Good Health: ಉತ್ತಮ ಆರೋಗ್ಯಕ್ಕಾಗಿ ಈ ಕಾರ್ಯಗಳನ್ನು ಮಾಡಿ, ನಿಶ್ಚಯವಾಗಿ ಆರೋಗ್ಯವಾಗಿರುವಿರಿ

ಧರ್ಮಶಾಸ್ತ್ರದ ಒಂದು ಉಕ್ತಿಯಿದೆ ಶರೀರ ಮಾತ್ರಂ ಖಲು ಧರ್ಮಸಾಧನಮ್ಎಂಬುದಾಗಿ. ತಾತ್ಪರ್ಯ ಇಂತಿದೆ ಶರೀರದಿಂದ ಮಾತ್ರ ಧರ್ಮ ಸಾಧನೆ ಸಾಧ್ಯವೆಂದು.

Good Health: ಉತ್ತಮ ಆರೋಗ್ಯಕ್ಕಾಗಿ ಈ ಕಾರ್ಯಗಳನ್ನು ಮಾಡಿ, ನಿಶ್ಚಯವಾಗಿ ಆರೋಗ್ಯವಾಗಿರುವಿರಿ
ಸಾಂದರ್ಭಿಕ ಚಿತ್ರ
Follow us
|

Updated on: Feb 28, 2023 | 10:54 AM

ಧರ್ಮಶಾಸ್ತ್ರದ ಒಂದು ಉಕ್ತಿಯಿದೆ ಶರೀರ ಮಾತ್ರಂ ಖಲು ಧರ್ಮಸಾಧನಮ್ಎಂಬುದಾಗಿ. ತಾತ್ಪರ್ಯ ಇಂತಿದೆ ಶರೀರದಿಂದ ಮಾತ್ರ ಧರ್ಮ ಸಾಧನೆ ಸಾಧ್ಯವೆಂದು. ಅಂದರೆ ನಾವು ಯಾವುದೇ ಉತ್ತಮವಾದ ಕಾರ್ಯ ಮಾಡಲು ನಮ್ಮ ಶರೀರ ಎಂಬುದು ಅತ್ಯಮೂಲ್ಯವಾದ ಸಾಧನ ಎಂದು ಶಾಸ್ತ್ರವೂ ಹೇಳಿದೆ ಎಂದಾಯಿತು. ಈ ಶರೀರ ಸರಿಯಾಗಿ ಸ್ಪಂದಿಸಿದರೆ ಮಾತ್ರ ಆಧ್ಯಾತ್ಮಿಕ, ಆದಿಭೌತಿಕ, ಆದಿಲೌಕಿಕ ಕಾರ್ಯಗಳನ್ನು ಸಾರಾಗವಾಗಿ ಮಾಡಬಹುದು. ಆದರೆ ಇಂದಿನ ವರ್ತಮಾನದಲ್ಲಿ ನಮ್ಮ ಶರೀರವನ್ನು ರೋಗ ಬಾಧಿಸದಂತೆ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಬಾಲ್ಯದಲ್ಲಿ ಬುದ್ಧಿಯು ಬೆಳವಣಿಗೆ ಹಂತದಲ್ಲಿರುವಾಗ ತಿಳಿಯದೇ ಹಠದಿಂದ ಅಸಾಧುವಾದ ಪದಾರ್ಥಗಳನ್ನು ತಿನ್ನುತ್ತೇವೆ. ಯೌವನದಲ್ಲಿ ಪ್ರೌಢ ಬುದ್ಧಿಯಿದ್ದರೂ ಆಹಾರದ ವಿಷಯದಲ್ಲಿ ನಾಲಿಗೆಯ ಚಾಪಲಕ್ಕೊಳಗಾಗಿ ಆಹಾರ ನಿಯಮ ಬಿಟ್ಟುಬಿಡುತ್ತೇವೆ. ಈ ಕಾರಣಗಳಿಂದ ಮುಪ್ಪು ಸಮೀಪಿಸುವ ಮೊದಲೇ ನಮ್ಮನ್ನು ರೋಗ ಆವರಿಸಿಕೊಂಡಿರುತ್ತದೆ. ಕೆಲವರಂತೂ ಪ್ರತೀ ದಿನದ ಆಹಾರದ ಮೊತ್ತಕ್ಕಿಂತ ಹೆಚ್ಚು ಔಷಧಕ್ಕೆ ನೀಡಿ ಸೇವಿಸುತ್ತಿದ್ದಾರೆ ಅಲ್ಲವೇ ?

