ಬಿಸಿಸಿಐಗೆ ತಲೆನೋವಾದ ಆಟಗಾರರ ಗಾಯದ ಸಮಸ್ಯೆ; ತಂಡದ ಫಿಸಿಯೋಗೆ ಶೀಘ್ರದಲ್ಲೇ ಗೇಟ್ಪಾಸ್
Team India's Recurring Injury Woes: ಭಾರತ ಕ್ರಿಕೆಟ್ ತಂಡದ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ. ಪ್ರಮುಖ ಆಟಗಾರರ ಗಾಯದಿಂದ ತಂಡದ ಪ್ರದರ್ಶನಕ್ಕೆ ಹಿನ್ನಡೆಯಾಗುತ್ತಿದ್ದು, ನಾಯಕ ಶುಭ್ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ಗೆ ಇದು ಸವಾಲಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಬಿಸಿಸಿಐ ಟೀಂ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಅವರನ್ನು ಬದಲಿಸುವ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ. ಸೆಂಟರ್ ಆಫ್ ಎಕ್ಸಲೆನ್ಸ್ನ ಪಾತ್ರವೂ ಚರ್ಚೆಯಲ್ಲಿದೆ.

ಯಾವುದೇ ಕ್ರೀಡೆಯಾಗಲಿ ಆ ಕ್ರೀಡೆಯಲ್ಲಿ ಆಟಗಾರರು ಗಾಯಗೊಳ್ಳುವುದು ಸರ್ವೆ ಸಾಮಾನ್ಯ. ಗಾಯದಿಂದಾಗಿ ಅವರು ಕೆಲವು ದಿನ ತಂಡದಿಂದ ದೂರ ಉಳಿಯುವುದು ಕೂಡ ಸಾಮಾನ್ಯ. ಆದರೆ ಕೆಲವು ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆ ಬಿಸಿಸಿಐಗೆ (BCCI) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಬ್ಬರ ಹಿಂದೆ ಒಬ್ಬರಂತೆ ಹಲವು ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆಟಗಾರರು ಅಪರೂಪಕ್ಕೊಮ್ಮೆ ಗಾಯಕ್ಕೆ ತುತ್ತಾದರೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಗಾಯದಿಂದ ಚೇತರಿಸಿಕೊಂಡು ಒಂದು ಸರಣಿಯನ್ನೋ ಅಥವಾ ಒಂದು ಪಂದ್ಯವನ್ನು ಆಡಿ ಮುಗಿಸುವುದರೊಳಗೆ ಮತ್ತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಇದು ಆಡಳಿತ ಮಂಡಳಿಯ ಜೊತೆಗೆ ನಾಯಕ ಶುಭ್ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭಿರ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನೇ ನಾವು ನೋಡಿದರೆ, ಈ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಹಳೆಯ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಬುಮ್ರಾ ಜೊತೆಗೆ ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿ ಕೂಡ ಗಾಯಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರು ಸುದರ್ಶನ್ ಟೆಸ್ಟ್ ಸರಣಿಯಲ್ಲಿಯೂ ಆಡುತ್ತಾರೋ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಆಟಗಾರರು ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವುದರಿಂದ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಡಳಿತ ಮಂಡಳಿ ಮಹತ್ವದ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ. ಆ ಪ್ರಕಾರ ಟೀಮ್ ಇಂಡಿಯಾ ಫಿಸಿಯೋಥೆರಪಿಸ್ಟ್ ಕಮಲೇಶ್ ಜೈನ್ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಫಿಸಿಯೋಥೆರಪಿಸ್ಟ್ಗೆ ಗೇಟ್ಪಾಸ್?
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಶ್ರೀಲಂಕಾ ಪ್ರವಾಸದ ನಂತರ ಕಮಲೇಶ್ ಜೈನ್ ಅವರನ್ನು ಮುಂದುವರೆಸುವ ಬಗ್ಗೆ ಆಡಳಿತ ಮಂಡಳಿ ಪ್ರಮುಖ ತೀರ್ಮಾನ ಕೈಗೊಳ್ಳಲಿದೆ. 2022 ರಿಂದ ಕಮಲೇಶ್ ಜೈನ್ ಟೀಂ ಇಂಡಿಯಾದಲ್ಲಿದ್ದಾರೆ. ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿ ಬೇರೆಯವರನ್ನು ಕರೆತರಲು ಬಿಸಿಸಿಐ ಚಿಂತಿಸಿದೆ. ಸ್ಟಾರ್ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದರಿಂದ ಪ್ರಮುಖ ಸರಣಿಗಳಲ್ಲಿ ಅತ್ಯುತ್ತಮ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ತಂಡ ಅನಿರೀಕ್ಷಿತ ಸೋಲುಗಳನ್ನು ಎದುರಿಸುತ್ತಿದೆ.
ಆಟಗಾರರು ಫಿಟ್ ಆಗಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಹೋಗುತ್ತಾರೆ. ನಂತರ, ಅವರು ಫಿಟ್ನೆಸ್ ಕ್ಲಿಯರೆನ್ಸ್ ಪಡೆಯುತ್ತಾರೆ. ಆದರೆ ಟೀಂ ಇಂಡಿಯಾಕ್ಕೆ ಮರಳಿದ ನಂತರ, ಅವರು ಮತ್ತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಇದು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್ಮನ್ ಗಿಲ್ಗೆ ದೊಡ್ಡ ಸವಾಲಾಗಿದೆ. ಶುಭ್ಮನ್ ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಪ್ರಮುಖ ಆಟಗಾರರು ತಮ್ಮ ಗಾಯಗಳಿಗೆ ಸಂಬಂಧಿಸಿದಂತೆ ಸೆಂಟರ್ ಆಫ್ ಎಕ್ಸಲೆನ್ಸ್ ಬದಲಿಗೆ ವಿದೇಶಿ ತಜ್ಞರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದು ಬಿಸಿಸಿಐಗೆ ಮುಜುಗರವನ್ನುಂಟುಮಾಡುತ್ತಿದ್ದು, ಅದಕ್ಕಾಗಿಯೇ ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಈಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವರದಿಯಾಗಿದೆ.
ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
ಗಾಯದಿಂದ ಬಳಲುತ್ತಿರುವ ಆಟಗಾರರಿವರು
ಟೀಂ ಇಂಡಿಯಾದ ಗಾಯಗೊಂಡ ಆಟಗಾರರ ಪಟ್ಟಿ ದೊಡ್ಡದಿದೆ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದಾರೆ. ಹರ್ಷಿತ್ ರಾಣಾ ಕೂಡ ಆಗಾಗ್ಗೆ ಗಾಯಗಳಿಂದ ಬಳಲುತ್ತಿದ್ದಾರೆ.
Published On - 6:02 pm, Mon, 3 August 26




