Ravi Shastri: ರವಿಶಾಸ್ತ್ರಿ- ಗ್ರೇಗ್ ಚಾಪೆಲ್ ನಡುವಣ ಫೋನ್ ಸಂಭಾಷಣೆ ರಿವೀಲ್ ಮಾಡಿದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್
R. Shridhar: ರವಿಶಾಸ್ತ್ರಿ ಜೊತೆಯಲ್ಲೇ ಫೀಲ್ಡಿಂಗ್ ಕೋಚ್ ಆಗಿ ನಿವೃತ್ತಿ ಪಡೆದಿರುವ ಆರ್. ಶ್ರೀಧರ್ ಇದೀಗ ವಿಶೇಷ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ. ಶಾಸ್ತ್ರಿ ಹಾಗೂ ಮಾಜಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಗ್ರೇಗ್ ಚಾಪೆಲ್ ನಡುವಣ ಮಾತುಕತೆ ಬಗ್ಗೆ ಮಾತನಾಡಿದ್ದಾರೆ.

ರವಿಶಾಸ್ತ್ರಿ (Ravi Shastri) ಅವರು ಕ್ರಿಕೆಟ್ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಕಾಮೆಂಟೇಡರ್ ಆಗಿ ಸೇವೆಸಲ್ಲಿಸುತ್ತಿರುವ ಹೊತ್ತಿಗೆ ಟೀಮ್ ಇಂಡಿಯಾದ ಕೋಚ್ (Team India coach) ಆಗಿ ಆಯ್ಕೆ ಆದರು. ಭಾರತ ಕ್ರಿಕೆಟ್ ತಂಡಕ್ಕೆ ಇವರು ಬರೋಬ್ಬರಿ 7 ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಟಿ20 ವಿಶ್ವಕಪ್ (T20 World Cup) ಮುಕ್ತಾಯದ ಬೆನ್ನಲ್ಲೇ ಇವರ ಹೆಡ್ ಕೋಚ್ ಅವಧಿ ಕೂಡ ಕೊನೆಗೊಂಡಿತು. ಶಾಸ್ತ್ರಿ ಮಾರ್ಗದರ್ಶನದ ಅಡಿಯಲ್ಲಿ ಭಾರತ ತಂಡ ಪ್ರಚಂಡ ಸಾಧನೆಗಳನ್ನೇ ಮಾಡಿದೆ. ವಿರಾಟ್ ಕೊಹ್ಲಿ (Virat Kohli) – ರವಿಶಾಸ್ತ್ರಿ ಜೋಡಿ ತಂಡಕ್ಕೆ ಅಪಾರ ಮರೆಯಲಾಗದ ಕೊಡುಗೆ ನೀಡಿದೆ. ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ನಂ.1 ತಂಡವಾಗಿ ಮೆರೆದಾಟ ನಡೆಸಿತ್ತಲ್ಲದೆ, ಆಸ್ಟ್ರೇಲಿಯಾ ನೆಲದಲ್ಲಿ ಬ್ಯಾಕ್ ಟು ಬ್ಯಾಟ್ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಹೀಗಿರುವಾಗ ಶಾಸ್ತ್ರಿ ಜೊತೆಯಲ್ಲೇ ಫೀಲ್ಡಿಂಗ್ ಕೋಚ್ ಆಗಿ ನಿವೃತ್ತಿ ಪಡೆದಿರುವ ಆರ್. ಶ್ರೀಧರ್ (R. Shridhar) ವಿಶೇಷ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.