ಹೌದು. ಹಾಗಾದರೆ ಇದರಿಂದ ಹೇಗೆ ಪಾರಾಗುವುದು ಎಂದು ಪ್ರಶ್ನೆ ಏಳಬಹುದು. ಒಂದು ಸಲ ನಮ್ಮ ಭಾರತೀಯ ಪರಂಪರೆಯನ್ನು ಮೆಲಕು ಹಾಕಿ ಆಗ ಹಲವಾರು ದಾರಿ ಕಾಣುತ್ತದೆ. ಆದರೆ ಹಲವರು ಸಮಯವಿಲ್ಲ ಎಂಬ ಕಾರಣವೊಡ್ಡಿ ಯಾವುದೋ ಪೌಡರ್ ಗಳನ್ನು , ಲಿಕ್ವಿಡ್ ಗಳನ್ನು ಬಳಸಿ ಸುಲಭ ದಾರಿಯನ್ನು ಅನುಸರಿಸುತ್ತಾರೆ. ಇದರಿಂದ ಹೆಚ್ಚಿನ ಸಲ ಅಪಾಯವೇ ಒದಗಿಬರುವ ಸಂಭವ ಹೆಚ್ಚು. ಹಾಗಾದರೆ ಏನು ಮಾಡಬೇಕು ಎಂದು ಕೇಳಿದರೆ ಈ ರೀತಿ ಒಂದು ದಾರಿ ಇದೆ. ಮಹರ್ಷಿ ಪತಂಜಲಿ ಯೋಗಸೂತ್ರದ ಪ್ರಕಾರ “ಯೋಗೇನ ಚಿತ್ತಸ್ಯ, ಪದೇನ ವಾಚಾ, ಮಲಂ ಶರೀರಸ್ಯ ಚ ವೈದ್ಯಕೇನ” ಈ ವಾಕ್ಯದ ಅರ್ಥ ನೋಡುವುದಕ್ಕಿಂತ ಮೊದಲು ನಾವು ಆರೋಗ್ಯ ಹಾಳಾಗಲು ಇರುವ ಕಾರಣಗಳನ್ನು ನೋಡೋಣ.

ಇದನ್ನೂ ಓದಿ:Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..! 

ಮನಸ್ಸಿನ ದುಗುಡತೆ (ಟೆನ್ಷನ್) / ಒತ್ತಡ ನಮ್ಮ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇಲ್ಲಿಂದ ಹೊರಟ ಕೆಟ್ಟ ಪರಿಣಾಮ ನಮ್ಮ ಸಂತಾನದ ವರೆಗೂ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಈ ಒಂದು ಮಾನಸಿಕ ಅಸಮತೋಲನದಿಂದ ನಾವು ಮಾತ್ರವಲ್ಲದೇ ನಮ್ಮ ರಕ್ತ ಹಂಚಿಕೊಂಡೇ ಜನಿಸುವ ಮಕ್ಕಳ ತನಕ ಅಡ್ಡ ಪರಿಣಾಮ ಬೀರುತ್ತದೆ ಎಂದಾದರೆ ಇದನ್ನು ನಾವು ತ್ಯಜಿಸಲೇ ಬೇಕಲ್ಲವೇ ? ಅದು ಹೇಗೆ? ಅದು ಯೋಗದಿಂದ. ಇಂದಿನ ಕಾಲದಲ್ಲಿ ಯೋಗವೆಂದು ಫಲಕ (ಬೋರ್ಡ್) ಹಾಕಿ ಹಣ ಸುಲಿಗೆ ಮಾಡುವ ಗುಂಪುಗಳು ಹಲವಿವೆ. ಮೋಸಹೋಗಬೇಡಿ. ಯೋಗವೆಂದರೆ ಆಸನ (ವ್ಯಾಯಾಮ)ಅಲ್ಲ . ನೀವು ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಮಾಡಿಕೊಳ್ಳಿ. ಟೇರಿಸ್ ಮೇಲೆ, ತೋಟದಲ್ಲಿ ಅಥವಾ ಯಾವುದೇ ಏಕಾಂತ ಸ್ಥಳದಲ್ಲಿ ಕುಳಿತು ನಿಧಾನವಾಗಿ ಉಸಿರಾಡುತ್ತಾ ಕಣ್ಣುಮುಚ್ಚಿ ನಿಮ್ಮ ಇಷ್ಟ ದೇವರ ನಾಮವನ್ನು ನಿಧಾನವಾಗಿ ಮನಸ್ಸಿನೊಳಗೆ ಹೇಳುತ್ತಿರಿ. ಪ್ರಾರಂಭದ 12 ದಿನ ಏನೂ ಅನಿಸುವುದಿಲ್ಲ. ನಂತರ ತುಂಬಾ ಆನಂದ (ಫ್ರೆಶ್) ಆದ ಅನುಭವ ಆಗತೊಡಗುತ್ತದೆ. ಇದರಿಂದ ನಿಮ್ಮ ಮಾನಸಿಕ ಅಸಮತೋಲನಕ್ಕೆ ಕಾರಣವಾದ ಕೋಪ ಟೆನ್ಷನ್ ಇತ್ಯಾದಿ ದೂರವಾಗುತ್ತಾ ಬರುತ್ತದೆ ಅಥವಾ ಅದನ್ನು ನೀವು ತಾಳ್ಮೆಯಿಂದ ನಿಭಾಯಿಸುವಿರಿ ನೋಡಿ. ಬೆಳಗ್ಗೆ ಕಷ್ಟವಾದಲ್ಲಿ ರಾತ್ರಿಯೂ ಮಾಡಬಹುದು. ಎರಡೂ ಹೊತ್ತು ಮಾಡಿದರೆ ಅತ್ಯುತ್ತಮ.

