
ಭಾರತೀಯ ಕ್ರಿಕೆಟ್ನ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ಆರಂಭಕ್ಕೂ ಮುನ್ನ ಹಠಾತ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅಶ್ವಿನ್ ರಿಟೈನ್ ಪ್ರಕ್ರಿಯೆಗೂ ಮುನ್ನ ನಿವೃತ್ತಿ ಘೋಷಿಸಿದ್ದರು. ಇದಕ್ಕೇನು ಕಾರಣ ಎಂಬುದನ್ನು ಅಶ್ವಿನ್ ತಮ್ಮಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೇಲಿನ ಅಭಿಮಾನಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ತನ್ನ ನಿವೃತ್ತಿಯ ಹಿಂದೆ ಕೇವಲ ವಯಸ್ಸಿನ ಕಾರಣವಿಲ್ಲ, ಬದಲಾಗಿ ತಂಡದ ಭವಿಷ್ಯದ ಯೋಜನೆಗಳನ್ನು ಸಹ ನಾನು ಪರಿಗಣಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ “ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಕೈಬಿಡಬೇಕೇ ಎಂಬ ಗೊಂದಲ ಸಿಎಸ್ಕೆ ಮ್ಯಾನೇಜ್ಮೆಂಟ್ಗೆ ಬೇಡ ಎಂದು ನಾನು ಭಾವಿಸಿದೆ. ನನ್ನ ನಿವೃತ್ತಿಯಿಂದ ಅವರಿಗೆ ಆ ತಲೆನೋವು ತಪ್ಪಲಿದೆ,” ಎಂದು ನನಗೆ ಗೊತ್ತಿತ್ತು.
ಅಷ್ಟೇ ಅಲ್ಲದೆ ನನ್ನ ಈ ನಿರ್ಧಾರದಿಂದ ಸಿಎಸ್ಕೆ ತಂಡಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಪರ್ಸ್ ಮೊತ್ತ ಉಳಿತಾಯವಾಗಲಿದೆ. ಈ ಹಣವನ್ನು ತಂಡವು ಹರಾಜಿನಲ್ಲಿ ಯುವ ಪ್ರತಿಭೆಗಳನ್ನು ಖರೀದಿಸಲು ಬಳಸಿಕೊಳ್ಳಬಹುದು ಎಂಬುದು ನನ್ನ ಆಶಯವಾಗಿತ್ತು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಇದೇ ವೇಳೆ 2025ರ ಸೀಸನ್ ತಮಗೆ ಮಾನಸಿಕವಾಗಿ ಸ್ವಲ್ಪ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿರುವ ಅವರು, ತಂಡಕ್ಕೆ ಆಡುವಾಗ ಪೂರ್ಣ ಪ್ರಮಾಣದ ಭಾವನಾತ್ಮಕ ಬೆಂಬಲ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ನೋವು ಕೂಡ ನನ್ನಲ್ಲಿತ್ತು. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ನಿವೃತ್ತಿ ನಿರ್ಧಾರ ತೆಗೆದುಕೊಂಡೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ 2026ರ ಐಪಿಎಲ್ ಆವೃತ್ತಿಯಲ್ಲಿ ಅಶ್ವಿನ್ ಅವರು ಹಿಂದಿ ಕಾಮೆಂಟರಿ ಪ್ಯಾನೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಚೆಂಡಿನ ಮೂಲಕ ಮ್ಯಾಜಿಕ್ ಮಾಡುತ್ತಿದ್ದ ಅಶ್ವಿನ್, ಈಗ ತಮ್ಮ ವಿಶ್ಲೇಷಣೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಇನ್ನು ಐಪಿಎಲ್ ಮುಗಿದ ಬಳಿಕ ಅಮೆರಿಕನ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯಲು ಅಶ್ವಿನ್ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾ ಎಡವಟ್ಟು… ಅವೇಶ್ ಖಾನ್ಗೆ ಬ್ಯಾನ್ ಭೀತಿ..!
“ನನಗೆ ಇನ್ನೂ ಐಪಿಎಲ್ ಆಡುವ ಆಸೆ ಇತ್ತು, ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ತಂಡದ ಹಿತದೃಷ್ಟಿಯಿಂದ ನಿವೃತ್ತಿ ಅನಿವಾರ್ಯವಾಗಿತ್ತು,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ಅಶ್ವಿನ್ ಅವರ ಈ ನಿಸ್ವಾರ್ಥ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.