Hindu Tradition: ಯಾರು ಬೇಕಾದರೂ ಸನ್ಯಾಸಿ ಆಗಬಹುದಾ? ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಗುಣಗಳು
ಸನ್ಯಾಸಿ ಆಗಲು ವಯಸ್ಸು ಅಥವಾ ಮಠದ ನಿರ್ಧಾರಕ್ಕಿಂತ ಹೆಚ್ಚಾಗಿ ಅರಿಷಡ್ವರ್ಗಗಳನ್ನು ಜಯಿಸುವುದು ಮುಖ್ಯ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆದ್ದು, ನಿರ್ಲಿಪ್ತ ಭಾವ, ಸಮದೃಷ್ಟಿ, ರುಚಿಗಳ ವ್ಯಾಮೋಹವಿಲ್ಲದ ಜೀವನ, ದುಶ್ಚಟಗಳಿಂದ ದೂರ, ಸರಳತೆ ಮತ್ತು ಸಮಾಜ ಸೇವೆಯೇ ಸನ್ಯಾಸಿಗಳಿಗೆ ನಿಜವಾದ ಅರ್ಹತೆಗಳಾಗಿವೆ. ಇಂತಹ ಗುಣಗಳ ಮೂಲಕ ಸನ್ಯಾಸಿಯು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ.

ಯಾರು ಬೇಕಾದರೂ ಸನ್ಯಾಸಿ ಆಗಬಹುದಾ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರವನ್ನು ನೀಡಿದ್ದಾರೆ. ಸನ್ಯಾಸಿಯಾಗಲು ಪ್ರಥಮ ಅರ್ಹತೆ ಅರಿಷಡ್ವರ್ಗಗಳನ್ನು ಜಯಿಸುವುದು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಸಂಪೂರ್ಣವಾಗಿ ಗೆಲ್ಲುವವನು ಮಾತ್ರ ಈ ಪವಿತ್ರ ಮಾರ್ಗದಲ್ಲಿ ಮುನ್ನಡೆಯಲು ಅರ್ಹ. ಸನ್ಯಾಸಿಯು ಯಾವುದೇ ಸಂಬಂಧಗಳಿಗೆ ಅಂಟಿಕೊಳ್ಳದೆ ನಿರ್ಲಿಪ್ತನಾಗಿರಬೇಕು. ಅತಿಯಾದ ದುಃಖ ಅಥವಾ ಅತಿಯಾದ ಸಂತೋಷಕ್ಕೆ ಒಳಗಾಗದೆ, ಎರಡನ್ನೂ ಸಮತೋಲನದಲ್ಲಿ ಸ್ವೀಕರಿಸುವ ಸಮದೃಷ್ಟಿಯುಳ್ಳವನಾಗಿರಬೇಕು. ರುಚಿಗಳ ವ್ಯಾಮೋಹ, ನಿರ್ದಿಷ್ಟ ಆಹಾರದ ಆಸೆಗಳು ಸನ್ಯಾಸಿಗೆ ಇರಬಾರದು. ಸಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿ, ಆಹಾರಕ್ಕಾಗಿ ಹಂಬಲಿಸದೆ ಇರಬೇಕು.
ಹವಾಮಾನದ ಏರಿಳಿತಗಳಿಗೆ, ಅಂದರೆ ಚಳಿ, ಮಳೆ, ಬಿಸಿಲಿಗೆ ಆತಂಕ ಪಡದೆ, ಅವುಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಸಮಾಜದಿಂದ ದೊರೆತದ್ದನ್ನು ತನ್ನಲ್ಲೇ ಬಚ್ಚಿಡದೆ, “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬಂತೆ ಅದನ್ನು ಇತರರಿಗೆ ಹಂಚುವ ಮನೋಭಾವ ಸನ್ಯಾಸಿಗಿರಬೇಕು. ದುಶ್ಚಟಗಳಾದ ಮಧ್ಯಸೇವನೆ, ಇತ್ಯಾದಿಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಪಾದರಕ್ಷೆಗಳು, ಛತ್ರಿ, ಮಂಚ, ತಲೆದಿಂಬುಗಳನ್ನು ತ್ಯಜಿಸಿ, ಸರಳವಾದ ನೆಲದಲ್ಲಿ ಮಲಗಿ, ಸಪ್ಪಲಿಗಳನ್ನು ಧರಿಸದೆ ಓಡಾಡಬೇಕು. ಬಂಗಾರ, ಬೆಳ್ಳಿ ಅಥವಾ ಯಾವುದೇ ಆಭರಣಗಳನ್ನು ಧರಿಸಬಾರದು.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಸನ್ಯಾಸಿಯು ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು ಮತ್ತು ಕಷ್ಟದಲ್ಲಿರುವವರಿಗೆ ಸದಾ ಸ್ಪಂದಿಸಿ ಸೂಕ್ತ ಮಾರ್ಗವನ್ನು ತೋರಿಸಿಕೊಡಬೇಕು. ಸಾಂಸಾರಿಕ ವಿಷಯಗಳ, ಕಾದಂಬರಿಗಳ ಅಥವಾ ಮನರಂಜನೆಯ ಉದ್ದೇಶದಿಂದ ಸಿನಿಮಾ, ಟಿವಿ, ಮೊಬೈಲ್ ನೋಡುವ ಅಭ್ಯಾಸವನ್ನು ತ್ಯಜಿಸಬೇಕು. ಬದಲಿಗೆ, ರಾಮಾಯಣ, ಮಹಾಭಾರತದಂತಹ ಮಹಾ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಸೂರ್ಯೋದಯಕ್ಕೆ ಮುನ್ನ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಮ್ಮ ದಿನಚರಿಗಳನ್ನು ಮುಗಿಸಿಕೊಂಡು ಭಗವಂತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾಫಿ, ಟೀ ಅಥವಾ ಅನಿಯಮಿತ ಆಹಾರ ಪದಾರ್ಥ ಸೇವನೆಯಿಂದ ದೂರವಿರಬೇಕು. ಈ ಎಲ್ಲಾ ಕಟ್ಟುಪಾಡುಗಳನ್ನು ಅನುಸರಿಸಿದಾಗ ಮಾತ್ರ ಆತನ ಮಾತು ವಾಕ್ಶುದ್ಧಿಯಾಗಿ, ಮುಖದಲ್ಲಿ ವಿಶೇಷವಾದ ಭಗವಂತನ ಕೃಪೆ ಮೂಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Sun, 5 April 26




