ಪುರಾಣಶಾಸ್ತ್ರಗಳಲ್ಲಿ ಶಮೀ ( ಬನ್ನೀ) ವಿಶೇಷತೆ: ಶಮೀ ಎಲೆಗಳಿಗೆ ಸಂಬಂಧಿಸಿದ ದಂತಕಥೆಯೂ ಇದೆ. ಪುರಾಣಗಳ ಪ್ರಕಾರ, ದಸರಾದ 10ನೆಯ ದಿನದಂದು, ದಶರಥ ಮಹಾರಾಜ ಶಮ್ಮಿ ಮರದಿಂದ ಚಿನ್ನದ ನಾಣ್ಯಗಳನ್ನು ಪಡೆದುಕೊಂಡನು. ಅಂದಿನಿಂದ ದಸರಾ ದಿನಗಳಲ್ಲಿ ಶಮ್ಮಿ ವೃಕ್ಷವನ್ನು ಪೂಜಿಸುವ ಸಂಪ್ರದಾಯವು ಆರಂಭವಾಯಿತು. ಶ್ರೀರಾಮ ದುರ್ಗಾ ಮಾತೆಯನ್ನು ಪೂಜಿಸುವುದರ ಜೊತೆಗೆ ಶಮೀ ವೃಕ್ಷವನ್ನು ಪೂಜಿಸಿದ ಎನ್ನುತ್ತದೆ ಇನ್ನೊಂದು ಕಥೆ. ಅಷ್ಟೇ ಅಲ್ಲ; ಮಧ್ಯಮ ಪಾಂಡವ (ಅರ್ಜುನ) ದಸರಾ ದಿನದಂದು ಶಮೀ ಮರದಿಂದ ತನ್ನ ಧನಸ್ಸನ್ನು ತೆಗೆದುಕೊಂಡನು ಎಂಬ ಕತೆಯೂ ಇದೆ. ಆದ್ದರಿಂದ ನವರಾತ್ರಿ ಉತ್ಸವದ ಕೊನೆಯಲ್ಲಿ, 10 ನೇ ದಿನದಂದು ಶಮೀ ವೃಕ್ಷವನ್ನು ಪೂಜಿಸುವುದರಿಂದ, ಭಕ್ತರ ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತವೆ ಎಂದು ನಂಬಲಾಗಿದೆ.