AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಬೌಲರ್ ಪರ ಅಶ್ವಿನ್ ಬ್ಯಾಟಿಂಗ್

Usman Tariq - Ashwin: ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಭಾರತೀಯ ಆಟಗಾರ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನೆಗಳನ್ನೆತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವುದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂಬುದು ವಿಶೇಷ. ಅದು ಕೆಲ ಪ್ರಶ್ನೆಗಳನ್ನು ಮುಂದಿಡುವ ಮೂಲಕ. 

ಪಾಕ್ ಬೌಲರ್ ಪರ ಅಶ್ವಿನ್ ಬ್ಯಾಟಿಂಗ್
Usman Tariq - Ashwin
ಝಾಹಿರ್ ಯೂಸುಫ್
|

Updated on: Feb 11, 2026 | 11:58 AM

Share

ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗೆಗಿನ ಚರ್ಚೆ ಮುಂದುವರೆದಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲೂ ಉಸ್ಮಾನ್ ತಾರಿಖ್ ತನ್ನ ವಿಳಂಬ ರೀತಿಯ ಬೌಲಿಂಗ್​ಗೆ ಶೈಲಿಯನ್ನು ಮುಂದುವರೆಸಿದ್ದಾರೆ. ಇದನ್ನೇ ಭಾರತೀಯ ಕ್ರಿಕೆಟಿಗ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

“ಫುಟ್​ಬಾಲ್ ಆಟಗಾರರಿಗೆ ಪೆನಾಲ್ಟಿ ರನ್-ಅಪ್ ಸಮಯದಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಇದು ಹೇಗೆ ಸರಿ? ಆಕ್ಷನ್ – ಎಲ್ಲವೂ ಒಳ್ಳೆಯದು. ಆದರೆ ಈ ವಿರಾಮ? ಅದು ಕೂಡ ಚೆಂಡೆಸೆಯುವ ಮುನ್ನ. ಇದು ಗಂಭೀರ ವಿಷಯ, ಇದನ್ನೆಲ್ಲಾ ಮುಂದುವರೆಸಲು ಅನುಮತಿಸಬಾರದು!” ಎಂಬಾರ್ಥದಲ್ಲಿ ಶ್ರೀವಾಸ್ತವ್ ಗೋಸ್ವಾಮಿ X ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್, “ಫುಟ್​ಬಾಲ್​ನಲ್ಲಿ ಇದನ್ನು ಅನುಮತಿಸುವುದಿಲ್ಲ ಎಂಬುದನ್ನು ಒಪ್ಪಿಕೊತ್ತೇನೆ! ಆದರೆ ಬ್ಯಾಟರ್ ತನ್ನ ಸ್ಟಾನ್ಸ್ ತೆಗೆದುಕೊಂಡ ನಂತರ, ಅಂಪೈರ್ ಅಥವಾ ಬೌಲರ್‌ಗೆ ತಿಳಿಸದೆ ಸ್ವಿಚ್ ಹಿಟ್ ಅಥವಾ ರಿವರ್ಸ್ ಶಾಟ್ ಹೊಡೆಯಲು ಅನುಮತಿಸಲಾಗುತ್ತದೆ.

ಬ್ಯಾಟರ್​ಗೆ ಹೀಗೆ ಅನುಮತಿಸಬಹುದಾದರೆ, ನಿರ್ಬಂಧಗಳು ಬೌಲರ್‌ಗೆ ಮಾತ್ರ ಏಕೆ ಸೀಮಿತವಾಗಿವೆ?. ವಾಸ್ತವವಾಗಿ ಬೌಲರ್ ಅಂಪೈರ್‌ಗೆ ತಿಳಿಸದೆ ತಾನು ಬೌಲ್ ಮಾಡುವ ತೋಳನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ!  ಮೊದಲು ಆ ನಿಯಮವನ್ನು ಬದಲಾಯಿಸಬೇಕು” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಪಾಕಿಸ್ತಾನ್ ಸ್ಪಿನ್ನರ್​ನ ಲೇಟ್ ಎಸೆತಗಳನ್ನು ರವಿಚಂದ್ರನ್ ಅಶ್ವಿನ್ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಅಂದರೆ ಇಲ್ಲಿ ಬ್ಯಾಟರ್​ಗಳು ಚೆಂಡೆಸೆದ ಬಳಿಕ ಯಾವುದೇ ರೀತಿಯಲ್ಲೂ ಬೇಕಿದ್ದರೂ ಬ್ಯಾಟ್ ಬೀಸಬಹುದು. ಉದಾಹರಣೆಗೆ ರೈಟ್ ಹ್ಯಾಂಡ್ ಬ್ಯಾಟರ್, ಚೆಂಡು ಬರುವಾಗ ಲೆಫ್ಟ್ ಹ್ಯಾಂಡ್ ಆಗಿ ಬ್ಯಾಟ್ ಬೀಸಲು ಅವಕಾಶವಿದೆ.

ಆದರೆ ಬೌಲರ್​ಗಳಿಗೆ ಇಂತಹ ಯಾವುದೇ ಆಯ್ಕೆ ಇಲ್ಲ. ಒಂದು ವೇಳೆ ಬೌಲರ್ ಬಲಗೈ ಬದಲು ಎಡಗೈನಲ್ಲಿ ಚೆಂಡೆಸೆಯಲು ಮುಂದಾದರೆ ಅಂಪೈರ್​ಗೆ ತಿಳಿಸಬೇಕು. ಅದೇ ಬ್ಯಾಟರ್​ ಸ್ವಿಚ್ ಹಿಟ್ ಅಥವಾ ರಿವರ್ಸ್ ಸ್ವೀಪ್ ಮಾಡುತ್ತೇನೆ ಎಂಬುದನ್ನು ಅಂಪೈರ್​ಗೆ ತಿಳಿಸುವ ಅವಶ್ಯಕತೆಯಿಲ್ಲ. ಅಂದರೆ ಇಲ್ಲಿ ಬ್ಯಾಟರ್ ಕೂಡ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸುವುದಲ್ಲವೇ? ಇದಾಗ್ಯೂ ಎಲ್ಲಾ ನಿಯಮಗಳು ಬೌಲರ್​ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.

ಇತ್ತ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಉಸ್ಮಾನ್ ತಾರಿಖ್ ಈಗಾಗಲೇ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ ಲೇಟ್ ಎಸೆತಗಳ ಮೂಲಕ ಬ್ಯಾಟರ್​​ನ ಮೂವ್​ಮೆಂಟ್​ ಗ್ರಹಿಸುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೆ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

ಆದರೆ ಉಸ್ಮಾನ್ ತಾರಿಖ್​ಗೂ ಮುನ್ನವೇ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಅಂಗಳದಲ್ಲಿ ಇಂತಹ ಲೇಟ್ ಎಸೆತಗಳನ್ನು ಎಸೆದಿದ್ದರು ಎಂಬುದೇ ಸತ್ಯ. 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ತಂಡಕ್ಕೆ 6 ರನ್ ಬೇಕಿದ್ದಾಗ ಅಶ್ವಿನ್ ಲೇಟ್ ಎಸೆತದ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದೀಗ ಉಸ್ಮಾನ್ ತಾರಿಖ್​ಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಅಶ್ವಿನ್ ಅವರ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.