ಇನ್ನು ಎರಡನೇಯದ್ದು “ಪದೇನ ವಾಚಾ” ನಮ್ಮ ಮಾತು ಸ್ವಚ್ಛವಾಗಿರಬೇಕು. ಮಾತು ಸ್ವಚ್ಛವೆಂದರೆ ಸುಳ್ಳಾಡುವುದು ಆದಷ್ಟು ಬಿಡಬೇಕು. ಆಶುಭ ಮಾತುಗಳನ್ನು ಕೆಟ್ಟಮಾತುಗಳನ್ನು ನೋವಾಗುವ ಮಾತುಗಳನ್ನು ಆಡದಂತೆ ಎಚ್ಚರವಹಿಸಬೇಕು. ಇದು ನಮ್ಮ ಸುಪ್ತ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಾತ್ವಿಕ ಮಾತು ನಾಮಸ್ಮರಣೆ ಸ್ತುತಿ ಇತ್ಯಾದಿಗಳನ್ನು ಅತ್ಯುತ್ತಮ.

ಮೂರನೇಯದ್ದು ಭೌತಿಕವಾದ ನಮ್ಮ ಅಂಗಾಂಗಳ ಶುಚಿತ್ವ. ಸರಿಯಾದ ಸಮಯಕ್ಕೆ ಸ್ನಾನ, ದೇಹ ಅನುಕೂಲವಾಗುವಂತಹ ವ್ಯಾಯಾಮ, ಸಾತ್ವಿಕ ನಿದ್ರೆ. ಹಗಲಲ್ಲಿ ನಿದ್ರಿಸುವುದು ರಾಜಸ ನಿದ್ರೆ ಮತ್ತು ಬೆಳಗ್ಗಿನ ಜಾವ ಸೂರ್ಯೋದಯದಲ್ಲಿ ಹಾಗೂ ಸೂರ್ಯಾಸ್ತದ ವೇಳೆ ನಿದ್ರಿಸುವುದು ತಾಮಸ ನಿದ್ರೆ. ಆದ್ದರಿಂದ ಈ ಎರಡು ನಿದ್ರೆಯ ಕಾಲ ಅಷ್ಟು ಉತ್ತಮವಲ್ಲ.

ನಾಲ್ಕನೇಯದ್ದು ಶಾಸ್ತ್ರದ ವಚನ “ಆರೋಗ್ಯಂ ಭಾಸ್ಕರಾದಿಚ್ಛೇತ್” ಉತ್ತಮ ಆರೋಗ್ಯವನ್ನು ಸೂರ್ಯನಿಂದ ಪಡೆಯಬೇಕು ಎಂದು ಅರ್ಥ. ತಾತ್ಪರ್ಯವಿಷ್ಟೇ ಸೂರ್ಯ ಸಂಬಂಧಿತವಾದ ಸೂರ್ಯನಮಸ್ಕಾರ ಮಾಡುವುದು. ಹಾಗೆಯೇ ಅಂತರಂಗದ ಮತ್ತು ಹೊರಗಿನ ಶತ್ರುಗಳನ್ನು ನಾಶಮಾಡುವ ವಿಶೇಷ ಶಕ್ತಿಯುಳ್ಳ ಆದಿತ್ಯಹೃದಯದ ಪಠಣ ಅಥವಾ ಶ್ರವಣ ಮಾಡುವುದರಿಂದ ಅಲ್ಲದೇ ಅನುಕೂಲವಿದ್ದಲ್ಲಿ ಅರುಣ ಪ್ರಶ್ನ ಎಂಬ ಮಂತ್ರ ಭಾಗವನ್ನು ಮಾಘ ಮಾಸದಲ್ಲಿ ಪಾರಾಯಣ ಮಾಡಿಸಿ 120 ನಮಸ್ಕಾರ ಮಾಡಿರಿ. ಇದು ಶರೀರ ರಕ್ಷಣೆಗೆ ಅತ್ಯಂತ ಸಹಕಾರಿ. ಶರೀರ ಸರಿಯಾಗಿದ್ದರೆ ಉಳಿದೆಲ್ಲವನ್ನೂ ಸಾಧಿಸಬಹುದು ಅಲ್ಲವೇ ?

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು