ಸಹೋದರರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುತ್ತಾ ಆರ್​ಸಿಬಿ- ಮುಂಬೈ ಪಂದ್ಯ?

MI vs RCB IPL 2026: ಏಪ್ರಿಲ್ 12 ರಂದು ವಾಂಖೆಡೆಯಲ್ಲಿ ಐಪಿಎಲ್ 2026 ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಐದು ಬಾರಿ ಚಾಂಪಿಯನ್ ಎಂಐ ಎದುರಿಸಲಿದೆ. ಈ ಪಂದ್ಯದ ಮುಖ್ಯ ಆಕರ್ಷಣೆ ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಮುಖಾಮುಖಿ. ಕಳೆದ ಕೆಲವು ತಿಂಗಳಿಂದ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ವದಂತಿಗಳು ಈ ಪಂದ್ಯಕ್ಕೆ ಮತ್ತಷ್ಟು ಕುತೂಹಲ ಮೂಡಿಸಿವೆ.

ಸಹೋದರರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುತ್ತಾ ಆರ್​ಸಿಬಿ- ಮುಂಬೈ ಪಂದ್ಯ?
Krunal Vs Hardik

Updated on: Apr 12, 2026 | 5:48 PM

ಏಪ್ರಿಲ್ 12 ರ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 (IPL 2026) ರ 20 ನೇ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎರಡು ಚಾಂಪಿಯನ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿ ಐಪಿಎಲ್ ಟ್ರೋಫಿ ವಿಜೇತ ಮುಂಬೈ ಇಂಡಿಯನ್ಸ್ (RCB vsMI) ವಿರುದ್ಧ ಸೆಣಸಲಿದೆ. ಪಂದ್ಯವು ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಇಬ್ಬರು ಸಹೋದರರು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಅದರಲ್ಲೂ ಈ ಇಬ್ಬರು ಸಹೋದರರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಶೀತಲ ಸಮರ ನಡೆಯುತ್ತಿರುವುದು ಈ ಪಂದ್ಯದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಾರ್ದಿಕ್ vs ಕೃನಾಲ್

ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಮುಂಬೈ vs ಬೆಂಗಳೂರು ಪಂದ್ಯದಲ್ಲಿ ಪರಸ್ಪರ ವಿರುದ್ಧವಾಗಿ ಆಡಲಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಇಬ್ಬರೂ ಆಲ್ರೌಂಡರ್‌ಗಳಾಗಿದ್ದು ಕೃನಾಲ್ ಆರ್‌ಸಿಬಿಯನ್ನು ಪ್ರತಿನಿಧಿಸಿದರೆ, ಪಾಂಡ್ಯ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮುಂಬೈ vs ಆರ್‌ಸಿಬಿ ಈ ಪಂದ್ಯಾವಳಿಯ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ, ಇಬ್ಬರು ಸಹೋದರರು ಕ್ರಿಕೆಟ್‌ನಲ್ಲಿ ಹಲವು ಬಾರಿ ಒಟ್ಟಿಗೆ ಮತ್ತು ಪರಸ್ಪರ ವಿರುದ್ಧವಾಗಿ ಆಡಿದ್ದಾರೆ. ಆದರೆ ಮುಂಬೈ-ಆರ್‌ಸಿಬಿ ಪಂದ್ಯವು ಸ್ವಲ್ಪ ಮಟ್ಟಿಗೆ ವಿಶೇಷವಾಗಲಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಪಾಂಡ್ಯ ಸಹೋದರರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಪರಸ್ಪರರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂತಲೂ ವರದಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ಸಹೋದರರಿಬ್ಬರು ಮುಖಾಮುಖಿಯಾದಾಗ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಮನಸ್ತಾಪಕ್ಕೆ ಪುಷ್ಠಿ ನೀಡುತ್ತಿದೆ ಇಬ್ಬರ ನಡೆ

ವಾಸ್ತವವಾಗಿ ಮಾರ್ಚ್ 8 ರಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಚಾಂಪಿಯನ್ ಟೀಂ ಇಂಡಿಯಾಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದಿತ್ತು. ಆದರೆ ಭಾರತ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯಗೆ ಅವರ ಸಹೋದರ ಕೃನಾಲ್ ಪಾಂಡ್ಯ ಕಡೆಯಿಂದ ಯಾವುದೇ ಅಭಿನಂದನೆಯಾಗಲಿ, ಶುಭಾಶಯವಾಗಲಿ ವ್ಯಕ್ತವಾಗಿರಲಿಲ್ಲ.

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ

ಇದಾದ ಬಳಿಕವೇ ಇವರಿಬ್ಬರ ನಡುವೆ ಏನೂ ಸರಿ ಇಲ್ಲ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಯಿತು. ಆದರೆ ಈ ವದಂತಿಯ ಬಗ್ಗೆ ಇಬ್ಬರು ಸಹೋದರರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಹೀಗಾಗಿ ಇಂದಿನ ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್-ಕೃನಾಲ್ ಸಹೋದರರು ಈ ವದಂತಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us