದ್ದರಾಮಯ್ಯ ಅವರಿಂದ ನೂತನ ಸಿಎಲ್ಪಿ ನಾಯಕನ ಹೆಸರು ಪ್ರಸ್ತಾವ ಮಂಡನೆಯಾಗಲಿದ್ದು, ಅದಕ್ಕೆ ಇಬ್ಬರು ಶಾಸಕರು ಅನುಮೋದನೆ ನೀಡಲಿದ್ದಾರೆ. ಕೊನೆಗೆ ಸಿಎಲ್ಪಿ ನಾಯಕನ ಘೋಷಣೆ ಬಳಿಕ ಡಿಕೆಶಿವಕುಮಾರ್ ಅವರು ಧನ್ಯವಾದ ತಿಳಿಸಲಿದ್ದಾರೆ.
-
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ
ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದೆ. ಸಂಜೆ 4ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಈಗಾಗಲೇ ಹಲವು ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಕೆಲ ಶಾಸಕರು ದೆಹಲಿಯಲ್ಲಿರುವುದರಿಂದ ಸಭೆಗೆ ಗೈರಾಗುವ ಸಾಧ್ಯತೆಗಳಿವೆ.
-
ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ಡಿ.ಕೆ ಶಿವಕುಮಾರ್ ನಿರ್ಧಾರ
ನೂತನ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಮಾಡಲು ಬುಧವಾರ ದಿನ ನಿಗದಿಯಾಗಿದೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ ಸಮಾರಂಭ ನಡೆಯಲಿದೆ. ಲಕ್ಷಾಂತರ ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ ಮಾಡುವ ಯೋಜನೆ ಕೈಬಿಡಲಾಗಿದ್ದು, ಸಿಎಂ ಆದ ಬಳಿಕ ಶಿವಕುಮಾರ್ ಅವರೇ ಸ್ವತಃ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಜನರಿಗೆ ಧನ್ಯವಾದ ಅರ್ಪಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
-
ಡಿ.ಕೆ ಶಿವಕುಮಾರ್ ನಿವಾಸದ ಮುಂದೆ ಜಮಾಯಿಸುತ್ತಿರುವ ಸಚಿವರು
ಬೆಂಗಳೂರಿನ ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಮಾಜಿ ಸಚಿವರು, ಸಚಿವಾಕಾಂಕ್ಷಿಗಳು ಹಾಗೂ ಉನ್ನತ ಅಧಿಕಾರಿಗಳು ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಮುನ್ಸೂಚನೆ ಬೆನ್ನಲ್ಲೇ, ಮಾಜಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಪ್ರಮುಖ ನಾಯಕರು ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಡಿಕೆಶಿ ಜೊತೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಸಚಿವಾಕಾಂಕ್ಷಿಗಳ ಕಸರತ್ತು ಜೋರಾಗಿದ್ದು, ಡಿಕೆಶಿ ಭೇಟಿಗೆ ಶಾಸಕರ ದಂಡೇ ಹರಿದುಬರುತ್ತಿದೆ.
-
ಶಾಸಕಾಂಗ ಸಭೆ ಮುಗಿಸಿ ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಡಿಕೆಶಿ
ಇಂದು ಸಂಜೆ 4 ಗಂಟೆಯ ಶಾಸಕಾಂಗ ಪಕ್ಷದ ಸಭೆಯ ಬಳಿಕ, ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡಲು ಸಂಜೆ 5ರ ನಂತರ ಸಮಯ ಕೇಳಿದ್ದಾರೆ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಅಧಿಕೃತವಾಗಿ ಆಯ್ಕೆಯಾದ ಪತ್ರದೊಂದಿಗೆ, ಲೋಕಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದೇ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿಗಳೊಂದಿಗೆ ಮಂಜುನಾಥೇಶ್ವರ ಸ್ವಾಮಿ ದರ್ಶನ ಪಡೆದು, ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
-
ಕೆಸಿ ವೇಣುಗೋಪಾಲ ಸ್ವಾಗತಕ್ಕೆ ಏರ್ ಫೋರ್ಟ್ ಗೆ ಹೊರಟ ಡಿಕೆಶಿವಕುಮಾರ್
ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ವೇಣುಗೋಪಾಲ್ ಅವರನ್ನು ಡಿ.ಕೆ.ಶಿವಕುಮಾರ್ ಅವರೇ ಖುದ್ದಾಗಿ ಬರಮಾಡಿಕೊಳ್ಳಲಿದ್ದಾರೆ. ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಗಳ ನಡುವೆ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
-
ಜೂನ್ 3ಕ್ಕೆ ಸಿಎಂ ಪ್ರಮಾಣವಚನ ಬಹುತೇಕ ಫಿಕ್ಸ್
ರಾಜ್ಯಪಾಲರನ್ನು ಭೇಟಿ ಮಾಡಿದ್ದ ಡಿ ಕೆ ಶಿವಕುಮಾರ್, ಪ್ರಮಾಣವಚನಕ್ಕೆ ಮೂರು ದಿನಾಂಕಗಳ ಬಗ್ಗೆ ಮಾಹಿತಿ ಕೊಟ್ಟಿದ್ದರು. ಸದ್ಯಕ್ಕೆ ಜೂನ್ 3, ಬುಧವಾರದಂದೇ ಪದಗ್ರಹಣ ಕಾರ್ಯಕ್ರಮ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ.
