‘ನಾವಿಬ್ಬರು 10 ವರ್ಷಗಳಿಂದ ಮಾತನಾಡಿಲ್ಲ’; ಧೋನಿ- ಹರ್ಭಜನ್ ನಡುವೆ ವೈಮನಸ್ಸು?

Harbhajan Singh: ನನ್ನ ಮತ್ತು ಎಂ.ಎಸ್. ಧೋನಿ ನಡುವೆ ಹತ್ತು ವರ್ಷಗಳಿಂದ ಮಾತುಕತೆ ನಡೆದಿಲ್ಲ ಎಂದು ಹರ್ಭಜನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಐಪಿಎಲ್ ಮತ್ತು ವಿಶ್ವಕಪ್ ಗೆಲುವಿನಲ್ಲಿ ಒಟ್ಟಿಗೆ ಆಡಿದ್ದರೂ, ಮೈದಾನದ ಹೊರಗೆ ನಮ್ಮಿಬ್ಬರ ಸಂಬಂಧ ಸೀಮಿತವಾಗಿತ್ತು ಎಂದು ಹರ್ಭಜನ್ ಹೇಳಿದ್ದಾರೆ.

‘ನಾವಿಬ್ಬರು 10 ವರ್ಷಗಳಿಂದ ಮಾತನಾಡಿಲ್ಲ’; ಧೋನಿ- ಹರ್ಭಜನ್ ನಡುವೆ ವೈಮನಸ್ಸು?
ಹರ್ಭಜನ್ ಸಿಂಗ್, ಎಂಎಸ್ ಧೋನಿ

Updated on: Dec 04, 2024 | 7:57 PM

ನಾನು ಮತ್ತು ಎಂಎಸ್ ಧೋನಿ ಪರಸ್ಪರ ಮಾತನಾಡಿ 10 ವರ್ಷಗಳೇ ಕಳೆದಿವೆ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಧೋನಿ ಹಾಗೂ ಹರ್ಭಜನ್ ನಡುವೆ ಮಾತನಾಡದೆ ಇರುವಂತದ್ದೂ ಏನು ನಡೆದಿದೆ ಎಂಬುದು ಬಹಿರಂಗಗೊಂಡಿಲ್ಲ. ಆದರೆ ಹರ್ಭಜನ್ ನೀಡಿರುವ ಹೇಳಿಕೆಯ ಪ್ರಕಾರ, ಈ ಇಬ್ಬರು ಮಾಜಿ ಕ್ರಿಕೆಟಿಗರ ನಡುವೆ ಯಾವುದು ಸರಿ ಎಂಬುಂದತ್ತೂ ಸ್ಪಷ್ಟವಾಗಿದೆ. ವಾಸ್ತವವಾಗಿ ಹರ್ಭಜನ್ ಸಿಂಗ್ ಮತ್ತು ಧೋನಿ ಟೀಂ ಇಂಡಿಯಾ ಗೆದ್ದ ಎರಡು ವಿಶ್ವಕಪ್​ಗಳಲ್ಲಿ ತಂಡದ ಭಾಗವಾಗಿದ್ದರು. 2007ರಲ್ಲಿ ನಡೆದ ಟಿ20 ವಿಶ್ವಕಪ್‌ ಹಾಗೂ 2011 ರ ಏಕದಿನ ವಿಶ್ವಕಪ್​ನಲ್ಲಿ ಈ ಇಬ್ಬರು ಆಟಗಾರರು ಜೊತೆಯಾಗಿ ಆಡಿದ್ದರು. ಈ ಎರಡು ವಿಶ್ವಕಪ್​ ಗೆಲುವಿನಲ್ಲಿ ಹರ್ಭಜನ್ ಪ್ರಮುಖ ಪಾತ್ರವಹಿಸಿದ್ದರು.

ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿತ್ತು

ಇದಲ್ಲದೆ ಈ ಇಬ್ಬರು ಆಟಗಾರರು ಐಪಿಎಲ್​ನಲ್ಲೂ ಜೊತೆಯಾಗಿಯೇ ಆಡಿದ್ದರು. ಇದೀಗ ಐಪಿಎಲ್​ನಲ್ಲಿ ಜೊತೆಯಾಗಿ ಆಡಿದ್ದ ಅನುಭವಗಳನ್ನು ಮೆಲುಕು ಹಾಕಿರುವ ಹರ್ಭಜನ್, ಚೆನ್ನೈ ಫ್ರಾಂಚೈಸಿಯಲ್ಲಿ ನಾನು ಮತ್ತು ಧೋನಿ ವರ್ಷಗಳ ಕಾಲ ಜೊತೆಯಾಗಿಯೇ ಆಡಿದ್ದೇವು. ಆದರೆ ನಮ್ಮಿಬ್ಬರ ಸಂವಹನ ಕೇವಲ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿತ್ತು. ಮೈದಾನದ ಹೊರಗೆ ನಮ್ಮಿಬ್ಬರ ನಡುವೆ ಯಾವುದೇ ಸಂವಹನ ಇರಲಿಲ್ಲ. ಹೀಗಾಗಿ ನಮ್ಮಿಬ್ಬರ ನಡುವೆ ಮಾತುಕತೆ ನಡೆದ 10ಕ್ಕೂ ಹೆಚ್ಚು ವರ್ಷಗಳು ಕಳೆದಿವೆ.

ಧೋನಿಗೆ ಫೋನ್ ಮಾಡಲು ಹೋಗಿಲ್ಲ

ಸಿಎಸ್​ಕೆಯಲ್ಲಿ ಆಡುವ ವೇಳೆಯಲ್ಲೂ ಪಂದ್ಯ ಮುಗಿದ ನಂತರ ಧೋನಿ ಕೂಡ ನನ್ನ ಕೋಣೆಗೆ ಬರುತ್ತಿರಲಿಲ್ಲ. ನಾನು ಕೂಡ ಧೋನಿ ಹತ್ತಿರ ಹೋಗಲಿಲ್ಲ. ಹಾಗಂತ ನಮ್ಮಿಬ್ಬರ ನಡುವೆ ಅಂತದ್ದೇನು ನಡೆದಿಲ್ಲ. ಹಾಗೆನಾದರೂ ಇದಿದ್ದರೆ ಖಂಡಿತವಾಗಿಯೂ ಧೋನಿ ನನಗೆ ಅದನ್ನು ಆಗಲೇ ಹೇಳಿರುತ್ತಿದ್ದರು. ಇದಲ್ಲದೆ ನಾನು ಕೂಡ ಧೋನಿಗೆ ಫೋನ್ ಮಾಡಲು ಹೋಗಿಲ್ಲ. ಏಕೆಂದರೆ ನನ್ನ ಫೋನ್‌ಗೆ ಉತ್ತರಿಸುವವರಿಗೆ ಮಾತ್ರ ನಾನು ಕರೆ ಮಾಡುತ್ತೇನೆ. ಇಲ್ಲದಿದ್ದರೆ ನನಗೆ ಸಮಯವಿಲ್ಲ. ನಾನು ಸ್ನೇಹಿತರಾಗಿರುವ ಜನರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಸಂಬಂಧವು ಯಾವಾಗಲೂ ಎರಡೂ ಕಡೆಗಳಿಂದಲೂ ಸಹಕಾರವನ್ನು ಬಯಸುತ್ತದೆ. ನಾನು ನಿಮಗೆ ಎಷ್ಟು ಗೌರವ ನೀಡುತ್ತೇನೋ, ನಿಮ್ಮಿಂದಲೂ ನಾನು ಅದೇ ಗೌರವವನ್ನು ನಿರೀಕ್ಷಿಸುತ್ತೇನೆ. ನಾನು ನಿಮಗೆ ಒಂದೆರಡು ಬಾರಿ ಕರೆ ಮಾಡಿದಾಗ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನಾನು ಮತ್ತೆ ಅವರಿಗೆ ಕರೆ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.

ವಾಸ್ತವವಾಗಿ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ವಿರುದ್ಧ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹರ್ಭಜನ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಬೇಗನೇ ಕೊನೆಗೊಳ್ಳಲು ಧೋನಿಯೇ ಕಾರಣ ಎಂತಲೂ ಹರ್ಭಜನ್ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us