ಕನ್ನಡದಲ್ಲಿ ಹೊಸ ಭಕ್ತಿಗೀತೆ ‘ಭಾರತ ಕಂಡ ಅಯೋಧ್ಯ ರಾಮ’ ರಿಲೀಸ್
ಶ್ರೀರಾಮನ ಬಗ್ಗೆ ಈಗಾಗಲೇ ಅನೇಕ ಗೀತೆಗಳು ಬಂದಿವೆ. ಈಗ ಕನ್ನಡದಲ್ಲಿ ಹೊಸ ಭಕ್ತಿಗೀತೆ ಬಿಡುಗಡೆ ಆಗಿದೆ. ‘ಭಾರತ ಕಂಡ ಅಯೋಧ್ಯ ರಾಮ’ ಎಂಬುದು ಇದರ ಶೀರ್ಷಿಕೆ. ಇತ್ತೀಚೆಗೆ ಈ ಹಾಡಿನ ಅನಾವರಣ ಕಾರ್ಯಕ್ರಮ ನಡೆಯಿತು. ತಂಡದವರು ಭಾಗಿಯಾಗಿ ಈ ಗೀತೆಯ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಗಾಯಕಿ ಮಾನಸಾ ಹೊಳ್ಳ (Manasa Holla) ಅವರ ಕಂಠದಲ್ಲಿ ‘ಭಾರತ ಕಂಡ ಅಯೋಧ್ಯ ರಾಮ’ (Ayodhya Rama) ಗೀತೆ ಮೂಡಿಬಂದಿದೆ. ಭಕ್ತರ ಪಾಲಿನ ಆರಾಧ್ಯ ದೈವ ಶ್ರೀರಾಮನ (Sri Rama) ಕುರಿತಾದ ‘ರಾಮ ರಾಮ ರಾಮ ಎಂಬ ರಾಮ ಜಪದಲಿ ಜಗವ ಕಾಣಬಹುದು..’ ಎಂದು ಶುರುವಾಗುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಮಾಡಲಾಗಿದೆ. 3 ನಿಮಿಷದ ವಿಡಿಯೋ ಗೀತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಲಕ್ಷೀನಾರಾಯಣ ಮತ್ತು ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರು ಈ ಹಾಡನ್ನು ರಿಲೀಸ್ ಮಾಡಿ ಶುಭ ಕೋರಿದರು.
ಪ್ರವೀಣ್ ಸಿ. ಬಾನು ಹಾಗೂ ಡಾ. ಸುಮಿತಾ ಪ್ರವೀಣ್ ಅವರು ‘ಅತ್ರೇಯ ಕ್ರಿಯೇಷನ್’ ಮೂಲಕ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಮಗಳ ಸಲುವಾಗಿ ಅವರು ನಿರ್ಮಾಣ ಮಾಡಿದ್ದಾರೆ. ‘ತಾರಕೇಶ್ವರ’, ‘ಗಂಗೆಗೌರಿ’, ‘ಟೇಕ್ವಾಂಡೋ ಗರ್ಲ್’ ಸಿನಿಮಾಗಳ ಖ್ಯಾತಿಯ ಕು. ಋತುಸ್ಪರ್ಶ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಡಿ.ಸಿ. ವೀರೇಂದ್ರ ಬೆಳ್ಳಿಚುಕ್ಕಿ ಅವರು ನಿರ್ದೇಶನ ಮಾಡಿದ್ದಾರೆ.
ಈ ಹಾಡಿಗೆ ಡಿ.ಸಿ. ವೀರೇಂದ್ರ ಬೆಳ್ಳಿಚುಕ್ಕಿ ಅವರು ನಿರ್ದೇಶನ ಮಾಡಿರುವುದರ ಜೊತೆಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸಾಂಗ್ ರಿಲೀಸ್ ವೇಳೆ ಅವರು ಮಾತನಾಡಿದರು. ‘3 ತಿಂಗಳ ಹಿಂದೆ ಹಾಡಿನ ಕೆಲಸ ಮುಗಿದಿತ್ತು. ಉತ್ತರ ಪ್ರದೇಶ ಸರ್ಕಾರದ ಸ್ಪರ್ಧಾತ್ಮಕ ವಿಭಾಗಕ್ಕೂ ಈ ಹಾಡನ್ನು ಸಲ್ಲಿಸಲಾಗಿತ್ತು. ಅಲ್ಲಿ ಕುಂಬಮೇಳ ನಡೆಯುತ್ತಿದ್ದ ಕಾರಣ ಸದ್ಯದಲ್ಲೇ ಫಲಿತಾಂಶ ತಿಳಿಸುವುದಾಗಿ ಹೇಳಿರುತ್ತಾರೆ. ಕೇವಲ ಹಾಡು ಇದ್ದರೆ ಸಾಲದು. ಹಾಡಿನ ಆರಂಭದಲ್ಲಿ ರಾಮ ಬಗ್ಗೆ, ಅಯೋಧ್ಯೆಯ ದೇವಸ್ಥಾನದ ಬಗ್ಗೆ ಹಿನ್ನಲೆ ಧ್ವನಿ ನೀಡಿದರೆ ಚೆನ್ನಾಗಿರುತ್ತದೆ ಅಂತ ನಿರ್ಮಾಪಕರು ಸಲಹೆ ನೀಡಿದರು. ಹಾಗಾಗಿ ತರಾತುರಿಯಲ್ಲಿ ಬರೆದು ಸಿದ್ದಪಡಿಸಲಾಗಿದೆ’ ಎಂದು ಹೇಳಿದರು.
‘ಬೇರೆ ರಾಜ್ಯದವರು ಕೂಡ ಹಾಡನ್ನು ವೀಕ್ಷಿಸಿ ಬಹಳ ಚೆನ್ನಾಗಿದೆ, ತಮ್ಮ ಭಾಷೆಗೆ ತರ್ಜುಮೆ ಮಾಡಿ ಅಂತ ಕೋರಿಕೊಂಡಿದ್ದಾರೆ. ಹಿಂದಿ, ಮರಾಠಿಗೆ ಧ್ವನಿಗೂಡಿಸುವ ಕೆಲಸ ನಡೆಯುತ್ತಿದೆ. ಋತುಸ್ಪರ್ಶ ಒಂದೇ ಟೇಕ್ದಲ್ಲಿ ಮಾಡುತ್ತಿದ್ದಳು. ಈಕೆಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಪೇಜಾವರ ಸ್ವಾಮಿಗಳು ನಮ್ಮನ್ನು ಕರೆಸಿಕೊಂಡು ವಿಶೇಷವಾಗಿ ಸನ್ಮಾನಿಸಿದ್ದಾರೆ’ ಎಂದು ನಿರ್ದೇಶಕ ವೀರೇಂದ್ರ ಬೆಳ್ಳಿಚುಕ್ಕಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನದ ಸಮಯ ವಿಸ್ತರಣೆ, ಎಷ್ಟು ಗಂಟೆ ಬಾಗಿಲು ತೆಗೆದಿರುತ್ತೆ?
ಶಿವಸತ್ಯ ಅವರು ಈ ಹಾಡಿಗೆ ಸಂಗೀತ ಸಂಯೋಜಸಿದ್ದಾರೆ. ಋತುಸ್ಪರ್ಶ ಯೂಟ್ಯೂಬ್ ಚಾನಲ್ ಮೂಲಕ ಹಾಡು ಬಿಡುಗಡೆ ಆಗಿದೆ. ಜಯನಗರ ಮತ್ತು ರಾಜಾಜಿನಗರ ರಾಮಮಂದಿರ ದೇವಸ್ಥಾನದಲ್ಲಿ ಶೂಟಿಂಗ್ ಮಾಡಲಾಗಿದೆ. ‘ಇಲ್ಲಿಯವರೆಗೂ ಅನೇಕ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಆದರೆ ರಾಮನ ಕುರಿತು ಹಾಡಲು ಅವಕಾಶ ಬಂದಾಗ ಇದು ನನ್ನ ಭಾಗ್ಯವೆಂದು ಭಾವಿಸಿ ಭಕ್ತಿಭಾವದಿಂದ ಹಾಡಿದ್ದೇನೆ’ ಎಂದು ಮಾನಸಾ ಹೊಳ್ಳ ಹೇಳಿದ್ದಾರೆ.

Ayodhya Rama Song Team
ಗಗನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅನಿಲ್ ಅವರು ವಿಎಫ್ಎಕ್ಸ್ ಕೆಲಸ ಮಾಡಿದ್ದಾರೆ. ಗಣೇಶ್ ರಾವ್ ಕೇಸರ್ಕರ್, ಓಂಕಾರ್ ಪುರುಷೋತ್ತಮ್, ರವೀಂದ್ರವಂಶಿ, ವಿಶ್ವನಾಥ್ ಮುಂತಾದವರು ಹಾಡಿನ ಬಿಡುಗಡೆಯಲ್ಲಿ ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.