-
ಸಿಎಲ್ಪಿ ಸಭೆಗೆ ನಾಲ್ವರು ಶಾಸಕರು ಗೈರಾಗುವ ಸಾಧ್ಯತೆ
ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ನಿಗದಿಯಾಗಿದ್ದು, ನಾಲ್ವರು ಶಾಸಕರು ಗೈರಾಗುವ ಸಾಧ್ಯತೆಯಿದೆ. ಅನಾರೋಗ್ಯದ ಕಾರಣದಿಂದ ಕಾಗವಾಡ ಶಾಸಕ ರಾಜು ಕಾಗೆ, ತಂದೆಯ ನಿಧನದ ಹಿನ್ನೆಲೆಯಲ್ಲಿ ಪಾವಗಡ ಶಾಸಕ ವೆಂಕಟೇಶ್, ಹಜ್ ಯಾತ್ರೆಯಲ್ಲಿರುವ ಕಾರಣ ರಹೀಮ್ ಖಾನ್ ಹಾಗೂ ಸದ್ಯ ವಿದೇಶ ಪ್ರವಾಸದಲ್ಲಿರುವ ಕೆ.ಎನ್. ರಾಜಣ್ಣ ಸಭೆಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
-
ಅಜ್ಜಯನ ಶಾಖಾ ಮಠಕ್ಕೆ ಡಿಕೆಶಿ ಭೇಟಿ
ಬೆಂಗಳೂರಿನ ನಾಗರಬಾವಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು ಅಲ್ಲಿನ ಅಜ್ಜಯ್ಯನ ಶಾಖಾ ಮಠಕ್ಕೆ ತೆರಳಿದ್ದಾರೆ. ಅಲ್ಲಿ ಅಜ್ಜಯ್ಯನ ಆಶೀರ್ವಾದ ಪಡೆಯಲಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕುಟುಂಬಸ್ಥರು ತಮ್ಮ ಮನೆಯಲ್ಲೇ ಅಜ್ಜಯ್ಯನನ್ನು ಆರಾಧಿಸುತ್ತಿದ್ದಾರೆ.
-
ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರು, ನಾಯಕರ ಭೇಟಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ‘ಕಾವೇರಿ’ ನಿವಾಸಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರು ಭೇಟಿ ನೀಡುತ್ತಿದ್ದಾರೆ. ನಾಯಕರಾದ ಕೆ.ಜೆ. ಜಾರ್ಜ್, ಎ.ಎಸ್. ಪೊನ್ನಣ್ಣ, ಪುಟ್ಟರಂಗಶೆಟ್ಟಿ ಹಾಗೂ ಬಿಲ್ಕೀಸ್ ಬಾನು ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
-
ರಾಜ್ಯಪಾಲರ ಜೊತೆ ಭೇಟಿಯಾಗಿ ಮಾತುಕತೆ ನಡೆಸಿದ ಡಿಕೆಶಿ
ಲೋಕಭವನದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಅನೌಪಚಾರಿಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕಾರದ ತಾತ್ಕಾಲಿಕ ವೇಳಾಪಟ್ಟಿ ಹಾಗೂ ರಾಜ್ಯಪಾಲರ ಲಭ್ಯತೆ ಕುರಿತು ಚರ್ಚಿಸಿದ್ದಾರೆ. ಜೂನ್ 1, 3, ಮತ್ತು 5—ಹೀಗೆ ಮೂರು ಪರ್ಯಾಯ ದಿನಾಂಕಗಳನ್ನು ಪ್ರಸ್ತಾಪಿಸಲಾಗಿದ್ದು, ರಾಜ್ಯಪಾಲರು ತಮ್ಮ ಲಭ್ಯತೆಯನ್ನು ತಿಳಿಸಲಿದ್ದಾರೆ. ಈ ಮಾತುಕತೆಯ ಬಳಿಕ ಅಧಿಕೃತವಾಗಿ ಪ್ರಮಾಣ ವಚನದ ದಿನಾಂಕ ಘೋಷಣೆಯಾಗಲಿದೆ.
-
ಜೂನ್ 3ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸಾಧ್ಯತೆ
ಜೂನ್ 3 ರಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಸಂಬಂಧ ಈಗಾಗಲೇ ರಾಜ್ಯಪಾಲರ ಕಚೇರಿಗೆ ಮಾಹಿತಿ ರವಾನಿಸಲಾಗಿದೆ. ಶಿವಕುಮಾರ್ ಅವರೊಂದಿಗೆ ಸುಮಾರು 12 ರಿಂದ 14 ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
-
ಸಿಎಲ್ಪಿ ಸಭೆಗೂ ಮುನ್ನವೇ ರಾಜ್ಯಪಾಲರ ಭೇಟಿಗೆ ಮುಂದಾದ ಡಿ.ಕೆ. ಬ್ರದರ್ಸ್!
ಶಾಸಕಾಂಗ ಪಕ್ಷದ (CLP) ಸಭೆಗೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಇಂದು ಬೆಳಗ್ಗೆ 10:30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ರಾಜ್ಯಪಾಲರು ಧರ್ಮಸ್ಥಳಕ್ಕೆ ತೆರಳಲಿರುವ ಕಾರಣ, ಅವರು ಸಿಗುವುದಿಲ್ಲ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಡಿಕೆ ಸಹೋದರರು ಸಭೆಗಿಂತ ಮುಂಚಿತವಾಗಿಯೇ ರಾಜಭವನಕ್ಕೆ ತೆರಳಲು ನಿರ್ಧರಿಸಿದ್ದಾರೆ.
-
ಕೆಪಿಸಿಸಿ ಅಧ್ಯಕ್ಷ ರೇಸ್ಗೆ ಬಿ.ಕೆ. ಹರಿಪ್ರಸಾದ್ ಸರ್ಪ್ರೈಸ್ ಎಂಟ್ರಿ!
ಕೆಪಿಸಿಸಿ ಅಧ್ಯಕ್ಷರ ರೇಸ್ನಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೆಸರು ಮುನ್ನೆಲೆಗೆ ಬಂದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಒಬಿಸಿ ಕೋಟಾದಡಿ ಇವರ ಹೆಸರನ್ನು ಹೈಕಮಾಂಡ್ ಎದುರು ಪ್ರಸ್ತಾಪಿಸಲಾಗಿದ್ದು, ಕೆ.ಸಿ. ವೇಣುಗೋಪಾಲ್ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಮಂತ್ರಿಸ್ಥಾನಕ್ಕೆ ಪಟ್ಟು ಹಿಡಿದರೆ, ಹರಿಪ್ರಸಾದ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಯಿದೆ. ಇಂದು ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರು ಈ ಹೆಸರು ಪ್ರಸ್ತಾಪಿಸುವ ನಿರೀಕ್ಷೆಯಿದೆ.
-
ಕರ್ನಾಟಕದ ನೂತನ ಸಿಎಂ ಆಯ್ಕೆಗೆ ಕ್ಷಣಗಣನೆ
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಿಗದಿಯಾಗಿದೆ. ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕವೇ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಜೂನ್ 5, 6 ಅಥವಾ 7 ರಂದು ನೂತನ ಸಿಎಂ ಪದಗ್ರಹಣಕ್ಕೆ ಜ್ಯೋತಿಷಿ ದ್ವಾರಕನಾಥ್ ಅವರಿಂದ ಶುಭ ಮುಹೂರ್ತ ನಿಗದಿಯಾಗಿದೆ.
Published On - May 30,2026 8:35 AM




