ಸಾಮಾನ್ಯ ಬುದ್ಧಿ ಇಲ್ವಾ? ಪಂತ್ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ
Sri Lanka vs India, 1st Test: ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಭಾರತ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 460 ರನ್ ಕಲೆಹಾಕಿದೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಮೊತ್ತದತ್ತ ಹೆಜ್ಜೆ ಇಡುತ್ತಿದ್ದರೂ, ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಬೇಜವಾಬ್ದಾರಿಯುತ ವಿಕೆಟ್ ಒಪ್ಪಿಸುವಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅತ್ಯುತ್ತಮವಾಗಿ ಆಡುತ್ತಿದ್ದ ಪಂತ್, 62 ಎಸೆತಗಳಲ್ಲಿ 39 ರನ್ ಗಳಿಸಿದ್ದಾಗ ಅನಗತ್ಯ ಹೊಡೆತಕ್ಕೆ ಕೈಹಾಕಿ ಔಟಾದರು. ಪಂತ್ ಅವರ ಈ ಬ್ಯಾಟಿಂಗ್ ಆಯ್ಕೆಯನ್ನು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೈಫ್ ಪ್ರಕಾರ, ಪಂತ್ ಕ್ರಿಕೆಟ್ ಆಡುವಾಗ ಪರಿಸ್ಥಿತಿಗೆ ತಕ್ಕಂತೆ ‘ಸಾಮಾನ್ಯ ಬುದ್ದಿ’ ಬಳಸುತ್ತಿಲ್ಲ. ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಪಂತ್, ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವ ಜವಾಬ್ದಾರಿ ಹೊಂದಿದ್ದರು. ಆದರೆ ಶ್ರೀಲಂಕಾ ತಂಡ ಎರಡನೇ ಹೊಸ ಚೆಂಡನ್ನು ಪಡೆದ ಮೊದಲ ಓವರ್ನಲ್ಲೇ, ಆಫ್ ಸ್ಪಿನ್ನರ್ ಕೇಶರ ನುವಾಂತ ಅವರ ಬೌಲಿಂಗ್ನಲ್ಲಿ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಕೈಹಾಕಿದರು. ಬ್ಯಾಟ್ನ ಕೆಳಭಾಗಕ್ಕೆ ತಗುಲಿದ ಚೆಂಡು ಮಿಡ್-ಆಫ್ನಲ್ಲಿದ್ದ ಫೀಲ್ಡರ್ ಕೈ ಸೇರಿತು.
‘ಕ್ರಿಕೆಟಿಂಗ್ ಲಾಜಿಕ್’ ಮರೆತ ಪಂತ್:
ಈ ಬಗ್ಗೆ ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, “ಒಬ್ಬ ಬ್ಯಾಟರ್ ಶತಕ ಅಥವಾ 150 ರನ್ ಗಳಿಸಿ ಕ್ರೀಸ್ನಲ್ಲಿದ್ದರೂ ಸಹ, ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಚೆಂಡು ಬಂದಾಗ ಕನಿಷ್ಠ 5 ರಿಂದ 6 ಓವರ್ಗಳ ಕಾಲ ಜಾಗರೂಕರಾಗಿ ಆಡುವುದು ಸಾಮಾನ್ಯ ನಿಯಮ. ಆದರೆ ಪಂತ್ ಹೊಸ ಚೆಂಡು ಬಂದ ಮೊದಲ ಓವರ್ನಲ್ಲೇ ಕ್ರೀಸ್ ಬಿಟ್ಟು ಮುನ್ನುಗ್ಗಿದರು. ಇದು ಯಾವುದೇ ಕ್ರಿಕೆಟಿಂಗ್ ಲಾಜಿಕ್ ಇಲ್ಲದ ನಡೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವದ ಅತ್ಯುತ್ತಮ ಆಕ್ರಮಣಕಾರಿ ಬ್ಯಾಟರ್ಗಳು ಸಹ ತಮ್ಮ ಆಟದ ವೇಗ ಮತ್ತು ಪರಿಸ್ಥಿತಿಯ ಗಾಂಭೀರ್ಯತೆಯನ್ನು ಸಮತೋಲನಗೊಳಿಸುತ್ತಾರೆ, ಆದರೆ ಪಂತ್ ಇಲ್ಲಿ ವಿಫಲರಾದರು ಎಂದು ಕೈಫ್ ಬೊಟ್ಟು ಮಾಡಿದ್ದಾರೆ.
ಇದನ್ನೂ ಓದಿ: ಸಿಕ್ಸರ್ ಸಿರಾಜ್… ಬ್ಯಾಟಿಂಗ್ನಲ್ಲೂ ಮಿಯಾ ಮ್ಯಾಜಿಕ್!
ದಿಢೀರ್ ಕುಸಿತ!
ರಿಷಭ್ ಪಂತ್ ಅವರ ಈ ಬೇಜವಾಬ್ದಾರಿಯುತ ವಿಕೆಟ್ ಪತನದ ಬೆನ್ನಲ್ಲೇ ಭಾರತದ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡುಬಂದಿತು. ಭಾರತ ತಂಡ ಕೇವಲ 70 ರನ್ಗಳ ಅಂತರದಲ್ಲಿ 4 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಮೊದಲ ಇನ್ನಿಂಗ್ಸ್ನಲ್ಲಿ ಭಾರತ 460/9 ರನ್ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆಯಾದರೂ, ಪಂತ್ ಅವರ ವಿಕೆಟ್ ಶ್ರೀಲಂಕಾ ತಂಡಕ್ಕೆ ಪಂದ್ಯದಲ್ಲಿ ಕಂಬ್ಯಾಕ್ ಮಾಡಲು ಅನಗತ್ಯವಾಗಿ ಅವಕಾಶ ಮಾಡಿಕೊಟ್ಟಿತು. ಪಂತ್ ತಮ್ಮ ಆಕ್ರಮಣಕಾರಿ ಆಟದ ಶೈಲಿಯನ್ನು ಉಳಿಸಿಕೊಂಡೇ, ಪರಿಸ್ಥಿತಿಗೆ ತಕ್ಕ ಜವಾಬ್ದಾರಿಯುತ ಆಟವನ್ನು ಕಲಿಯಬೇಕಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.




