
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಿಂದ ಆರಂಭವಾಗಲಿದೆ. ಈ ಸರಣಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಈ ಸರಣಿ ಭಾರತದಲ್ಲಿ ನಡೆಯತ್ತಿದೆಯಾದರೂ ಅಫ್ಘಾನಿಸ್ತಾನ ತಂಡ ಆತಿಥೇಯ ತಂಡವಾಗಿ ಕಣಕ್ಕಿಳಿಯಲಿದೆ. ಇನ್ನೇರಡು ದಿನಗಳಲ್ಲಿ ಆರಂಭವಾಗಲಿರುವ ಈ ಸರಣಿಗಾಗಿ ಟೀಂ ಇಂಡಿಯಾ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಆದರೆ ಟೀಂ ಇಂಡಿಯಾಕ್ಕೆ ದೆಹಲಿಯಲ್ಲಿ ಯಾವುದೇ ರೀತಿಯ ಭದ್ರತೆಯನ್ನು ಒದಗಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಟೀಂ ಇಂಡಿಯಾ ತಾವು ತಂಗಿರುವ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಮತ್ತು ಕ್ರೀಡಾಂಗಣದಲ್ಲಿ ಪುನಃ ಹೋಟೆಲ್ಗೆ ತೆರಳುವಾಗ ತಂಡದ ಬಸ್ ಜೊತೆಗೆ ಭದ್ರತಾ ವಾಹನದ ವ್ಯವಸ್ಥೆಯಾಗಿರಲಿಲ್ಲ ಎಂದು ವರದಿಯಾಗಿದೆ.
ಪ್ರಸ್ತುತ ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 11 ರಿಂದ 13 ರವರೆಗೆ ನಡೆಯುತ್ತಿದೆ. ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ವಿದೇಶಿ ನಿಯೋಗಗಳು, ರಾಜತಾಂತ್ರಿಕರು ಮತ್ತು ಉನ್ನತ ವಿವಿಐಪಿಗಳು ಭಾಗವಹಿಸುತ್ತಿದ್ದಾರೆ. ಇತ್ತ ಸೆಪ್ಟೆಂಬರ್ 13 ರಂದು ಟಿ20 ಸರಣಿಯ ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಹೀಗಾಗಿ ಒಂದೇ ದಿನ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಭದ್ರತೆ ನೀಡುವುದು ಕಷ್ಟ ಎಂಬುದನ್ನು ಉಲ್ಲೇಖಿಸಿ ಪೊಲೀಸ್ ಇಲಾಖೆ ದೆಹಲಿ ಕ್ರಿಕೆಟ್ ಅಸೋಸಿಯೇಷನ್ಗೆ ಪತ್ರ ಬರೆದಿತ್ತು. ಆದರೆ ಪೊಲೀಸ್ ಇಲಾಖೆ ಜೊತೆಗಿನ ಮಾತುಕತೆಯ ನಂತರ ಪಂದ್ಯವನ್ನು ನಿಗದಿತ ದಿನದಂದೇ ನಡೆಸಲಾಗುತ್ತದೆ ಎಂದು ಡಿಡಿಸಿಎ ಮಾಹಿತಿ ನೀಡಿತ್ತು.
ಭಾರತ-ಅಫ್ಘನ್ ಟಿ20 ಸರಣಿ ವೇಳಾಪಟ್ಟಿ ಬದಲಾವಣೆಗೆ ದೆಹಲಿ ಪೊಲೀಸರ ಮನವಿ
ಇದರ ಪರಿಣಾಮವಾಗಿ ಬ್ರಿಕ್ಸ್ ಶೃಂಗಸಭೆಗೆ ಹೆಚ್ಚಿನ ಭದ್ರತೆ ಕಲ್ಪಿಸಿರುವುದರಿಂದ ಭಾರತ ತಂಡದ ಅಭ್ಯಾಸಕ್ಕೆ ಭದ್ರತೆಯನ್ನು ಒದಗಿಸಿಲ್ಲ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಟೀಂ ಇಂಡಿಯಾ ಗುರುವಾರದಂದು ಮೊದಲ ಅಭ್ಯಾಸ ಸೆಷನ್ ನಡೆಸಿತ್ತು. ಆ ಸಮಯದಲ್ಲಿ ತಂಡದ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಯಾವುದೇ ಭದ್ರತಾ ಅಧಿಕಾರಿಯಾಗಲಿ ಅಥವಾ ಬೆಂಗಾವಲು ವಾಹನಗಳು ಇರಲಿಲ್ಲ ಎಂದು ವರದಿಯಾಗಿದೆ. ಸಾಮಾನ್ಯವಾಗಿ ತಂಡಗಳು ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಬರುವ ಸಮಯದಲ್ಲಿ ಪೊಲೀಸ್ ಬೆಂಗಾವಲು ವಾಹನ ತಂಡದ ಬಸ್ ಜೊತೆಗೆ ಬರುತ್ತವೆ. ಆದರೀಗ ದೆಹಲಿಯಲ್ಲಿರುವ ಭಾರತ ತಂಡಕ್ಕೆ ಈ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂದು ವರದಿಯಾಗಿದೆ. ಆದಾಗ್ಯೂ ಇಂದು ಬ್ರಿಕ್ಸ್ ಶೃಂಗಸಭೆಯ ಮೊದಲ ದಿನವಾಗಿರುವ ಕಾರಣ ಹೆಚ್ಚಿನ ಆಧ್ಯತೆಯನ್ನು ಅಲ್ಲಿಗೆ ನೀಡಲಾಗಿದೆ. ಹೀಗಾಗಿ ಪಂದ್ಯದ ದಿನದಂದು ಉಭಯ ತಂಡಗಳಿಗೆ ಹೆಚ್ಚಿನ ಭದ್ರತೆ ನೀಡುವ ಸಾಧ್ಯತೆಗಳಿವೆ.