IPL 2025: ಭಾರತ-ಪಾಕ್ ನಡುವೆ ಕದನ ವಿರಾಮ; ನಾಳೆಯಿಂದ ಶುರುವಾಗುತ್ತಾ ಐಪಿಎಲ್?
India-Pakistan Ceasefire: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಗೆ ತಾತ್ಕಾಲಿಕ ಕದನವಿರಾಮ ಘೋಷಣೆಯಾಗಿದೆ. ಇದರಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025ರ ಎರಡನೇ ಹಂತ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಆದರೆ, ವಿದೇಶಿ ಆಟಗಾರರ ಆಗಮನ ಮತ್ತು ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ಲೀಗ್ನ ತಕ್ಷಣದ ಆರಂಭ ಅನುಮಾನದಲ್ಲಿದೆ. ಬಿಸಿಸಿಐ ಸರ್ಕಾರದೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡಿದ್ದ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ್ (Operation Sindoor ) ಆರಂಭಿಸಿ ಪಾಕಿಸ್ತಾನದ ಹುಟ್ಟಡಗಿಸಿತ್ತು. ಭಾರತವನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನ ನಾನಾ ರೀತಿಯ ಪ್ರಯತ್ನ ಮಾಡಿತ್ತಾದರೂ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಹೀಗಾಗಿ ಕೊನೆಗೂ ಭಾರತದ ಮುಂದೆ ಮಂಡಿಯೂರಿರುವ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಗಿದೆ. ಹೀಗಾಗಿ ಮೇ 10 ರ ಶನಿವಾರದಂದು ತಕ್ಷಣದಿಂದ ಜಾರಿಗೆ ಬರುವಂತೆ ಉಭಯ ದೇಶಗಳ ನಡುವೆ ಕದನ ವಿರಾಮವನ್ನು (India Pakistan ceasefire) ಘೋಷಿಸಲಾಗಿದೆ. ಹೀಗಾಗಿ ಅರ್ಧಕ್ಕೆ ನಿಂತಿದ್ದ 2025 ರ ಐಪಿಎಲ್ (IPL 2025) ದ್ವಿತೀಯಾರ್ಧ ಇಷ್ಟರಲ್ಲೇ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ್ದ ಬಿಸಿಸಿಐ ಮೇ 9 ರ ಶನಿವಾರ, ಐಪಿಎಲ್ 2025 ರ ಸೀಸನ್ ಅನ್ನು ಒಂದು ವಾರ ಮುಂದೂಡುವುದಾಗಿ ಘೋಷಿಸಿತ್ತು. ಆದರೆ ದಿನೇ ದಿನೇ ಉಭಯ ದೇಶಗಳ ನಡುವಿನ ಸೇನಾ ಕಾರ್ಯಾಚರಣೆ ಜೋರಾದ ಕಾರಣ, ವಾರದ ಬಳಿಕವೂ ಐಪಿಎಲ್ ಆರಂಭವಾಗುವುದು ಕಷ್ಟ ಎಂದು ತೋರುತ್ತಿತ್ತು. ಹೀಗಾಗಿ ಪಂದ್ಯಾವಳಿ ನಡೆಸಲು ಬೇರೆ ದಾರಿಯನ್ನು ಹುಡುಕಲು ಮುಂದಾಗಿದ್ದ ಬಿಸಿಸಿಐ, ವಿದೇಶದಲ್ಲಿ ಲೀಗ್ ನಡೆಸಲು ಚಿಂತಿಸಿತ್ತು. ಆದರೀಗ ಕದನ ವಿರಾಮ ಘೋಷಣೆಯಾಗಿರುವುದರಿಂದ ಪಂದ್ಯಾವಳಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿವೆ.
17 ಪಂದ್ಯಗಳು ಬಾಕಿ ಉಳಿದಿವೆ
ಶನಿವಾರ ಸಂಜೆ ಭಾರತೀಯ ವಿದೇಶಾಂಗ ಸಚಿವಾಲಯ ಕದನ ವಿರಾಮ ಘೋಷಣೆ ಮಾಡಿದ ನಂತರ, ಎರಡೂ ದೇಶಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯಾವಳಿ ಮತ್ತೆ ಪ್ರಾರಂಭವಾಗಬಹುದೆಂಬ ಭರವಸೆಯನ್ನು ಹೊಂದಿದ್ದಾರೆ. ಈ ಸೀಸನ್ನಲ್ಲಿ ಇಲ್ಲಿಯವರೆಗೆ 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈ ರೀತಿಯಾಗಿ ಸೀಸನ್ನಲ್ಲಿ ಒಟ್ಟು 17 ಪಂದ್ಯಗಳು ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಮತ್ತೊಮ್ಮೆ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ.
IPL 2025: ದ್ವಿತೀಯಾರ್ಧದ ಐಪಿಎಲ್ಗೆ ವಿದೇಶಿ ಆಟಗಾರರು ಬರದಿದ್ದರೆ ಬಿಸಿಸಿಐ ಮುಂದಿನ ನಡೆ ಏನು?
ತಕ್ಷಣ ಆರಂಭವಾಗುವ ಸಾಧ್ಯತೆಗಳಿಲ್ಲ
ಆದರೆ ದೊಡ್ಡ ಪ್ರಶ್ನೆ ಏನೆಂದರೆ, ಪಂದ್ಯಾವಳಿ ತಕ್ಷಣ ಆರಂಭವಾಗುತ್ತದೆಯೇ? ಉತ್ತರ – ಇಲ್ಲ. ವಾಸ್ತವವಾಗಿ, ಪಂದ್ಯಾವಳಿಯನ್ನು ಮುಂದೂಡಿದ ನಂತರ ಬಿಸಿಸಿಐ, ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅದರ ಸಲಹೆಯ ಆಧಾರದ ಮೇಲೆ ಯಾವುದೇ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿತ್ತು. ಅಂತಹ ಪರಿಸ್ಥಿತಿಯಲ್ಲಿ, ಕದನ ವಿರಾಮ ಘೋಷಿಸಿದ ತಕ್ಷಣ ಲೀಗ್ ಪ್ರಾರಂಭವಾಗುವ ಸಾಧ್ಯತೆಯಿಲ್ಲ. ಕದನ ವಿರಾಮದ ಹೊರತಾಗಿಯೂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವುದು ಇದಕ್ಕೆ ಒಂದು ಕಾರಣ. ಎರಡನೆಯ ಕಾರಣವೆಂದರೆ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಿರುವುದು. ಇಂತಹ ಪರಿಸ್ಥಿತಿಯಲ್ಲಿ, ಆ ಆಟಗಾರರು ತಕ್ಷಣ ಭಾರತಕ್ಕೆ ಮರಳಲು ಸಾಧ್ಯವಾಗುತ್ತದೆಯೇ? ಅಲ್ಲದೆ, ಅವರು ಈಗ ಆಡಲು ಸಿದ್ಧರಾಗಿದ್ದಾರೆಯೇ? ಎಂಬ ಪ್ರಶ್ನೆಗಳು ಮೂಡಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Sat, 10 May 25