
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ((India vs Sri Lanka)) ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಎರಡು ವಿಕೆಟ್ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ದೇವದತ್ ಪಡಿಕ್ಕಲ್ (Devdutt Padikkal) 178 ಎಸೆತಗಳಲ್ಲಿ ಅಜೇಯ131 ರನ್ ಬಾರಿಸಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನ ಸಂಪೂರ್ಣ 90 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಲ್ಲದೆ ಮಳೆ ಆಟಕ್ಕೆ ಅಡ್ಡಿಪಡಿಸಿದರ ಕಾರಣ ಮೊದಲ ದಿನ 73 ಓವರ್ಗಳ ಆಟ ಮಾತ್ರ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭವೇ ಸಿಕ್ಕಿತು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 47 ರನ್ಗಳ ಜೊತೆಯಾಟ ನೀಡಿದರು. ಆದಾಗ್ಯೂ ಜೈಸ್ವಾಲ್ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾಗಬೇಕಾಯಿತು. ಔಟಾಗುವುದಕ್ಕೂ ಮುನ್ನ ಉತ್ತಮ ಫಾರ್ಮ್ನಲ್ಲಿದ್ದ ಜೈಸ್ವಾಲ್ 37 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 32 ರನ್ ಗಳಿಸಿದ್ದರು.
ಜೈಸ್ವಾಲ್ ವಿಕೆಟ್ ಬಳಿಕ ಬಂದ ದೇವದತ್ ಪಡಿಕ್ಕಲ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಅಭ್ಯಾಸ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ಪಡಿಕ್ಕಲ್, ಮೊದಲ ಟೆಸ್ಟ್ನ ಎರಡನೇ ಸೆಷನ್ನಲ್ಲಿ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ನಲ್ಲಿ ಪಡಿಕ್ಕಲ್ ಅವರ ಎರಡನೇ ಅರ್ಧಶತಕವಾಗಿತ್ತು. ಇದಕ್ಕೂ ಮೊದಲು ಪಡಿಕ್ಕಲ್ 29 ತಿಂಗಳ ಹಿಂದೆ ಅಂದರೆ ಮಾರ್ಚ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ 65 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇತ್ತ ಕೆಎಲ್ ರಾಹುಲ್ ಕೂಡ 127 ಎಸೆತಗಳಲ್ಲಿ 50 ರನ್ಗಳ ಗಡಿ ದಾಟಿದರು. ಇವರಿಬ್ಬರು ಎರಡನೇ ವಿಕೆಟ್ಗೆ 150 ರನ್ಗಳ ಜೊತೆಯಾಟ ನಿರ್ಮಿಸಿದರು.
ಆದರೆ ಮೂರನೇ ಸೆಷನ್ ಆರಂಭಕ್ಕೂ ಮುನ್ನ ಕೆಎಲ್ ರಾಹುಲ್ ಸ್ನಾಯು ಸೆಳೆತದಿಂದಾಗಿ ಬ್ಯಾಟಿಂಗ್ ಮುಂದುವರೆಸದರಿಲು ನಿರ್ಧರಿಸಿದರು. ಹೀಗಾಗಿ ನಾಯಕ ಶುಭಮನ್ ಗಿಲ್ ಮೂರನೇ ಸೆಷನ್ನಲ್ಲಿ ಬ್ಯಾಟಿಂಗ್ಗೆ ಬರಬೇಕಾಯಿತು. ರಾಹುಲ್ ಮೈದಾನ ತೊರೆದ ಬಳಿಕ ಇನ್ನಿಂಗ್ಸ್ ಜವಾಬ್ದಾರಿ ನಿರ್ವಹಿಸಿದ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಪೂರೈಸಿದರು. ಇತ್ತ ನಾಯಕ ಗಿಲ್ಗೆ ಮೊದಲ ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು 28 ಎಸೆತಗಳನ್ನು ಎದುರಿಸಿ 16 ರನ್ಗಳಿಗೆ ಔಟಾದರು. ಪ್ರಭಾತ್ ಜಯಸೂರ್ಯ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಗಿಲ್ ಕ್ಯಾಚಿತ್ತು ನಿರ್ಗಮಿಸಿದರು.
IND vs SL: ಸ್ವಾತಂತ್ರ್ಯ ದಿನದಂದು ಐತಿಹಾಸಿಕ ಶತಕ ಬಾರಿಸಿದ ದೇವದತ್ ಪಡಿಕ್ಕಲ್
ಇತ್ತ ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ ಮಾತ್ರ 1 ವಿಕೆಟ್ ಪಡೆದರು. ಇವರನ್ನು ಹೊರತುಪಡಿಸಿ, ಎಲ್ಲಾ ಬೌಲರ್ಗಳು ವಿಕೆಟ್ ಪಡೆಯಲು ಕಷ್ಟಪಡಬೇಕಾಯಿತು. ಶುಭಮನ್ ಗಿಲ್ ಔಟಾದ ನಂತರ, ರಿಷಭ್ ಪಂತ್ ಮೈದಾನಕ್ಕೆ ಬಂದರು. ಆದರೆ ಮಳೆ ಬಂದ ಕಾರಣದಿಂದಾಗಿ ಆಟ ನಿಲ್ಲಿಸಬೇಕಾಯಿತು. ಮಳೆ ನಿಂತ ಬಳಿಕ ಆಟ ಮತ್ತೆ ಆರಂಭವಾಯಿತು. ಆದರೆ ಮಂದ ಬೆಳಕಿನ ಕಾರಣ ಅಂಪೈರ್ಗಳು ಎರಡನೇ ದಿನದಾಟವನ್ನು ಅಂತ್ಯಗೊಳಿಸಲು ನಿರ್ಧರಿಸಿದರು.
Published On - 6:10 pm, Sat, 15 August 26