ಆ ತಪ್ಪನ್ನು ಮತ್ತೆ ಮಾಡ್ಬೇಡಿ… ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಕಿಡಿ!
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ನಾಳೆಯಿಂದ (ಜುಲೈ 1) ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಒಂದು ವೇಳೆ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಪಾಲಾಗಲಿದೆ.

ಐರ್ಲೆಂಡ್ ಪ್ರವಾಸದಲ್ಲಿ ಎದುರಾದ ಆಘಾತಕಾರಿ ಸರಣಿ ಸೋಲಿನ ಬೆನ್ನಲ್ಲೇ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ನಾಯಕ ಸುನಿಲ್ ಗಾವಸ್ಕರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೆ ಐರ್ಲೆಂಡ್ ವಿರುದ್ಧ ಪೆಡ್ಲರ್ಸ್ ಮೈದಾನದಲ್ಲಿ ಆಡಲು ಅವಕಾಶ ನೀಡದಿರುವುದು ಮ್ಯಾನೇಜ್ಮೆಂಟ್ ಮಾಡಿದ “ದೊಡ್ಡ ತಪ್ಪು” ಎಂದು ಗಾವಸ್ಕರ್ ಗುಡುಗಿದ್ದಾರೆ.
ಬುಧವಾರದಿಂದ (ಜುಲೈ 1) ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ಈ ಪಂದ್ಯದಲ್ಲಾದರೂ ಭಾರತ ಆ ತಪ್ಪನ್ನು ಮರುಕಳಿಸಬಾರದು. ಅಲ್ಲದೆ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲೇ ಕಣಕ್ಕಿಳಿಸಬೇಕು ಎಂದು ಗವಾಸ್ಕರ್ ಆಗ್ರಹಿಸಿದ್ದಾರೆ.
ಸುನಿಲ್ ಗಾವಸ್ಕರ್ ವಾದವೇನು?
ಐರ್ಲೆಂಡ್ನಂತಹ ಕಡಿಮೆ ಒತ್ತಡದ ಸರಣಿಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸೂಕ್ತ ಅವಕಾಶವಿತ್ತು. ಆದರೆ ಮ್ಯಾನೇಜ್ಮೆಂಟ್ ಅತಿಯಾದ ಜಾಗರೂಕತೆ ತೋರಿ ಅವನನ್ನು ಬೆಂಚ್ ಮೇಲೆ ಕೂರಿಸಿದ್ದು ತಪ್ಪು ನಿರ್ಧಾರ ಎಂದು ಗಾವಸ್ಕರ್ ಹೇಳಿದ್ದಾರೆ.
ಐಪಿಎಲ್ 2026 ರಲ್ಲಿ ಭರ್ಜರಿ 776 ರನ್ ಸಿಡಿಸಿ ಅಬ್ಬರಿಸಿರುವ ವೈಭವ್ನ ಸ್ಫೋಟಕ ಬ್ಯಾಟಿಂಗ್ ಶೈಲಿ ಇಂಗ್ಲೆಂಡ್ ಬೌಲರ್ಗಳನ್ನು ಸುಲಭವಾಗಿ ಕಂಗಾಲು ಮಾಡಬಲ್ಲದು. ಅವನಲ್ಲಿರುವ ಪವರ್-ಹಿಟ್ಟಿಂಗ್ ಸಾಮರ್ಥ್ಯದ ಮುಂದೆ ಇಂಗ್ಲೆಂಡ್ ಹೈರಾಣರಾಗಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ನನ್ನು ಮೊದಲ ಪಂದ್ಯದಿಂದಲೇ ಕಣಕ್ಕಿಳಿಸಬೇಕು ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಯಾರನ್ನು ಕೈ ಬಿಡಬೇಕು?
ವೈಭವ್ ಸೂರ್ಯವಂಶಿಯನ್ನು ಕಣಕ್ಕಿಳಿಸಬೇಕಿದ್ದರೆ ಒಬ್ಬರನ್ನು ಕೈ ಬಿಡಬೇಕಿರುವುದು ಅನಿವಾರ್ಯ. ಆದರೆ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಅವರಂತಹ ಸೆಟ್ ಓಪನರ್ಗಳನ್ನು ಕೈಬಿಡುವ ಅಗತ್ಯವಿಲ್ಲ. ಬದಲಿಗೆ ಸದ್ಯ ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಮಿಡಲ್ ಆರ್ಡರ್ ಬ್ಯಾಟರ್ ಒಬ್ಬರನ್ನು ಕೈಬಿಟ್ಟು ವೈಭವ್ಗೆ ಜಾಗ ಮಾಡಿಕೊಡಬೇಕು ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.
ಸುನಿಲ್ ಗವಾಸ್ಕರ್ ಪ್ರಕಾರ, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿಯೇ ಮುಂದುವರೆಯಲಿ. ಇಲ್ಲಿ ಮಧ್ಯಮ ಕ್ರಮಾಂಕದಿಂದ ಒಬ್ಬರನ್ನು ಕೈ ಬಿಟ್ಟು ವೈಭವ್ ಸೂರ್ಯವಂಶಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ, ಇಂಗ್ಲೆಂಡ್ಗೆ ಸೋಲುಣಿಸಿ 21ನೇ ಶತಮಾನದಲ್ಲಿ ಇತಿಹಾಸ ಬರೆದ ಲ್ಯಾಥಮ್!
ಸುನಿಲ್ ಗವಾಸ್ಕರ್ ಅವರ ಸಲಹೆಯಂತೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ವೈಭವ್ ಸೂರ್ಯವಂಶಿಗೆ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.




