ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಖಚಿತ!
India vs Sri Lanka 2nd Test: ಭಾರತ ಮತ್ತು ಶ್ರೀಲಂಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ ಕೊಲೊಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ಆರಂಭವಾಗಲಿದೆ. ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ ತಂಡವು ಈ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಜಯಿಸಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟೆಸ್ಟ್ ಪಂದ್ಯವು ಭಾನುವಾರದಿಂದ (ಆ.23) ಶುರುವಾಗಲಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಒಂದು ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಮೊದಲ ಮ್ಯಾಚ್ನಲ್ಲಿ ಕಣಕ್ಕಿಳಿದಿದ್ದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅವರನ್ನು ಕೂರಿಸಿ ಸ್ಪಿನ್ ಆಲ್ರೌಂಡರ್ ಸರಾಂಶ್ ಜೈನ್ಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಪಡಿಕ್ಕಲ್ – ಸುತಾರ್ ಫಿಕ್ಸ್:
ಮೊದಲ ಟೆಸ್ಟ್ನ ಎರಡು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 167 ಮತ್ತು 44 ರನ್ ಚಚ್ಚಿದ ಕರ್ನಾಟಕದ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಎದುರಾಳಿಗಳ ಬೆನ್ನುಲುಬು ಮುರಿದ ಯುವ ಸ್ಪಿನ್ನರ್ ಮಾನವ್ ಸುತಾರ್ ಒಟ್ಟು 10 ವಿಕೆಟ್ ಉರುಳಿಸಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಹೀಗಾಗಿ ಮೊದಲ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ವಿಫಲರಾಗಿದ್ದ ಸ್ಪಿನ್ನರ್ ಕುಲ್ದೀಪ್ ಯಾದವ್ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಕೊಲಂಬೊದ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವುದರಿಂದ, ಶ್ರೀಲಂಕಾ ತಂಡದಲ್ಲಿರುವ ಎಡಗೈ ಬ್ಯಾಟರ್ಗಳನ್ನು ಕಟ್ಟಿಹಾಕಲು ಆಫ್-ಸ್ಪಿನ್ನರ್ ಸರಾಂಶ್ ಜೈನ್ ಅವರಿಗೆ ಅವಕಾಶ ಕಲ್ಪಿಸಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
- ಯಶಸ್ವಿ ಜೈಸ್ವಾಲ್
- ಕೆ.ಎಲ್. ರಾಹುಲ್
- ದೇವದತ್ ಪಡಿಕ್ಕಲ್
- ಶುಭ್ಮನ್ ಗಿಲ್ (ನಾಯಕ)
- ರಿಷಭ್ ಪಂತ್ (ವಿಕೆಟ್ ಕೀಪರ್)
- ಧ್ರುವ್ ಜುರೆಲ್
- ರವೀಂದ್ರ ಜಡೇಜಾ
- ಮಾನವ್ ಸುತಾರ್
- ಸರಾಂಶ್ ಜೈನ್
- ಮೊಹಮ್ಮದ್ ಸಿರಾಜ್
- ಪ್ರಸಿದ್ಧ್ ಕೃಷ್ಣ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ 2-0 ಅಂತರದಿಂದ ಸರಣಿ ವಶಪಡಿಸಿಕೊಳ್ಳಬಹುದು. ಅಂದರೆ ಶ್ರೀಲಂಕಾ ಪಾಲಿಗೆ ದ್ವಿತೀಯ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯ. ಆದರೆ ಇತ್ತ ಸರಣಿ ಜಯಿಸಲು ಭಾರತ ತಂಡ ಗೆಲುವು ಅಥವಾ ಡ್ರಾ ಸಾಧಿಸಿದರೆ ಸಾಕು. ಹೀಗಾಗಿ ಕೊಲಂಬೊ ಟೆಸ್ಟ್ ಗೆಲ್ಲಲು ಶ್ರೀಲಂಕಾ ತಂಡ ಭರ್ಜರಿ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ: ಇತಿಹಾಸ ಬರೆದ ಪೋರ್ಚುಗಲ್: ಟಿ20 ವಿಶ್ವಕಪ್ ಕ್ವಾಲಿಫೈಯರ್ಗೆ ಲಗ್ಗೆ!
ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ, ಸರ್ಫರಾಝ್ ಖಾನ್.