ಆರ್. ಶ್ರೀಧರ್ ಕೋಚಿಂಗ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಫೀಲ್ಡಿಂಗ್ ಸಾಕಷ್ಟು ಸುಧಾರಿಸಿದೆ. ಏಳು ವರ್ಷಗಳ ಕಾಲ ಇವರು ಭಾರತಕ್ಕೆ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರಿ ಜೊತೆ ಇವರು ಉತ್ತಮ ಸಂಬಂಧ ಹೊಂದಿದ್ದು ಇಬ್ಬರೂ ಭಾರತ ತಂಡಕ್ಕೆ ತವರಿನಲ್ಲಿ ಮತ್ತು ವಿದೇಶದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೀಧರ್, “ಇದೊಂದು ನನಗೆ ಕಲಿಯಲು ಸಿಕ್ಕ ಉತ್ತಮ ಅವಕಾಶವಾಗಿತ್ತು. ನನಗೆ ಕೆಟ್ಟ ದಿನಗಳು ಕೋಚ್ ಆಗಿ ಕಾರ್ಯನಿರ್ವಹಿಸಲು ಹೆಚ್ಚು ನೆರವಾಗುತ್ತದೆ. ಕೋಚ್ ಎಂದರೆ ಒಬ್ಬ ಮನುಷ್ಯನನ್ನು ಮೊದಲು ಅರ್ಥ ಮಾಡಿಕೊಳ್ಳುವಂತಹ ಸಾಮರ್ಥ್ಯ ಇರಬೇಕು. ಆಟಗಾರರ ಜೊತೆ ಉತ್ತಮ ಸಂಬಂಧವನ್ನು ಬೆಳೆಸಬೇಕು. ತಾಂತ್ರಿಕವಾಗಿ ಮತ್ತು ಮಾನಸಿಕವಾಗಿ ತರಬೇತಿ ನೀಡಬೇಕು” ಎಂದು ಹೇಳಿದ್ದಾರೆ.
“ನಿಮಗೆ ತಂಡದ ಬಗ್ಗೆ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುತ್ತದೆ. ಆದರೆ, ಸತತ ಸೋಲು ಅನುಭವಿಸಿದ ಕೆಲ ಕೆಟ್ಟ ದಿನಗಳಲ್ಲಿ ನೀವು ಹೇಗಿರುತ್ತೀರಿ, ಕೋಚ್ ಆಗಿ ಆಗ ನೀವೇನು ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಆ ಸಂದರ್ಭದಲ್ಲಿ ನಮ್ಮ ತಂಡ ಅತ್ಯುತ್ತಮವಾಗಿತ್ತು” ಎಂಬುದು ಶ್ರೀಧರ್ ಮಾತು.
ಇನ್ನು ಇದೇವೇಳೆ ರವಿಶಾಸ್ತ್ರಿ ಹಾಗೂ ಟೀಮ್ ಇಂಡಿಯಾದದಲ್ಲಿ ಈ ಹಿಂದೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಗ್ರೇಗ್ ಚಾಪೆಲ್ ನಡುವಣ ಮಾತುಕತೆ ಬಗ್ಗೆ ಶ್ರೀಧರ್ ಮಾತನಾಡಿದ್ದಾರೆ. “ಇತ್ತೀಚೆಗಷ್ಟೆ ಗ್ರೇಗ್ ಚಾಪೆಲ್ ಶಾಸ್ತ್ರಿ ಅವರಿಗೆ ಕರೆ ಮಾಡಿದ್ದರು. ‘ನೀವು ಇಷ್ಟು ಸೋಲು ಕಂಡರೂ ಅದುಹೇಗೆ ಒಮ್ಮೆಲೆ ಪುಟಿದೇಳುತ್ತೀರಿ’ ಎಂದು ಚಾಪೆಲ್ ಕೇಳಿದರು. ಭಾರತ ತಂಡದ ಪ್ಲಸ್ ಪಾಯಿಂಟ್ ಇದುವೇ. ಪ್ರತಿ ಕೆಟ್ಟ ದಿನವನ್ನು ಸೋತ ಪಂದ್ಯದಿಂದ ಸಾಕಷ್ಟು ವಿಚಾರಗಳನ್ನು ಕಲಿತು ತಪ್ಪನ್ನು ಸರಿ ಪಡಿಸುತ್ತೇವೆ” ಎಂದು ಶ್ರೀಧರ್ ಹೇಳಿದ್ದಾರೆ.
(Ravi Shastri: R Sridhar recalled a conversation between former India coach Greg Chappell and Ravi Shastri)