Mohammed Siraj: ಆಯ್ಕೆ ಮಾಡದಿದ್ದಾಗ ನಿಜಕ್ಕೂ ತುಂಬಾ ನೋವಾಗಿತ್ತು: ಸಿರಾಜ್ ಬೇಸರ
IPL 2025 SRH vs GT: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 19ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 152 ರನ್ ಕಲೆಹಾಕಿತು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡ 16.4 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2025: ಐಪಿಎಲ್ನ 19ನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೈದಾರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಸಿರಾಜ್ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು.
ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಮೊಹಮ್ಮದ್ ಸಿರಾಜ್, ತವರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಖುಷಿ ನೀಡಿದೆ. ಏಕೆಂದರೆ ಇಂದಿನ ಪಂದ್ಯ ವೀಕ್ಷಿಸಲು ನನ್ನ ಕುಟುಂಬಸ್ಥರು ಸ್ಟೇಡಿಯಂಗೆ ಆಗಮಿಸಿದ್ದರು. ಹೀಗಾಗಿ ಅವರ ಮುಂದೆ ಉತ್ತಮ ಪ್ರದರ್ಶನ ನೀಡಿರುವುದು ವಿಶೇಷ ಅನುಭವ ಎಂದರು.
ಇನ್ನು ನಾನು 7 ವರ್ಷಗಳ ಕಾಲ ಆರ್ಸಿಬಿ ಪರ ಆಡಿದ್ದೇನೆ. ಈ ವೇಳೆ ನನ್ನ ಬೌಲಿಂಗ್ ಉತ್ತಮಗೊಳಿಸಲು ಮತ್ತು ಮನಸ್ಥಿತಿ ಬದಲಿಸಲು ಶ್ರಮ ಹಾಕಿರುವೆ. ಅದು ಈಗ ನಿಜವಾಗಿಯೂ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಇದೇ ವೇಳೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗದಿರುವ ಬಗ್ಗೆ ಕೇಳಿದಾಗ, ನಿಜಕ್ಕೂ ನಾನು ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಜವಾಗಲೂ ತುಂಬಾ ನೋವಾಗಿತ್ತು. ಇದಾಗ್ಯೂ ನಾನು ನನ್ನ ಉತ್ಸಾಹವನ್ನು ಉಳಿಸಿಕೊಂಡು ನನ್ನ ಫಿಟ್ನೆಸ್ ಮತ್ತು ಆಟದತ್ತ ಗಮನ ಹರಿಸಿದೆ.
ನನ್ನ ಬೌಲಿಂಗ್ನಲ್ಲಿ ಉಂಟಾಗುತ್ತಿದ್ದ ತಪ್ಪುಗಳನ್ನು ಸರಿಪಡಿಸುವತ್ತ ಚಿತ್ತ ನೆಟ್ಟಿದ್ದೇನೆ. ಅಲ್ಲದೆ ಅವುಗಳನ್ನು ಸರಿಪಡಿಸಲು ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೀಗ ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ. ಒಬ್ಬ ವೃತ್ತಿಪರನಾಗಿ, ನೀವು ಭಾರತ ತಂಡದೊಂದಿಗೆ ಸ್ಥಿರವಾಗಿ ಇರುವಾಗ, ಸಡನ್ ಆಗಿ ನಿಮ್ಮನ್ನು ಕೈ ಬಿಟ್ಟಾಗ ನಮ್ಮ ಮೇಲೆಯೇ ಸಂದೇಹಗಳು ಮೂಡುತ್ತವೆ.
ಇದನ್ನೂ ಓದಿ: ಡಾಟ್ ಬಾಲ್ನಲ್ಲೇ ಅರ್ಧಶತಕ: ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್
ಆದರೆ ಟೀಮ್ ಇಂಡಿಯಾದಿಂದ ನನ್ನನ್ನು ಕೈ ಬಿಟ್ಟಾಗ, ನೋವಾಗಿದ್ದರೂ ನಾನು ನನ್ನನ್ನು ಹುರಿದುಂಬಿಸಿಕೊಂಡೆ. ಐಪಿಎಲ್ಗಾಗಿ ತಯಾರಿಗಳನ್ನು ಆರಂಭಿಸಿದ್ದೆ. ಇದೀಗ ಅದರ ಪ್ರತಿಫಲ ಸಿಗುತ್ತಿದೆ. ನೀವು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದಾಗ, ಯಾವಾಗಲೂ ಉನ್ನತ ಸ್ಥಾನದಲ್ಲಿರುತ್ತೀರಿ. ಇದೀಗ ನಾನು ಸಹ ಉತ್ತಮ ಪ್ರದರ್ಶನದೊಂದಿಗೆ ನನ್ನ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.