David Warner: SRH ತಂಡದಲ್ಲಿ ಡೇವಿಡ್ ವಾರ್ನರ್ ಯುಗಾಂತ್ಯ?

David Warner, SRH: ಐಪಿಎಲ್​ 2021 ರ ಆರಂಭದಲ್ಲಿ ತಂಡದ ನಾಯಕರಾಗಿದ್ದ ವಾರ್ನರ್​ ಅವರನ್ನು ತಂಡದ ಕಳಪೆ ಪ್ರದರ್ಶನದ ಕಾರಣ ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಲಾಯಿತು.

David Warner: SRH ತಂಡದಲ್ಲಿ ಡೇವಿಡ್ ವಾರ್ನರ್ ಯುಗಾಂತ್ಯ?
David Warner
Edited By:

Updated on: Sep 29, 2021 | 4:32 PM

ಸನ್​ರೈಸರ್ಸ್​ ಹೈದರಾಬಾದ್ (SRH) ತಂಡದ ಸ್ಟಾರ್ ಆಟಗಾರ, ಮಾಜಿ ನಾಯಕ ಡೇವಿಡ್ ವಾರ್ನರ್ (David Warner) ಐಪಿಎಲ್​ನಿಂದ (IPL 2021) ಹೊರಗುಳಿದ್ರಾ? ಇಂತಹದೊಂದು ಪ್ರಶ್ನೆ ಬಹುತೇಕ ಎಸ್​ಆರ್​ಹೆಚ್​ (SRH) ಅಭಿಮಾನಿಗಳಲ್ಲಿ ಮೂಡಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ (RR)​ ವಿರುದ್ದದ ಪಂದ್ಯ ವೇಳೆ ವಾರ್ನರ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ನೀಡಲಾಗಿರಲಿಲ್ಲ. ಇದಲ್ಲದೆ ಡಗೌಟ್​ನಲ್ಲೂ ವಾರ್ನರ್​ ಕಾಣಿಸಿಕೊಳ್ಳದಿರುವುದು I ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಎಸ್‌ಆರ್‌ಹೆಚ್‌ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಾರ್ನರ್​ ಎಲ್ಲಿದ್ದಾರೆ ಎಂದು ಅನೇಕ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಖುದ್ದು ಡೇವಿಡ್ ವಾರ್ನರ್​ ಉತ್ತರ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದ ವೇಳೆ ನೀವೇಕೆ ಕಾಣಿಸಿಕೊಂಡಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ವಾರ್ನರ್, “ದುರದೃಷ್ಟವಶಾತ್ ಮತ್ತೆ ಕಾಣಿಸಿಕೊಳ್ಳುವುದಿಲ್ಲ, ಆದರೆ ದಯವಿಟ್ಟು ಬೆಂಬಲಿಸುತ್ತಿರಿ” ಎಂದು ತಿಳಿಸಿದ್ದಾರೆ. ಅದರಂತೆ ಮುಂದಿನ ಪಂದ್ಯಗಳಲ್ಲಿ ವಾರ್ನರ್​ ಎಸ್​ಆರ್​ಹೆಚ್​ ಪರ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. ಹೀಗಾಗಿಯೇ ವಾರ್ನರ್​ ತಾನು ಮತ್ತೆ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ನೀವು ಎಸ್​ಆರ್​ಹೆಚ್​ ತಂಡವನ್ನು ಬೆಂಬಲಿಸಿ ಎಂಬಾರ್ಥದಲ್ಲಿ ಉತ್ತರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಸನ್​ರೈಸರ್ಸ್​ ಹೈದರಾಬಾದ್ ತಂಡದ ಕೋಚ್ ಟ್ರೆವರ್ ಬೇಲಿಸ್ ಕೂಡ ವಾರ್ನರ್​ ಹೋಟೆಲ್​ ರೂಮ್​ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಯುವ ಆಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು. ಈ ಮೂಲಕ ವಾರ್ನರ್ ಆರ್​ಆರ್ ವಿರುದ್ದದ ಪಂದ್ಯದ ವೇಳೆ ತಂಡದೊಂದಿಗೆ ಕಾಣಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿದ್ದರು. ಇದೀಗ ತಾನು ಮುಂದೆ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ವಾರ್ನರ್​ ಐಪಿಎಲ್​ 2021ಕ್ಕೆ ಗುಡ್​ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ. ಇದಾಗ್ಯೂ ವಾರ್ನರ್ ದುಬೈನಲ್ಲಿ ಉಳಿದುಕೊಳ್ಳಲು ಕಾರಣ ಟಿ20 ವಿಶ್ವಕಪ್. ಏಕೆಂದರೆ ಐಪಿಎಲ್​ 2021 ರ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ ಶುರುವಾಗಲಿದ್ದು, ಹೀಗಾಗಿ ವಾರ್ನರ್​ ಯುಎಇನಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಲ್​ 2021 ರ ಆರಂಭದಲ್ಲಿ ತಂಡದ ನಾಯಕರಾಗಿದ್ದ ವಾರ್ನರ್​ ಅವರನ್ನು ತಂಡದ ಕಳಪೆ ಪ್ರದರ್ಶನದ ಕಾರಣ ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಲಾಯಿತು. ಆ ಬಳಿಕ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸಿದ್ದರು. ಇದಾದ ಬಳಿಕ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈಬಿಡಲಾಯಿತು. ಇದಾಗ್ಯೂ ದ್ವಿತಿಯಾರ್ಧದಲ್ಲಿ ಕಾಣಿಸಿಕೊಂಡ ವಾರ್ನರ್ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಹೀಗಾಗಿ ಮೂರನೇ ಪಂದ್ಯದಿಂದ ಹೊರಗಿಡಲಾಯಿತು. ಟೀಮ್ ಮ್ಯಾನೇಜ್ಮೆಂಟ್​ನ ಈ ನಡೆಯಿಂದ ನೊಂದಿರುವ ಡೇವಿಡ್ ವಾರ್ನರ್ ಆರ್​ಆರ್ ವಿರುದ್ದ ಪಂದ್ಯದ ವೇಳೆ ಡಗೌಟ್​ನಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿರುವ ಬ್ಯಾಟ್ಸ್​ಮನ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ಚೊಚ್ಚಲ ಟ್ರೋಫಿ (2016 ರಲ್ಲಿ) ಗೆದ್ದುಕೊಟ್ಟ ನಾಯಕನನ್ನು ಟೀಮ್ ಮ್ಯಾನೇಜ್ಮೆಂಟ್​ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ SRH ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!